‘ಪತನಗೊಳ್ಳುತ್ತಿರುವ ಕಸಾಪ’ ಎಚ್ಚರಿಸಲು ‘ಜನಸಾಹಿತ್ಯ ಸಮ್ಮೇಳನ’: ಪುರುಷೋತ್ತಮ ಬಿಳಿಮಲೆ
ಬೆಂಗಳೂರು: ‘ಸಾಹಿತ್ಯ ಸಮ್ಮೇಳನ ಆಯೋಜನೆಗೆ ಹೆಚ್ಚಿನ ಅನುದಾನ ಪಡೆದು, ಕಸಾಪ ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡಿದೆ. ಹೀಗಾಗಿ ಪತನಮುಖಿ ಸಾಹಿತ್ಯ ಸಂಘಟನೆಯನ್ನು ಎಚ್ಚರಿಸಲು ನಾಳೆ(ಜ.8) ಬೆಂಗಳೂರಿನಲ್ಲಿ ‘ಜನಸಾಹಿತ್ಯ ಸಮ್ಮೇಳನ’ ಆಯೋಜಿಸಲಾಗಿದೆ ಎಂದು ಜೆಎನ್ಯು ನಿವೃತ್ತ ಪ್ರಾಧ್ಯಾಪಕ ಹಾಗೂ ಚಿಂತಕ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಶನಿವಾರ ನಗರದ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತು ಅದ್ಬುತ ಕೆಲಸ ಮಾಡಿದೆ. ಆದರೆ, ಸಮಯ ಕಳೆದಂತೆ ಸಾಹಿತಿಗಳನ್ನು ದೂರ ತಳ್ಳುವ ಕೆಲಸ ನಡೆಯುತ್ತಿದೆ. ಈಗ ಅದು ಸರಕಾರದ ಅನುದಾನಿತ ಸಂಸ್ಥೆಯಾಗಿ ಬದಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈಗಿನ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಸಾಹಿತಿಗಳೂ ಅಲ್ಲ, ಬರಹಗಾರರು ಅಲ್ಲ. ಅವರು ಕೋಮುವಾದಿ ಎಂಬುದರಲ್ಲಿ ಅನುಮಾನ ಇಲ್ಲ. ಬೈಲಾ ತಿದ್ದುಪಡಿ ಮಾಡಿದ ಬಳಿಕ ಕಸಾಪ ಜಿಲ್ಲಾಧ್ಯಕ್ಷರಿಗೆ ಯಾವ ಅಧಿಕಾರವನ್ನು ನೀಡದೆ, ರಾಜ್ಯಾಧ್ಯಕ್ಷರೇ ಕೇಂದ್ರಿಕರಿಸಿಕೊಂಡಿದ್ದಾರೆ. ಕಾರಿಗೋಸ್ಕರ ಕಸಾಪವನ್ನು ಸರಕಾರದ ಕಾಲಿನಡಿಗೆ ತಂದಿದ್ದಾರೆ. ಅಧ್ಯಕರು ತನ್ನ ಮಗಳ ನೃತ್ಯ ಪ್ರದರ್ಶನವನ್ನು ಸಮ್ಮೇಳನದಲ್ಲಿ ಆಯೋಜಿಸಿ, ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎಂದು ಅವರು ಟೀಕಿಸಿದರು.
‘ಜನಸಾಹಿತ್ಯ ಸಮ್ಮೇಳನ’ದ ಬಳಿಕ ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮ ನಡೆಯಲಿದೆ. ನಾಳಿನ ಕಾರ್ಯಕ್ರಮ ಅದಕ್ಕೆ ಮೊದಲ ಹೆಜ್ಜೆಯಾಗಿದೆ. ಇದು ಕೇವಲ ಕನ್ನಡ ಸಾಹಿತ್ಯ ಸಮ್ಮೇಳನದ ವಿರುದ್ಧ ಅಲ್ಲ, ಬದಲಿಗೆ ಸರಕಾರದಿಂದ ಅನುದಾನ ಪಡೆಯುತ್ತಿರುವ ಹಲವು ಸಂಘ-ಸಂಸ್ಥೆಗಳನ್ನು ಎಚ್ಚರಿಸುವ ಕಾರ್ಯ ಆಗಬೇಕಿದೆ.
