ಎಸ್ಸಿ, ಎಸ್ಟಿ ಸಮುದಾಯಗಳು ಭಾರತದ ಅಸ್ಮಿತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೈಸೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳು ಭಾರತದ ಅಸ್ಮಿತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು. ಮೈಸೂರಿನ ಲಲಿತಮಹಲ್ ಹೊಟೆಲಿನಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿರುವ ಬಿಜೆಪಿ ರಾಷ್ಟ್ರೀಯ ಪರಿಶಿಷ್ಠ ಜಾತಿ ಕಾರ್ಯಕಾರಣಿ ಸಭೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಎಸ್ಸಿ, ಎಸ್ಟಿ ಸಮುದಾಯ ಒಟ್ಟಿಗೆ ಇದ್ದರೆ ಬಲ ಜಾಸ್ತಿಯಾಗಲಿದೆ. ಎಸ್ಸಿ, ಎಸ್ಟಿ ಸಮುದಾಯಗಳು ಭಾರತೀಯ ಸಮಾಜದ ಪ್ರಮುಖ ಅಂಗಗಳಾಗಿವೆ. ಎರಡು ಸಮುದಾಯಗಳು ಭಾರತದ ಅಸ್ಮಿತೆಯಾಗಿವೆ. ಹಾಗಾಗಿ ಎರಡೂ ಸಮುದಾಯಗಳಿಗೂ ಶಕ್ತಿ ತುಂಬುವ ಅಗತ್ಯವಿದೆ ಎಂದರು.
ದೇಶದ ಆರ್ಥಿಕ ವ್ಯವಸ್ಥೆ ದುಡಿಯುವ ಕೆಳವರ್ಗದ ಕೈಯಲ್ಲಿದೆ. ದುಡಿಯುವ ವರ್ಗ ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವ ಸಾಮರ್ಥ್ಯ ಹೊಂದಿದ್ದಾರೆ. ತಳ ಸಮುದಾಯಗಳು ಸ್ವಾಭಿಮಾನಿ, ಸ್ವಾವಲಂಬಿಯಾಗುವ ಅಗತ್ಯವಿದೆ. ನಾವು ಯಾರಿಗೂ ಕಡಿಮೆಯಿಲ್ಲ, ನಮಗೆ ಯಾರದೇ ಅನುಕಂಪದ ಅಗತ್ಯ ಇಲ್ಲ ಎಂಬ ಮನೋಭಾವನೆಯಿಂದ ಮುನ್ನಡೆಯಬೇಕು ಎಂದು ತಿಳಿಸಿದರು.
ಅಂಬೇಡ್ಕರ್ ಪರಮ ಶ್ರೇಷ್ಠ ವ್ಯಕ್ತಿ. ನಾನೂ ಸಹ ಅಂಬೇಡ್ಕರ್ ವಾದಿಯೆಂದು ಗರ್ವದಿಂದ ಹೇಳುತ್ತೇನೆ. ಅಂಬೇಡ್ಕರ್ ನಂಬರ್ ಒನ್ ದೇಶ ಭಕ್ತರಾಗಿದ್ದರು. ಅಂಬೇಡ್ಕರ್ ಸಂಸತ್ ಗೆ ಬರಲು ಅವಕಾಶ ನೀಡದ ಕಾಂಗ್ರೆಸ್ ಪಕ್ಷ ಇದೀಗ ಅಂಬೇಡ್ಕರ್ ಮುಂದಿಟ್ಟುಕೊಂಡು ರಾಜಕೀಯ ಲಾಭಕ್ಕಾಗಿ ಯತ್ನಿಸುತ್ತಿದೆ. ಅಂಬೇಡ್ಕರ್ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಜಾಗ ಕೊಡಲಿಲ್ಲ. ಆದರೆ ದಲಿತರ ಮತ ಪಡೆಯಲು ಕಾಂಗ್ರೆಸ್ ಅಂಬೇಡ್ಕರ್ ಹೆಸರು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಪಾದಿಸಿದರು.
ಬಿಜೆಪಿ ಎಸ್ಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಹಲವು ಮಂದಿ ಕೇಂದ್ರ ಸಚಿವ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ಸೇರಿದಂತೆ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು.







