ಕುಂದಾಪುರ: ನಕಲಿ ಸಹಿ, ದಾಖಲೆ ಸೃಷ್ಟಿಸಿ ಸಾಲ ಪಡೆದು ವಂಚನೆ ಆರೋಪ
ಕುಂದಾಪುರ: ನಕಲಿ ದಾಖಲೆ ಸೃಷ್ಟಿಸಿ ಸೊಸೈಟಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಉದಯ್ ಮೆಂಡನ್ ಎಂಬುವರ ವಿರುದ್ಧ ಕುಂದಾಪುರ ತಾಲೂಕು ಹಂಗಳೂರಿನಲ್ಲಿರುವ ಶ್ರೀಮೂಕಾಂಬಿಕಾ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಇದರ ಕಾರ್ಯನಿರ್ವಾಹಣಾಧಿಕಾರಿ ಮನೋರಂಜನ್ ದಾಸ್ ಶೆಟ್ಟಿ ದೂರು ನೀಡಿದ್ದಾರೆ.
ದೂರಿನ ಸಾರಾಂಶ: ಆರೋಪಿ ಉದಯ ಮೆಂಡನ್ ಎನ್ನುವರು ಈ ಸೊಸೈಟಿಯ ಸದಸ್ಯರಾಗಿದ್ದು, ಅವರ ಜಮೀನು ಹಕ್ಕಿನ ಕುಂದಾಪುರದ ವಡೇರಹೋಬಳಿ ಗ್ರಾಮದ ಸರ್ವೆ ನಂಬ್ರ 166/1 ರಲ್ಲಿ 15 ಸೆಂಟ್ಸ್ ವಿಸ್ತೀರ್ಣದ ಜಾಗವನ್ನು ಅಡಮಾನ ಮಾಡಿ 2015 ನವೆಂರ್ವ ತಿಂಗಳಿನಲ್ಲಿ 21 ಲಕ್ಷ ರೂಪಾಯಿ ಸಾಲ ಪಡೆದುಕೊಂಡು ಜಮೀನಿನ ಹಕ್ಕಿನ ಕಾಗದ ಪತ್ರವನ್ನು ಸೊಸೈಟಿಯಲ್ಲಿ ಒತ್ತೆಯಾಗಿರಿಸಿ ನೋಂದಣಿ ಕಚೇರಿಯಲ್ಲಿ ನೋಂದಾವಣೆಯಾದ ಅಡಮಾನ ಪತ್ರವನ್ನು ಬರೆದುಕೊಟ್ಟಿದ್ದರು.
ಬಳಿಕ ಸಾಲವನ್ನು ಸಕಾಲದಲ್ಲಿ ಪಾವತಿ ಮಾಡದೇ ಆರೋಪಿಯು ಶ್ರೀ ಮೂಕಾಂಬಿಕಾ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಮೊಹರನ್ನು ಸೃಷ್ಠಿಸಿ ಬಿಡುಗಡೆ ಪತ್ರ ಎನ್ನುವ ಖೋಟಾ ದಾಖಲೆಯನ್ನು ತಯಾರಿಸಿ ಆ ದಾಖಲೆಗೆ ಕಾರ್ಯನಿರ್ವಹಣಾಧಿಕಾರಿಗಳ ನಕಲಿ ಸಹಿ ಮಾಡಿಸಿ ದಾಖಲೆ ಪತ್ರವನ್ನು ಕುಂದಾಪುರ ಉಪನೋಂದಣಾಧಿಕಾರಿಯವರ ಸಮಕ್ಷಮ ನ್ಯಾಯವಾದ ದಾಖಲೆ ಎಂದು ನಂಬಿಸಿ ದಸ್ತಾವೇಜಿನಲ್ಲಿ ನೋಂದಾಯಿಸಿಕೊಂಡು ಈ ನಕಲಿ ದಾಖಲಾತಿಯ ಆಧಾರದ ಮೇಲೆ ಕುಂದಾಪುರದ ಮಿತ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ (ನಿ) ಕುಂದಾಪುರದಲ್ಲಿ ಮತ್ತೆ 10 ಲಕ್ಷ ರೂಪಾಯಿ ಸಾಲ ಪಡೆದುಕೊಂಡು ಕುಂದಾಪುರ ತಾಲೂಕು ಶ್ರೀ ಮೂಕಾಂಬಿಕಾ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಕುಂದಾಪುರ ಸಂಸ್ಥೆಗೆ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







