ಸರಕಾರಿ ಶಾಲೆಗಳಲ್ಲಿ ಮರೀಚಿಕೆಯಾಗಿರುವ ಮೂಲಭೂತ ಸೌಲಭ್ಯಗಳು

ಕುಡಿಯಲು ಯೋಗ್ಯವಾದ ನೀರು, ಶೌಚಾಲಯ ಹಾಗೂ ಅದಕ್ಕೆ ನೀರಿನ ವ್ಯವಸ್ಥೆ, ಪಾಠ ಕೇಳಲು ಒಂದು ಗಟ್ಟಿಮುಟ್ಟಾದ ಸೂರು ಇವಿಷ್ಟು ಒಂದು ಶಾಲೆಗೆ ಇರಲೇಬೇಕಾದ ಅತ್ಯವಶ್ಯಕ ಸೌಲಭ್ಯಗಳಾಗಿವೆ. ಮಕ್ಕಳು ಕುಡಿಯಲು ನೀರನ್ನು ಮನೆಯಿಂದ ತೆಗೆದುಕೊಂಡು ಹೋಗಬಹುದು. ಆದರೆ ಶೌಚಾಲಯಗಳು ಇಲ್ಲದೆ ಹೋದರೆ ಮಕ್ಕಳು ಪರದಾಡುವಂತಾಗುತ್ತದೆ.
ಇತ್ತೀಚೆಗೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಗಣನೀಯವಾಗಿ ಇಳಿಕೆಯಾಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ. ಕೆಲ ಶಾಲೆಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಇದ್ದು, ಶಿಕ್ಷಕರು ಶಾಲೆಗೆ ಮಕ್ಕಳನ್ನು ಕರೆತರಲು ಪ್ರಯಾಸ ಪಡುತ್ತಿರುತ್ತಾರೆ. ತಮ್ಮ ಆರ್ಥಿಕ ಪರಿಸ್ಥಿತಿ ತಳಮಟ್ಟದಲ್ಲಿದ್ದರೂ ತಮ್ಮ ಮಕ್ಕಳು ಉತ್ತಮ ಪರಿಸರದಲ್ಲಿ, ಒಳ್ಳೆಯ ಶಾಲೆಗಳಲ್ಲಿ ಶಿಕ್ಷಣ ಪಡೆಯಬೇಕೆಂದು ಪಾಲಕರು ಬಯಸುತ್ತಾರೆ. ಸಾಲ ಸೋಲ ಮಾಡಿಯಾದರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಕಾರಣ ಅಲ್ಲಿ ಇರುವ ಸೌಲಭ್ಯಗಳು. ಖಾಸಗಿ ಶಾಲೆಗಳ ಬೇಡಿಕೆಗಳನ್ನು ಈಡೇರಿಸಲು ಅಸಮರ್ಥರಾದವರು ಅನಿವಾರ್ಯವಾಗಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳಿಸುತ್ತಾರೆ.
