ಬ್ಯಾಂಕ್ ವಿಲೀನಗಳಿಂದ ಕನ್ನಡಕ್ಕೆ ಧಕ್ಕೆ: ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಕಳವಳ
ಹಾವೇರಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಹಾವೇರಿ, ಜ. 6: 'ಬ್ಯಾಂಕುಗಳ ವಿಲೀನದ ಅನಂತರ ನಮ್ಮ ಹೆಮ್ಮೆಯ ಗುರುತಾಗಿದ್ದ ಹಲವು ಬ್ಯಾಂಕುಗಳ ಚಹರೆಯೇ ಬದಲಾಗಿದೆ. ಇಂದು ನಮ್ಮ ಮುಗ್ಧ ಜನತೆ ತಮ್ಮದೇ ಹಳ್ಳಿಯಲ್ಲಿರುವ ಬ್ಯಾಂಕುಗಳಲ್ಲಿಯೂ ಬ್ಯಾಂಕಿಂಗ್ ಸೇವೆಯನ್ನು ಕನ್ನಡದಲ್ಲಿ ಪಡೆಯಲು ಹೆಣಗಾಡಬೇಕಾದ ಪರಿಸ್ಥಿತಿ ಇದೆ' ಎಂದು 86ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಿರಿಯ ಸಾಹಿತಿ ಡಾ. ದೊಡ್ಡ ರಂಗೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡುತ್ತಿದ್ದರು.
''ಕನ್ನಡ ಬಾರದ, ಅರೆಬರೆ ಕನ್ನಡ ಬಂದರೂ ಕನ್ನಡದಲ್ಲಿ ಸೇವೆಯನ್ನು ನಿರಾಕರಿಸುವ ಸಿಬ್ಬಂದಿಗಳೇ ಇಂದು ಹೆಚ್ಚಿದ್ದಾರೆ. ಗ್ರಾಹಕನ ಭಾಷೆಯನ್ನಾಡದ ಬ್ಯಾಂಕುಗಳು ಕರ್ನಾಟಕದಲ್ಲಿ ಏಕಾದರೂ ಇರಬೇಕು ಹೇಳಿ? ಕನ್ನಡಿಗರು ಹಾಗೂ ಕರ್ನಾಟಕ ಸರ್ಕಾರ ಇಂತಹ ಅಭಾಸಗಳನ್ನು ನಿವಾರಿಸಿಕೊಳ್ಳಲು ವೈಯಕ್ತಿಕ ಹಾಗೂ ಆಡಳಿತಾತ್ಮಕ ನಗರಿಗರಲ್ಲೂ ಕಠಿಣ ತೀರ್ಮಾನಗಳನ್ನು ಕೈಗೊಳ್ಳಬೇಕು'' ಎಂದು ಅವರು ಆಗ್ರಹಿಸಿದರು.
''ನಮ್ಮ ಭಾಷೆಯಲ್ಲಿ ಸೇವೆ ನೀಡದಬ್ಯಾಂಕುಗಳು, ಸರ್ಕಾರಿ ಉದ್ದಿಮೆಗಳು, ಖಾಸಗಿ ಸಂಸ್ಥೆಗಳನ್ನು ಮುಲಾಜಿಲ್ಲದ ಧಿಕ್ಕರಿಸಬೇಕು'' ಎಂದು ಸಮ್ಮೇಳನಾಧ್ಯಕ್ಷರು ಕರೆ ನೀಡಿದರು.