ಮಂಗಳೂರು: ಭಾವೈಕ್ಯ ತಾ ಜಾಥಾ ಉದ್ಘಾಟನೆ
ಮಂಗಳೂರು: ಮಂಗಳೂರು ಬಾವುಟಗುಡ್ಡೆಯಲ್ಲಿರುವ ರೈತ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಪುತ್ಥಳಿಯ ಬಳಿಯಿಂದ ಬೆಂಗಳೂರು ಸ್ವಾತಂತ್ರ್ಯ ಉದ್ಯಾನದವರೆಗೆ ನಡೆಯಲಿರುವ ಭಾವೈಕ್ಯ ತಾಲೂಕು ಜಾಥಾದ ಉದ್ಘಾಟನೆಯನ್ನು ಚಿಂತಕರಾದ ಪ್ರೊ.ಚಂದ್ರ ಪೂಜಾರಿ ನೆರವೇರಿಸಿದರು.
ದೇಶದಲ್ಲಿ 1991ರಿಂದ ಉದ್ಯೋಗ, ಸಾಮಾಜಿಕ ಭದ್ರತೆ, ಕನಿಷ್ಠ ವೇತನ ಹಾಗೂ ಇತ್ತೀಚೆಗೆ ಕಾರ್ಮಿಕ ಕಾಯ್ದೆ ಗೆ ತಂದಿರುವ ತಿದ್ದುಪಡಿಯಿಂದ ಕಾರ್ಮಿಕರು ಬದುಕು ಇನ್ನಷ್ಟು ಸಂಕಷ್ಟಕ್ಕೆ ಈಡಾಗಿದೆ. ಜೊತೆಗೆ ರಸ್ತೆ ಗುಂಡಿ, ಚರಂಡಿ ಗಳ ಬಗ್ಗೆ ಮಾತನಾಡಬೇಡಿ ಎನ್ನುವ ಉದ್ಧಟತನದ ಮಾತುಗಳನ್ನು ದಕ್ಷಿಣ ಕನ್ನಡದ ಬುದ್ಧಿವಂತ ಜಿಲ್ಲೆಯ ಜನರು ಕೇಳುವ ಪರಿಸ್ಥಿತಿ ಬಂದಿದೆ. ಈ ಪರಿಸ್ಥಿತಿ ಬದಲಾಗಬೇಕು ಎಂದು ಚಂದ್ರ ಪೂಜಾರಿ ಕರೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ರಾದ ರವಿಕಿರಣ್ ಪುಣಚ ಜಾಥದ ಉದ್ದೇಶ ಹಾಗೂ ಹಕ್ಕೊತ್ತಾಯಗಳ ಬಗ್ಗೆ ವಿವರಿ ಸುತ್ತಾ, ರಾಜ್ಯದಲ್ಲಿ ಸಾಮರಸ್ಯವನ್ನು ಮರುಸ್ಥಾಪಿಸಲು ಕುವೆಂಪುರವರ ವಾಣಿಯಂತೆ ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸುವುದು” ರಾಜ್ಯ ಸರಕಾರವು ತಂದಿರುವ ಮೂರು ಕರಾಳ ಕಾಯ್ದೆಗಳಾದ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎ.ಪಿ.ಎಮ್ ಸಿ ತಿದ್ದುಪಡಿ ಕಾಯ್ದೆ ಮತ್ತು ಗೋಹತ್ಯಾನಿಷೇಧ ಹಾಗೂ ಸಂರಕ್ಷಣಾ ಕಾಯ್ದೆಗಳನ್ನು ಹಿಂಪಡೆಯಬೇಕು ಈ ಕಾಯ್ದೆಗಳಿಂದಾಗಿ ಉಪಕಸುಬುದಾರರ ನಿರುದ್ಯೋಗವು ದೊಡ್ಡ ಮಟ್ಟದಲ್ಲಿ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ಕರಾವಳಿಯಲ್ಲಿ ಎಂಆರ್ ಪಿ ಎಲ್ ಸೇರಿದಂತೆ ಎಲ್ಲಾ ಸಂಸ್ಥೆಗಳಲ್ಲಿ ಆದ್ಯತೆ ಮೇರೆಗೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು.ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲಬೆಲೆ ಹಾಗೂ ನೀತಿಗಳನ್ನು ಕಾನೂನಾತ್ಮಕಗೊಳಿಸಬೇಕು. ದಲಿತರ ಮೇಲಿನ ಹಲ್ಲೆ ಮತ್ತು ಅಸ್ಪಶ್ಯತೆಯ ಆಚರಣೆಯನ್ನು ಕಠಿಣ ಕ್ರಮಗಳಿಂದ ನಿಯಂತ್ರಿಸಬೇಕು.ಪರಿತಿಷ್ಟ ಜಾತಿ ಹಾಗೂ ಪಂಗಡದವರಿಗೆ ಕಾದಿರಿಸಿದ ಡಿ.ಸಿ.ಮನ್ನಾ ಜಮೀನನ್ನು ಫಲಾನುಭವಿಗಳಿಗೆ ತಕ್ಷಣ ಹಂಚಿಕೆ ಮಾಡಬೇಕು.ಭೂಸ್ವಾಧೀನ ವೆಂಬುವುದು ರೈತಾಪಿ ಜೀವವಿರೋಧಿ ಕ್ರಮ. 2013ರ ಕಾಯ್ದೆಗೆ ಬದ್ಧವಾಗಿ ರಾಜ್ಯ ಸರಕಾರ ತನ್ನ ಭೂಸ್ವಾಧೀನ ಕಾಯ್ದೆ ರೂಪಿಸಬೇಕು ಎಂದರು.
ಯುವ ಜನತೆ ಹಾಗೂ ಸಾಮಾನ್ಯ ಜನತೆಯನ್ನು ದಿವಾಳಿಯೆಬ್ಬಿಸುತ್ತಿರುವ ನಿರುದ್ಯೋಗ ಹಾಗೂ ಹಣದುಬ್ಬರವನ್ನು ನಿಯಂತ್ರಿಸಬೇಕು. ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಂವಿಧಾನವನ್ನು ಪಠ್ಯವಾಗಿ ಬೋಧಿಸಬೇಕು. ಸರಕಾರವೂ ಶಿಕ್ಷಣದ ಖಾಸಗೀಕರಣ ಹಾಗೂ ಸಮಾಜದ ಕೋಮುವಾದಿಕರಣವನ್ನು ನಿಲ್ಲಿಸಬೇಕು. ಸೌಹಾರ್ದತೆಗೆ ಭಂಗ ತರುವ ಅನೈತಿಕ ಗೂಂಡಗಿರಿಯನ್ನು ತಡೆಯಲು ಉಗ್ರ ಕ್ರಮಕೈಗೊಳ್ಳಬೇಕು ಎಂದರು.
ಸರಕಾರಿ ಆಸ್ಪತ್ರೆಗಳ PPP ಮಾದರಿಯ ಖಾಸಗೀಕರಣವನ್ನು ಕೈ ಬಿಡಬೇಕು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸುಸಜ್ಜಿತ ಸರಕಾರಿ ಮೆಡಿಕಲ್ ಕಾಲೇಜು ಗಳನ್ನು ಸ್ಥಾಪಿಸಬೇಕು. ಕಾರ್ಮಿಕ ವಿರೋಧಿ ಕಾರ್ಪೋರೇಟ್ ಪರ ಕೋಡ್ಗಳನ್ನು ರದ್ದುಪಡಿಸಬೇಕು ಈಗಾಗಲೇ ರದ್ದುಪಡಿಸಿದ ಕಾರ್ಮಿಕ ಕಾಯ್ದೆಗಳನ್ನು ಮರು ಸ್ಥಾಪಿಸಬೇಕು. ಸಾರ್ವಜನಿಕ ಉದ್ದಿಮೆಗಳು ಮತ್ತು ಸಾರ್ವಜನಿಕ ಭೂಮಿಯ ಖಾಸಗೀಕರಣ ಮತ್ತು ಮಾರಾಟವನ್ನು ನಿಲ್ಲಿಸಬೇಕು.ಅಡಿಕೆ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು. ಅಡಿಕೆಗೆ ಪ್ರತಿ ಕಿಲೋಗ್ರಾಂ ಪರ ಕನಿಷ್ಟ ಆಮದು ಬೆಲೆಯನ್ನು ರೂ. 251 ರಿಂದ ರೂ.400ಗೆ ತಕ್ಷಣ ಏರಿಕೆ ಮಾಡಬೇಕು ಹಾಗೂ ಅಡಿಕೆ ಆಮದನ್ನು ನಿಲ್ಲಿಸಬೇಕು ಎಂದು ಸೂಚಿಸಿದರು.
