ಕರಾವಳಿಯನ್ನು ಬಿಜೆಪಿ ಹಿಂದುತ್ವದ ಫ್ಯಾಕ್ಟರಿ ಮಾಡಿದೆ: ಸಿದ್ದರಾಮಯ್ಯ
"ಮುಖ್ಯಮಂತ್ರಿ ಅಂದ್ರೆ ಬರೀ ಆರೆಸ್ಸೆಸ್ನ ಮುಖ್ಯಮಂತ್ರಿ ಅಲ್ಲ, 7 ಕೋಟಿ ಜನರ ಮುಖ್ಯಮಂತ್ರಿ"

►ಉಳ್ಳಾಲ, ಮುಡಿಪು ಬ್ಲಾಕ್ ಕಾಂಗ್ರೆಸ್ನಿಂದ ಸಾರ್ವಜನಿಕ ಜನಜಾಗೃತಿ ಸಮಾರಂಭ
ಕೊಣಾಜೆ: ದ.ಕ. ಹಾಗೂ ಉಡುಪಿ ಜಿಲ್ಲೆಯನ್ನು ಬಿಜೆಪಿ ಹಿಂದುತ್ವದ ಫ್ಯಾಕ್ಟರಿ ಮಾಡಿದೆ. ಕೋಮುವಾದ ಹುಟ್ಟೋದೇ ಇಲ್ಲಿಂದ. ಬಿಜೆಪಿ ಇಲ್ಲಿ ಇಂತಹ ಕೆಲಸವನ್ನೇ ಮಾಡಿ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡ್ತಾ ಇದೆ. ದ.ಕ. ಉಡುಪಿ ಜಿಲ್ಲೆಯ ಜನರು ನೆಮ್ಮದಿಯಿಂದ ಇರಬೇಕಾದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಬೇರು ಸಮೇತ ಕಿತ್ತೊಗೆಯುವ ಕೆಲಸವನ್ನು ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ , ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಬೃಹತ್ ಸಾರ್ವಜನಿಕ ಜನಜಾಗೃತಿ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯಮಂತ್ರಿ ಅಂದ್ರೆ ಬರೀ ಆರೆಸ್ಸೆಸ್ನ ಮುಖ್ಯಮಂತ್ರಿ ಅಲ್ಲ, 7 ಕೋಟಿ ಜನರ ಮುಖ್ಯಮಂತ್ರಿ. ದ.ಕ. ಜಿಲ್ಲೆಯಲ್ಲಿ ಹಲವು ಕೊಲೆಗಳು ನಡೆದಿದೆ. ಆದರೆ ಮುಖ್ಯಮಂತ್ರಿ ಬೊಮ್ಮಾಯಿ ಒಂದು ಧರ್ಮದವರ ಮನೆಗೆ ಹೋಗಿ ಪರಿಹಾರ ಕೊಡ್ತಾರೆ. ಈ ತಾರತಮ್ಯ ಸರಿಯಲ್ಲ. ಇಂತಹ ಕೊಲೆಗಡುಕ ಸರಕಾರ ಇರಬೇಕಾ ಬೇಡವಾ ಎಂಬುದನ್ನು 2023ರ ಚುನಾವಣೆಯಲ್ಲಿ ಜನ ತೋರಿಸಿಕೊಡಬೇಕು ಎಂದರು.
ಜಗತ್ತಿನ ನಂ.1 ಜನಸಂಖ್ಯೆವುಳ್ಳ ರಾಷ್ಟ್ರವಾಗುವತ್ತ ದಾಪುಗಾಲಿಟ್ಟಿರುವ ಭಾರತ 140 ಕೋಟಿ ಜನರನ್ನೂ ಸಮಾನಾಗಿ ಕೊಂಡೊಯ್ಯುವ ಸಮಾನತೆ, ಸಮಾನ ಹಕ್ಕು, ಸಮಾನ ಅವಕಾಶ ಕೊಡುವುದನ್ನು ಸಾರಿದ ಸಂವಿಧಾನದ ಪ್ರಕಾರ ನಡೆಯೋದು ಬಿಜೆಪಿಗೆ ಸಹಿಸಲೂ ಸಾಧ್ಯವಾಗುತ್ತಿಲ್ಲ ಎಂದು ಕುಟುಕಿದರು.
ನಳಿನ್ ಕುಮಾರ್ ಕಟೀಲ್ ವಿಧೂಷಕ. ಈ ನಾಡಿನ ಹೆಮ್ಮೆಯ ಕಲೆಯಾಗಿರುವ ಯಕ್ಷಗಾನದಲ್ಲಿ ಬಿಜೆಪಿ ವಿಚಾರಗಳನ್ನೆ ಹೇಳಲು ಕರೆ ಕೊಡ್ತಾರೆ. ಇಂತಹ ಕಲೆಯೊಳಗೆ ಕೋಮುವಾದ ವಿಚಾರಗಳನ್ನು ಹರಡಲು ಇವರಿಗೆ ನಾಚಿಕೆಯಾಗುವುದಿಲ್ಲವೇ? ಸಂವಿಧಾನವನ್ನು ವಿರೋಧಿಸುವ ಇವರಿಗೆ ಜನಪ್ರತಿನಿಧಿಯಾಗಲು ಅರ್ಹತೆಯಿಲ್ಲ ಎಂದರು.
ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಈ ರಾಷ್ಟ್ರವನ್ನು ಮಾರುವುದಕ್ಕೆ ಮುಂಚೆ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಬಿಜೆಪಿಯವರ ಕೈಗೆ ಅಧಿಕಾರ ಕೊಟ್ಟರೆ ಮಕ್ಕಳ ಕೈಗೆ ಪೆನ್ ಕೊಡಲ್ಲ, ಬದಲಿಗೆ ಚೂರಿ, ತಲ್ವಾರ್ ಕೊಡ್ತಾರೆ. ಇಂದು ಎಲ್ಲಾ ಕಡೆಯಲ್ಲೂ ಬಿಜೆಪಿ ಕೋಮುದಳ್ಳೂರಿ ಮಾಡಿ ಅಧಿಕಾರ ಮಾಡ್ತಾ ಇರೋದನ್ನ ಕಾಣ್ತಾ ಇದ್ದೇವೆ. ನಮ್ಮ ದೇಶವನ್ನು ಕಾಪಾಡಬೇಕಾದರೆ ಬಿಜೆಪಿ ಸರಕಾರವನ್ನು ಕಿತ್ತೊಗೆದು ಜಾತ್ಯಾತೀತ ಪಕ್ಷ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವಂತೆ ಮಾಡಬೇಡಕಿದೆ ಎಂದರು.
ರಾಜ್ಯ ವಿಧಾನ ಸಭೆಯ ಪ್ರತಿಪಕ್ಷ ಉಪ ನಾಯಕ, ಶಾಸಕ ಯು.ಟಿ. ಖಾದರ್ ಮಾತನಾಡಿ, ದ.ಕ.ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಜಯಸಾಧಿಸಲಿದೆ. ಈ ವಿಜಯದ ಪಯಣ ಇಲ್ಲಿಂದ ಆರಂಭವಾಗಲಿದೆ ಎಂದು ಹೇಳಿದರು.
ಹರೇಕಳ ಅಡ್ಯಾರ್ ಸಂಪರ್ಕಿಸುವ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣವು ಸಂಪರ್ಕದ ಕೊಂಡಿಯಾಗಿರುವುದರ ಜೊತೆಗೆ ಈ ಭಾಗದ ಭವಿಷ್ಯದ ನೀರಿನ ಸಮಸ್ಯೆಯನ್ನು ಪರಿಹರಿಸಲಿದೆ. ಗ್ರಾಮೀಣ ರಸ್ತೆ, ಕುಡಿಯುವ ನೀರು ಸೇರಿದಂತೆ ಎಲ್ಲಾ ಅಭಿವೃದ್ಧಿಯ ಕೆಲಸಗಳು ನಡೆದಿದೆ. ಇದಕ್ಕೆಲ್ಲಾ ಕಾರಣ ಈ ಉಳ್ಳಾಲ ಜನರ ಶಾಂತಿ ಸೌಹಾರ್ದತೆ. ಎಲ್ಲರನ್ನೂ ಜೋಡಿಸುವ ಪಕ್ಷವೊಂದಿದ್ದರೆ ಅದು ಕಾಂಗ್ರೆಸ್ ಮಾತ್ರ ಎಂದರು.
ಕೆಪಿಸಿಸಿ ವಕ್ತಾರ ನಿಖಿತ್ ರಾಜ್ ಮೌರ್ಯ ಮಾತನಾಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವರಾದ ರಮಾನಾಥ ರೈ, ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಕೋಡಿಜಾಲ್ ಇಬ್ರಾಹೀಂ, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ಕಣಚೂರು ಮೋನು, ಪ್ರಶಾಂತ್ ಕಾಜವ, ಸದಾಶಿವ ಉಳ್ಳಾಲ, ಯುವ ಕಾಂಗ್ರೆಸ್ನ ಮಿಥುನ್ ರೈ, ಹರ್ಷ ರಾಜ್ ಮುದ್ಯ, ಮುಹಮ್ಮದ್ ಮೋನು, ಇನಾಯತ್ ಅಲಿ, ಶಶಿಧರ್ ಹೆಗ್ಡೆ, ಶಾಹುಲ್ ಹಮೀದ್, ಹರೇಕಳ ಗ್ರಾಪಂ ಅಧ್ಯಕ್ಷ ಬದ್ರುದ್ದೀನ್ ಹರೇಕಳ, ಮುಹಮ್ಮದ್ ಮುಸ್ತಫಾ ಹರೇಕಳ ಉಪಸ್ಥಿತರಿದ್ದರು.
ಮಮತಾ ಡಿ.ಎಸ್.ಗಟ್ಟಿ ಸ್ವಾಗತಿಸಿದರು.
'ಖಾದರ್ ಬಹಳ ಒಳ್ಳೆ ಕೆಲಸ ಮಾಡ್ತಾ ಇದ್ದಾರೆ'
ಶಾಸಕ ಯುಟಿ.ಖಾದರ್ ಬಹಳ ಒಳ್ಳೆ ಕೆಲಸ ಮಾಡ್ತಾ ಇದ್ದಾರೆ. ಅವರ ನೇತೃತ್ವದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಕಂಡಿದೆ. ಯಾರಿಗೆ ಜನಪರ ಕಾಳಜಿ, ಸಮಾಜ ಪರ ಕಾಳಜಿ ಇರುತ್ತದೋ ಅವರು ಸಮಾಜದ ಅಭಿವೃದ್ಧಿಯ ಕಾರ್ಯದಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ ಎನ್ನುವುದಕ್ಕೆ ಖಾದರ್ ಸಾಕ್ಷಿಯಾಗಿದ್ದಾರೆ. ಆ ಕಾರಣದಿಂದ ತಮ್ಮ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.