ಶಿಕ್ಷಕರ ನೇಮಕಾತಿ ಹಗರಣ: ಅಕ್ರಮ ಬಯಲಿಗೆ ಎಳೆದಿದ್ದ ಪತ್ರಕರ್ತ ಮಹಾಂತೇಶ್ಗೆ ಪೊಲೀಸರಿಂದ ನೋಟಿಸ್
ಬೆಂಗಳೂರು: ಶಿಕ್ಷಕರ ಅಕ್ರಮ ನೇಮಕಾತಿ ಹಗರಣವನ್ನು ಬಯಲಿಗೆ ಎಳೆದಿದ್ದ 'ದಿ ಫೈಲ್' ತನಿಖಾ ವೆಬ್ಸೈಟ್ನ ಸಂಪಾದಕ, ಪತ್ರಕರ್ತ ಜಿ.ಮಹಾಂತೇಶ್ ಅವರಿಗೆ, 'ಸುದ್ದಿಯ ಮೂಲ'ವನ್ನು ನೀಡುವಂತೆ ಬೆಂಗಳೂರು ಪೊಲೀಸರು ಜ.5ರಂದು ನೋಟಿಸ್ ಕಳುಹಿಸಿದ್ದಾರೆ.
ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಿಐಡಿಯಿಂದ ಬಂಧನಕ್ಕೆ ಒಳಗಾಗಿ, ಅಮಾನತುಗೊಂಡಿದ್ದ ಆರೋಪಿ ಮಾದೇಗೌಡ ಸೇರಿ ಮೂವರು ಅಧಿಕಾರಿಗಳನ್ನು ಮರಳಿ ಕರ್ತವ್ಯಕ್ಕೆ ತೆಗೆದುಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರು ಸಲ್ಲಿಸಿದ್ದ ಪ್ರಸ್ತಾವನೆಯ ಬಗ್ಗೆ 'ದಿ ಫೈಲ್' ನ.10, 2022ರಂದು ವರದಿ ಪ್ರಕಟಿಸಿತ್ತು.
ಈ ವರದಿಗೆ ಸಂಬಂಧಿಸಿ ತಮ್ಮ ಸಂಸ್ಥೆಗೆ ಸಲ್ಲಿಸಿರುವ ಅಥವಾ ಮಾಹಿತಿ ನೀಡಿರುವ ವ್ಯಕ್ತಿಗಳ ವಿವರವನ್ನು ಪ್ರಕರಣದಲ್ಲಿ ತನಿಖೆಯ ಸಲುವಾಗಿ ಸೈಬರ್ ಕ್ರೈಂ ಪೊಲೀಸ್ ಕಚೇರಿಗೆ ನೀಡುವಂತೆ ಜ.5ರಂದು ನೋಟಿಸ್ ಕಳುಹಿಸಿದ್ದರು.
ಇದಕ್ಕೆ ಉತ್ತರಿಸಿರುವ 'ದಿ ಫೈಲ್' ಸಂಪಾದಕ, ಜಿ ಮಹಾಂತೇಶ್, "ಸುದ್ದಿಯ ಮೂಲವನ್ನು ಬಿಟ್ಟು ಕೊಡುವುದು ಪತ್ರಿಕಾ ಧರ್ಮವಲ್ಲ. ಒಂದು ವೇಳೆ ಅದು ಬಿಟ್ಟುಕೊಟ್ಟರೆ ಪತ್ರಿಕಾ ವೃತ್ತಿಗೆ ಮಾಡುವ ಅವಮಾನ" ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಪೊಲೀಸ್ ನೋಟಿಸ್ ಬಗ್ಗೆ ವಾರ್ತಾ ಭಾರತಿ ಜೊತೆಗೆ ಮಾತನಾಡಿದ ಜಿ ಮಹಾಂತೇಶ್, "ಕಳೆದ 2020ರಿಂದ 'ದಿ ಫೈಲ್' ಕೋವಿಡ್ ಹಗರಣ, ಅಬಕಾರಿ ಹಗರಣ, ಶಿಕ್ಷಕರ ಅಕ್ರಮ ನೇಮಕಾತಿ ಹಗರಣ, ಸರಕಾರದ ಆಡಳಿತದಲ್ಲಿ ನಡೆಯುತ್ತಿರುವ ಲೋಪದೋಷಗಳನ್ನು ದಾಖಲೆ ಸಹಿತ ನಾವು ವರದಿ ಮಾಡುತ್ತಿದ್ದೇವೆ. ನಮ್ಮ ಸುದ್ದಿಗೆ ಪೂರಕವಾಗಿ ನಾವೇ ಆರ್ಟಿಐ ಹಾಕಿಕೊಂಡು ಮಾಹಿತಿ ಕಲೆ ಹಾಕುತ್ತೇವೆ. ಉತ್ತರ ಬಾರದಿದ್ದಾಗ, ಮಾಧ್ಯಮಕ್ಕೆ ಸುದ್ದಿಯ ಮೂಲ ಎಂಬುದು ಇರುತ್ತದೆ. ಆ ಮೂಲಗಳಿಂದ ಮಾಹಿತಿ ಕಲೆ ಹಾಕುತ್ತೇವೆ. ಸುದ್ದಿಯ ಮೂಲವನ್ನು ಬಿಟ್ಟು ಕೊಡುವುದು ಪತ್ರಿಕಾ ಧರ್ಮವಲ್ಲ. ಹೀಗಾಗಿ, ಪೊಲೀಸರು ನಮ್ಮ ಮೂಲವನ್ನು ಕೆದಕುವ ಬದಲು, ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿ" ಎಂದರು.