ಅಡಿಕೆ ಆರೋಗ್ಯಕ್ಕೆ ಉತ್ತೇಜಕ ಎಂಬ ವರದಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ತಕ್ಷಣ ಸಲ್ಲಿಸಲು ಕ್ರಮ ಕೈಗೊಳ್ಳಬೇಕು. ತೆಂಗಿನ ಕಾಯಿಗೆ ಕೊಬ್ಬರಿ ಮಾದರಿಯಲ್ಲಿ ಪ್ರತೀ ಕಿಲೋಗ್ರಾಂ ಗೆ ಕನಿಷ್ಠ ರೂ. 10 ರೂಪಾಯಿಗಳ ಬೆಂಬಲಬೆಲೆ ಘೋಷಿಸಿ ಖರೀದಿ ಕೇಂದ್ರ ಆರಂಭಿಸಬೇಕು ಎನ್ನುವ ಹಲವು ಬೇಡಿಕೆ ಗಳೊಂದಿಗೆ ಜ.11ರಂದು ಬೆಂಗಳೂರಿಗೆ ಜಾಥ ತಲುಪಲಿದೆ ಎಂದು ರವಿಕಿರಣ್ ಪುಣಚ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ,ದಲಿತ ಸಂಘರ್ಷ ಸಮಿತಿ,ಜಮಾತೆ ಇಸ್ಲಾಂ ಹಿಂದ್,ಕರ್ನಾಟಕ ಪ್ರಾಂತ ರೈತ ಸಂಘ,ಕಾನ್ಫಿಡ್ರೇಶನ್ ಆಫ್ ಕ್ರಿಶ್ಚಿಯನ್ ಕಮ್ಯೂನಿಟಿ, ಸೋಲಿಡಾರಿಟಿ ಯೂತ್ ಮೂವ್ ಮೆಂಟ್, ಕರಾವಳಿ ಕರ್ನಾಟಕ ಜನಾಭಿವೃದ್ಧಿವೇದಿಕೆ,ಮುಸ್ಲಿಂ ಐಕ್ಯತಾ ವೇದಿಕೆ, ಜನವಾದಿ ಮಹಿಳಾ ಸಂಘಟನೆ, ಡಿವೈಎಫ್ ಐ,ಸಿಐಟಿಯು, ಎಸ್ ಕೆ ಎಸ್ಎಸ್ ಎಫ್ ,ಎಸ್ಎಸ್ ಎಫ್,ಎಸ್ ಐಒ,ಜೆಸಿಟಿಯು ಸಂಘನೆಯ ಮುಖಂಡರು ಪ್ರತಿನಿಧಿಗಳು ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮ ದಲ್ಲಿ ಜಾಥಾದ ಸಂಚಾಲಕರಾದ ಕೃಷ್ಣಪ್ಪ ಸಾಲ್ಯಾನ್ ಅಧ್ಯಕ್ಷ ತೆ ವಹಿಸಿದ್ದರು.
ಮುನೀರ್ ಕಾಟಿಪಳ್ಳ, ದೇವದಾಸ್ ಬಜ್ಪೆ, ಕೆ.ಅಶ್ರಫ್, ಪದ್ಮಾವತಿ ಶೆಟ್ಟಿ,ಎ.ಕೆ.ಕುಕ್ಕಿಲ ,ಅಮೀನ್ ಹಸನ್, ಕೆ.ವಿ.ಭಟ್, ವಾಸುದೇವ ಉಚ್ಚಿಲ್, ಹರಿಣಿ ಮೊದಲಾದವರು ಉಪಸ್ಥಿತರಿದ್ದರು.