ಹೆಣ್ಣು ಮಕ್ಕಳು ಅದರಲ್ಲೂ ಪ್ರೌಢಾವಸ್ಥೆಗೆ ಬಂದ ಹೆಣ್ಣು ಮಕ್ಕಳು ಓದುವ ಶಾಲೆ ಶೌಚಾಲಯ ರಹಿತ ಶಾಲೆಯಾಗಿದ್ದಲ್ಲಿ ಅವರು ಪಡುವ ಪಾಡು ಅಷ್ಟಿಷ್ಟಲ್ಲ. ಬಯಲು ಶೌಚಾಲಯವೇ ಅನಿವಾರ್ಯವಾದಾಗ ಮುಜುಗರವೆನ್ನಿಸುತ್ತದೆ. ಪ್ರತೀ ತಿಂಗಳು ಬರುವ ಋತು ಚಕ್ರ, ಎಲ್ಲರ ಕಣ್ಣು ತಪ್ಪಿಸಿ ಅವಸರದಲ್ಲಿ ಕುಳಿತು ಏಳುವ ಕಿರಿಕಿರಿಗಳನ್ನು ಮಕ್ಕಳು ಅನುಭವಿಸಬೇಕಾಗುತ್ತದೆ. ಆ ನಾಲ್ಕು ದಿನಗಳಲ್ಲಿ ಕೆಲ ಹೆಣ್ಣು ಮಕ್ಕಳು ಇರಿಸು ಮುರಿಸಿನಿಂದ ಪಾರಾಗಲು ಶಾಲೆಗೆ ಗೈರು ಹಾಜರಾಗುವುದು ಸಾಮಾನ್ಯ ವಿಷಯವಾಗಿದೆ. ಶೌಚಾಲಯವಿಲ್ಲದ ಸರಕಾರಿ ಶಾಲೆಯೊಂದು ಬಯಲಿನಲ್ಲಿಯೇ ಸೀರೆಯೊಂದನ್ನು ಕಟ್ಟಿ ಅದರ ಮರೆಯಲ್ಲಿ ಮಕ್ಕಳು ಜಲಬಾಧೆಯನ್ನು ತೀರಿಸಿಕೊಳ್ಳಲು ವ್ಯವಸ್ಥೆಯನ್ನು ಮಾಡಿರುವುದು ಇತ್ತೀಚೆಗೆ ವರದಿಯಾಗಿತ್ತು. ಇಂದಿನ ದಿನಗಳಲ್ಲಿ ಸುರಕ್ಷಿತ ಜಾಗವೆನ್ನಿಸಿಕೊಂಡ ನಾಲ್ಕು ಗೋಡೆಗಳ ಮಧ್ಯದಲ್ಲಿಯೂ ಜಲಬಾಧೆಯನ್ನು ತೀರಿಸಿಕೊಳ್ಳಲು ಹೆಣ್ಣು ಮಕ್ಕಳು ಭಯ ಪಡುತ್ತಾರೆ. ಯಾವಾಗ, ಎಲ್ಲಿ ಕ್ಯಾಮರಾ ಕಣ್ಣುಗಳು ಸ್ಥಾಪಿತವಾಗಿರುತ್ತವೆಯೋ ಎಂಬ ಭೀತಿ ಅವರಲ್ಲಿ ಇರುತ್ತದೆ. ಇನ್ನು ಬಯಲಿನಲ್ಲಿ ಹೆಣ್ಣು ಮಕ್ಕಳು ಸುರಕ್ಷೆಯನ್ನು ಹೇಗೆ ತಾನೇ ನಿರೀಕ್ಷಿಸಲು ಸಾಧ್ಯ?
ಕೆಲವು ಸರಕಾರಿ ಶಾಲೆಗಳಲ್ಲಿರುವ ಒಂದೋ ಎರಡೋ ಶೌಚಾಲಯಗಳು ಆ ಶಾಲೆಯ ಶಿಕ್ಷಕ/ಶಿಕ್ಷಕಿಯರಿಗೋ ಹಾಗೂ ಸಿಬ್ಬಂದಿಗೆ ಮಾತ್ರ ಮೀಸಲಾಗಿರುತ್ತವೆ. ಅದಕ್ಕೊಂದು ಬೀಗವನ್ನು ತಗಲಿಸಿ, ಮಕ್ಕಳು ಗಲೀಜು ಮಾಡುತ್ತಾರೆಂಬ ಕಾರಣದಿಂದ ತಮ್ಮ ಉಪಯೋಗಕ್ಕೆ ಮಾತ್ರ ಬಳಸಿಕೊಳ್ಳುತ್ತಾರೆ. ಶಿಕ್ಷಕ/ಶಿಕ್ಷಕಿಯರು ಹೆಣ್ಣು ಮಕ್ಕಳ ಪರಿಸ್ಥಿತಿಯನ್ನು ಅರಿತುಕೊಂಡು ತಮಗಾಗಿ ಮೀಸಲಾಗಿರಿಸಿಕೊಂಡ ಶೌಚಾಲಯಗಳನ್ನು ಮಕ್ಕಳ ಬಳಕೆಗೂ ಬಿಟ್ಟುಕೊಡಬೇಕಾದ ಅವಶ್ಯಕತೆ ಇದೆ. ಕೆಲವೊಮ್ಮೆ ಶಾಲೆಗೆ ಹತ್ತಿರವಿರುವ ವಿದ್ಯಾರ್ಥಿನಿಯರ ಮನೆಯ ಶೌಚಾಲಯಗಳೇ ಇಂತಹ ಹೆಣ್ಣು ಮಕ್ಕಳಿಗೆ ಆಸರೆಯಾಗುತ್ತವೆ.