"ಶಿಕ್ಷಕರ ಅಕ್ರಮ ನೇಮಕಾತಿ ಹಗರಣವನ್ನು ಬಯಲಿಗೆ ತಂದದ್ದೇ ದಿ ಫೈಲ್. ನಮ್ಮ ವರದಿಯನ್ನು ಆಧರಿಸಿ ಇಲಾಖೆಯೇ ತನಿಖೆ ನಡೆಸಿ, ಸುಮಾರು 60 ಮಂದಿಯನ್ನು ಬಂಧನಕ್ಕೊಳಪಡಿಸಿದೆ. ಅದರಲ್ಲಿ ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕರಾಗಿದ್ದ ಮಾದೇಗೌಡರೂ ಒಬ್ಬರು. ಜಾಮೀನಿನ ಮೇಲೆ ಹೊರಬಂದಿರುವ ಆರೋಪಿತ ಅಧಿಕಾರಿಗಳನ್ನು ಸೇವೆಯಲ್ಲಿ ಪುನರ್ ಸ್ಥಾಪಿಸುವ ಸಂಬಂಧದ ಕಡತವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿಶಾಲ್ ಅವರ ನಿರ್ದೇಶನದಂತೆ ಸರಕಾರಕ್ಕೆ ಪ್ರಸ್ತಾವನೆ ಮಂಡಿಸಲಾಗಿತ್ತು. ಅದರಲ್ಲಿನ ಟಿಪ್ಪಣಿಯನ್ನು ಬಳಸಿ, ನಾವು ವರದಿ ಮಾಡಿದ್ದೆವು. ಆದರೆ, ಇದು ಯಾವುದೇ ಸರಕಾರಿ ಗೌಪ್ಯತೆಯ ಕಾಯಿದೆಯ ಅಡಿಯಲ್ಲಿ ಬರುವುದಿಲ್ಲ. ಎಲ್ಲ ಮಾಧ್ಯಮ ಸಂಸ್ಥೆಗಳಿಗೂ ಅದರದ್ದೇ ಆದ ಸುದ್ದಿಯ ಮೂಲಗಳಿರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಸುದ್ದಿಯ ಮೂಲವನ್ನು ಬಿಟ್ಟುಕೊಡಲಾಗುವುದಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದೇವೆ" ಎಂದು ಮಹಾಂತೇಶ್ ವಾರ್ತಾ ಭಾರತಿಗೆ ಮಾಹಿತಿ ನೀಡಿದರು.
"ಶಿಕ್ಷಣ ಇಲಾಖೆಯಲ್ಲಿ ನಡೆದ ದಾಖಲೆ ಸೋರಿಕೆ ಬಗ್ಗೆ ಆಂತರಿಕ ವಿಚಾರಣೆ ನಡೆಸಲಿ. ಯಾರು ಸುದ್ದಿ ಮಾಡಿದ್ದಾರೋ ಅವರನ್ನಲ್ಲ. ಅದನ್ನು ಬಿಟ್ಟು ಪೊಲೀಸ್ ಇಲಾಖೆ ನಮಗೆ ನೋಟಿಸ್ ನೀಡುವುದಲ್ಲ. ಇದು ಏನನ್ನು ಸೂಚಿಸುತ್ತದೆ ಅಂದರೆ, ಇದು ಇನ್ಮುಂದೆ ಇಂತಹ ವರದಿಗಳು ಬರೆಯದಂತೆ ಕಿರಿಕಿರಿ ಮಾಡಲು ಮತ್ತು ಇನ್ನೊಂದು 'ಸ್ವತಂತ್ರ ಪತ್ರಿಕೋದ್ಯಮ'ವನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ. ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮುಖ್ಯವಾಹಿನಿ ಮಾಧ್ಯಮಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುವುದರಿಂದ, 'ಸ್ವತಂತ್ರ ಪತ್ರಿಕೋದ್ಯಮ'ವನ್ನು ಕೂಡ ಹೇಗಾದರೂ ಮಾಡಿ ಬಗ್ಗುಬಡಿಯಬೇಕೆಂಬುದು ಇದ್ದರೂ ಇರಬಹುದು" ಎಂದು 'ದಿ ಫೈಲ್' ಸಂಪಾದಕ ಜಿ ಮಹಾಂತೇಶ್ ಹೇಳಿದ್ದಾರೆ.