ಕಸಾಪ ಸೇರಿ ಹಲವು ವಿವಿಗಳು ಕೋಮುವಾದಿ ಸಂಘಟನೆಯಾಗಿ ಕೆಲಸ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪುರುಷೋತ್ತಮ ಬಿಳಿಮಲೆ, ಇದರ ವಿರುದ್ಧ ಪರ್ಯಾಯ ಸಂಘಟನೆಗಳನ್ನು ಕಟ್ಟಿಕೊಳ್ಳದಿದ್ದರೆ ಈ ನಾಡಿಗೆ ಸಮಸ್ಯೆ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ನಾಳೆ(ಜ.8) ಬೆಳಗ್ಗೆ 9ಗಂಟೆಗೆ ಇಲ್ಲಿನ ಕೆಆರ್ ವೃತ್ತದಲ್ಲಿನ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ಜನಸಾಹಿತ್ಯ ಸಮ್ಮೇಳನದ ಕನ್ನಡ ಧ್ವಜಾರೋಹಣವನ್ನು ವಾಟಾಳ್ ನಾಗರಾಜ್, ಶಿವರಾಮೇಗೌಡ ಮತ್ತು ಬಿ.ಎನ್.ಜಗದೀಶ್ ನೆರವೇರಿಸಲಿದ್ದಾರೆ. ಸಮ್ಮೇಳನದಲ್ಲಿ ವ್ಯಂಗ್ಯಚಿತ್ರ ಮತ್ತು ಪೋಸ್ಟರ್ಗಳ ಪ್ರದರ್ಶನ, ವಿಚಾರ ಸಂಕಿರಣ, ಕವಿಗೋಷ್ಟಿ, ವಿಚಾರ ಗೋಷ್ಟಿಗಳನ್ನು ಆಯೋಜಿಸಲಾಗಿದೆ.
ಪ್ರೊ.ಎಸ್.ಜಾಫೆಟ್, ಜಾಣಗೆರೆ ವೆಂಕಟರಾಮಯ್ಯ, ಜೆನ್ನಿ, ಅಗ್ನಿ ಶ್ರೀಧರ್, ಅಕ್ಕೈ ಪದ್ಮಶಾಲಿ, ವಡ್ಡಗೆರೆ ನಾಗರಾಜಯ್ಯ, ಡಾ. ಬಂಜಗೆರೆ ಜಯಪ್ರಕಾಶ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಟಿಯಲ್ಲಿ ಮುನೀರ್ ಕಾಟಿಪಳ್ಳ, ಹರೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
‘ರಾಜ್ಯದಲ್ಲಿ ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಿರಂತರವಾಗಿ ಮುಂದುವರೆದಿವೆ. ಸಾಮಾಜಿಕ ನ್ಯಾಯಕ್ಕಾಗಿ ಕಲ್ಪಿಸಿರುವ ಮೀಸಲಾತಿಯನ್ನು ಅರ್ಥಹೀನಗೊಳಿಸಿ ಅದನ್ನು ಯಾರ್ಯಾರೋ ಕಿತ್ತು ತಿನ್ನುವಂತೆ ಮಾಡಲಾಗುತ್ತಿದೆ. ಸಾಮಾಜಿಕ ಅನಿಷ್ಟಗಳ ವಿರುದ್ಧ ಧ್ವನಿ ಎತ್ತಿದ ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು, ಗಾಂಧಿ, ಲೋಹಿಯಾ, ಫುಲೆ, ನಾರಾಯಣಗುರು, ಪರಿಯಾರ್ ಮೊದಲಾದವರನ್ನು ಅಪಮೌಲ್ಯಗೊಳಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಲೇಖಕರ ಮತ್ತು ಕಲಾವಿದರು ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರಗಳನ್ನು ಕಂಡುಕೊಳ್ಳಬೇಕಾಗಿದೆ’
-ಪುರುಷೋತ್ತಮ ಬಿಳಿಮಲೆ, ಚಿಂತಕ