ಚೌಡೇಶ್ವರಿ ಹಾಗೂ ಸೈಯದ್ ಸಾದತ್ ದರ್ಗಾ ಹುಂಡಿ ಹಣ ಎಣಿಕೆಗೆ ಆಗಮಿಸಿದ ತೀರ್ಥಹಳ್ಳಿ ತಹಶೀಲ್ದಾರ್ ಗೆ ಘೇರಾವ್
ಶಿವಮೊಗ್ಗ, ಜ.6: ಇಲ್ಲಿನ ಶ್ರೀ ಭೂತರಾಯ ಚೌಡೇಶ್ವರಿ ಹಾಗೂ ಸೈಯದ್ ಸಾದತ್ ದರ್ಗಾದ ಹುಂಡಿ ಎಣಿಕೆ ಕಾರ್ಯಕ್ಕೆ ಆಗಮಿಸಿದ್ದ ತಹಶೀಲ್ದಾರ್ ಅವರಿಗೆ ಸ್ಥಳೀಯರು ಘೇರಾವ್ ಹಾಕಿದ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆ ಕಟ್ಟೆಯಲ್ಲಿ ನಡೆದಿದೆ.
ತಹಶೀಲ್ದಾರ್ ಅಮೃತ್ ಅತ್ರೇಶ್ ಗುರುವಾರ ಹುಂಡಿ ಎಣಿಕೆ ಕಾರ್ಯಕ್ಕಾಗಿ ಹಣಗೆರೆಯ ಭಾವೈಕ್ಯದ ಶ್ರದ್ಧಾ ಕೇಂದ್ರಕ್ಕೆ ಆಗಮಿಸಿದ್ದರು. ಈ ವೇಳೆ ಸ್ಥಳೀಯರು ಅವರಿಗೆ ಘೇರಾವ್ ಹಾಕಿದರು. ತಮ್ಮ ಬೇಡಿಕೆ ಈಡೇರಿಸದಿರುವ ಕುರಿತು ತರಾಟೆಗೆ ತೆಗೆದುಕೊಂಡರು.
ಬೇಡಿಕೆ ಈಡೇರಿಸಿಲ್ಲ:
ಹಣಗೆರೆಯ ಶ್ರದ್ಧಾಕೇಂದ್ರಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ ಇಲ್ಲಿ ಮೂಲ ಸೌಕರ್ಯಗಳಿಲ್ಲ. ಭಕ್ತರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಇಲ್ಲ. 2 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಿ ಉದ್ಘಾಟಿಸಲಾಗಿದೆ. ಆದರೆ ಅದು ಉಪಯೋಗಕ್ಕೆ ಲಭ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಕಳ್ಳತನ ಪ್ರಕರಣಗಳು, ಗಲಾಟೆಗಳು ಹೆಚ್ಚಾಗಿವೆ. ಇಲ್ಲಿ ಪೊಲೀಸ್ ಚೌಕಿ ನಿರ್ಮಿಸುವಂತೆ ಹತ್ತಾರು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಮಹಿಳೆಯರು, ಮಕ್ಕಳಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ ಸರಿಯಿಲ್ಲ. ಚಪ್ಪಲಿ ಸ್ಟ್ಯಾಂಡ್ ಇಲ್ಲ. ದೇಗುಲದೊಳಗೆ ಸರತಿಯಲ್ಲಿ ಹೋಗಿ ಬರುವ ವ್ಯವಸ್ಥೆ ಇಲ್ಲ. ಪುಷ್ಕರಣಿಯನ್ನು ಸ್ವಚ್ಛಗೊಳಿಸುತ್ತಿಲ್ಲ ಎಂದು ಸಾಲು ಸಾಲು ಸಮಸ್ಯೆಗಳನ್ನು ತಹಶೀಲ್ದಾರ್ ಗಮನಕ್ಕೆ ತೆರಲಾಯಿತು.
ವಾಗ್ವಾದ:
ತಹಶೀಲ್ದಾರ್ ಅಮೃತ್ ಅತ್ರೇಶ್ ಅವರೊಂದಿಗೆ ಸ್ಥಳೀಯರು ಸುಮಾರು 2 ಗಂಟೆ ಹೊತ್ತು ವಾಗ್ವಾದ ನಡೆಸಿದರು. ದೇವಸ್ಥಾನದ ಹಣ ಬೇಕು, ಆದರೆ ಇಲ್ಲಿ ಅಭಿವೃದ್ಧಿ, ಭದ್ರತೆ ಬೇಡವೆ ಎಂದು ಪ್ರಶ್ನಿಸಿದರು. 10 ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ತಹಶೀಲ್ದಾರ್ ಭರವಸೆ ನೀಡಿದ ಬಳಿಕ ಹುಂಡಿಯಲ್ಲಿ ಕಾಣಿಕೆ ಎಣಿಕೆಗೆ ಅವಕಾಶ ಕಲ್ಪಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋದಾ ಸುರೇಶ್, ಸದಸ್ಯರಾದ ರಾಘವೇಂದ್ರ, ಲೋಕೇಶ್, ಮಾಜಿ ಅಧ್ಯಕ್ಷ ಕೆರೆಹಳ್ಳಿ ರಾಮಪ್ಪ, ಪ್ರಮುಖರಾದ ಸುನೀಲ್ ಕುಮಾರ್ ಶಿರನಲ್ಲಿ, ಕುಣಜೆ ಕಿರಣ್ ಪ್ರಭಾಕರ್, ಟಿ.ಪಿ.ನಾರಾಯಣಪ್ಪ ಸೇರಿ ಹಲವರು ಇದ್ದರು.