ಸರಕಾರ ಕೇವಲ ಹೊಸ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವ ಬದಲು ಈಗಿರುವ ಶಾಲೆಗಳ ಗುಣಮಟ್ಟವನ್ನು ತಿಳಿದು ಅವುಗಳ ಕುಂದು-ಕೊರತೆಗಳನ್ನು ಸರಿಪಡಿಸಬೇಕಿದೆ. ಶಿಕ್ಷಕರು ಕಲಿಸುವ ಪಾಠ ಮಕ್ಕಳ ಮಸ್ತಿಷ್ಕಕ್ಕೆ ಇಳಿಯಬೇಕು. ಅದರ ಬದಲಾಗಿ ಮಕ್ಕಳು ತರಗತಿಯಲ್ಲಿ ಕುಳಿತು ಪಾಠ ಕೇಳುವಾಗ ಒತ್ತರಿಸಿ ಬರುವ ಜಲಬಾಧೆಯನ್ನು ತೀರಿಸಿಕೊಳ್ಳಲು ಎಲ್ಲಿ ಹೋಗಬೇಕು? ಯಾವ ಜಾಗ ಸುರಕ್ಷಿತ? ದಾಹವಾದರೆ ನೀರು ಎಲ್ಲಿ ಸಿಗಬಹುದು? ಎಂಬುದನ್ನು ಯೋಚಿಸುತ್ತಿದ್ದರೆ ಪಾಠ ಮಕ್ಕಳ ತಲೆಗೆ ಇಳಿಯುವುದಾದರೂ ಹೇಗೆ?
ಶಾಲೆಗಳು ಹೊಂದಿರುವ ಕುಂದು-ಕೊರತೆಗಳನ್ನು ಆಯಾ ಶಾಲಾ ಶಿಕ್ಷಕರು ಆಗಾಗ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರುತ್ತಿರಬೇಕು. ಮಕ್ಕಳು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಹೆಚ್ಚೆಂದರೆ ತಮಗೆ ಕಲಿಸುವ ಶಿಕ್ಷಕ/ಶಿಕ್ಷಕಿಯರಲ್ಲಿ ಹೇಳಿಕೊಳ್ಳಬಹುದು. ಆದರೆ ಅವು ಕಾರ್ಯರೂಪಕ್ಕೆ ಬರುವಂತೆ ಪ್ರಯತ್ನಿಸುವುದು ಆಯಾ ಶಾಲಾ ಶಿಕ್ಷಕರ ಹಾಗೂ ಸ್ಥಳೀಯ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ. ಇತ್ತೀಚೆಗೆ ಹಲವಾರು ಸರಕಾರಿ ಶಾಲೆಗಳಲ್ಲಿನ ಉತ್ಸಾಹಿ ಯುವ ಶಿಕ್ಷಕ/ಶಿಕ್ಷಕಿಯರು ಸ್ವಯಂ ಪ್ರೇರಣೆಯಿಂದ ತಮ್ಮ ಶಾಲೆಯ ಸರ್ವತೋಮುಖ ಏಳಿಗೆಗಾಗಿ ಮುತುವರ್ಜಿವಹಿಸುತ್ತಿದ್ದಾರೆ. ಕಲಿಸುವುದಷ್ಟನ್ನೇ ಕರ್ತವ್ಯವೆಂದು ಭಾವಿಸದೆ ಶಾಲೆಯ ಅಂದ ಚಂದ, ಕೈತೋಟ, ಗ್ರಂಥಾಲಯ ಸುಣ್ಣ-ಬಣ್ಣ, ಅಷ್ಟೇ ಅಲ್ಲದೆ ತಮ್ಮ ಶಾಲೆಯ ಕುಂದು-ಕೊರತೆಗಳನ್ನು ತಾವೇ ನೀಗಿಸಿಕೊಳ್ಳುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆ ಎನ್ನಬಹುದು.







