ಸ್ವಾರ್ಥ ಸಾಧನೆಗಾಗಿ ನಾವು ಮತ್ತು ಅವರು ಎಂದು ಜನರನ್ನು ವಿಭಜಿಸಲಾಗುತ್ತಿದೆ: ಮೂಡ್ನಾಕೂಡು ಚಿನ್ನಸ್ವಾಮಿ
''ಕೋವಿಡ್ ಸಂದರ್ಭದಲ್ಲಿ ದಿನಗಟ್ಟಲೆ ಸ್ಮಶಾನದಲ್ಲಿದ್ದು ಶವಗಳ ಅಂತ್ಯಸಂಸ್ಕಾರ ಮಾಡಿದವರು ಮುಸ್ಲಿಮ್ ಯವಕರು''

ಬೆಂಗಳೂರು, ಜ.8: ಹಿಂದೆಂದೂ ಕಾಣದ ದುರಿತ ಕಾಲದಲ್ಲಿ ನಾವಿದ್ದೇವೆ. ಒಂದು ಪಂಥವು ಸ್ವಾರ್ಥ ಸಾಧನೆಗಾಗಿ ನಾವು ಮತ್ತು ಅವರು ಎಂದು ಜನರನ್ನು ವಿಭಜಿಸುತ್ತಿದೆ. ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲೂ ಅದೇ ಅಜೆಂಡಾ ತರುತ್ತಿರುವುದು ವಿಪರ್ಯಾಸ ಎಂದು ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ರವಿವಾರ ನಡೆದ ಜನಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಸಂವಿಧಾನವು ಸಾಮಾಜಿಕ, ಧಾರ್ಮಿಕ ಸಾಮರಸ್ಯವನ್ನು ಸಾದಿಸಲೆಂದೇ ಧರ್ಮನಿರಪೇಕ್ಷತೆ ಎಂಬ ಪರಿಕಲ್ಪನೆಯನ್ನು ಕೊಟ್ಟಿದೆ. ಆದರೆ ದೇಶದಲ್ಲಿ ಒಂದು ಸಮುದಾಯವನ್ನೇ ಹೊರಗಿಡುವ ಕೆಲಸ ನಡೆದಿದೆ. ಸಾಹಿತ್ಯ ಸಮ್ಮೇಳನದಿಂದ ಮುಸ್ಲಿಮರನ್ನು ಹೊರಗಿಟ್ಟಿದ್ದು ಏಕೆ ಎಂದು ಪ್ರಶ್ನಿಸಿದರು.
ಹಿಂದೂ ಎಂಬ ಪದವನ್ನು ಗಾಂದಿ, ವಿವೇಕಾನಂದರು ಯಾವ ಅರ್ಥದಲ್ಲಿ ಬಳಸಿದ್ದರೊ ಆ ಅರ್ಥ ಇಂದು ಇಲ್ಲವಾಗಿದೆ. ಸಂಘ ಪರಿವಾರದ ದೃಷ್ಟಿಯಲ್ಲಿರುವುದು ಜಾತಿ ಮಾತ್ರ. ಗಾಂಧಿ ಮತ್ತು ಅಂಬೇಡ್ಕರರ ತತ್ವವನ್ನು ಇಲ್ಲವಾಗಿಸುತ್ತ ಅವರ ತುಚ್ಛೀಕರಣ ನಡೆದಿದೆ. ಅವರನ್ನು ಅಪ್ರಸ್ತುತಗೊಳಿಸಲಾಗುತ್ತಿದೆ ಎಂದು ಮೂಡ್ನಾಕೂಡು ಹೇಳಿದರು.
ಇತಿಹಾಸವನ್ನು ತಿರುಚುವ ಕೆಲಸವನ್ನು ಸಾಹಿತ್ಯ ಮತ್ತು ಸಮಾಜ ವಿಜ್ನಾನ ಪಠ್ಯಗಳ ಮೂಲಕ ಮಾಡಲಾಗುತ್ತಿದೆ. ಮಕ್ಕಳಲ್ಲಿ ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸುವ ಸ್ಥಿತಿಯೇ ಇಲ್ಲವಾಗುತ್ತಿದೆ. ಕ್ರೂರ ಮತ್ತು ಅನಾಗರಿಕ ಅಸ್ಪೃಶ್ಯತೆ ಬಗ್ಗೆ ಮಕ್ಕಳಿಗೆ ತಿಳಿಸಿಕೊಡದೇ ಹೋದರೆ ಅವರೂ ಅದನ್ನೇ ಅನುಸರಿಸುವ ಅಪಾಯವಿದೆ. ಸಮಾನತೆ, ಭ್ರಾತೃತ್ವಗಳ ಬಗ್ಗೆ ಪಠ್ಯಗಳಲ್ಲಿ ಪಾಠವೇ ಇಲ್ಲವಾಗಿದೆ ಎಂದು ಅವರು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಹೇಗೆ ರಾಜಕಾರಣ ತೂರಿಕೊಂಡಿದೆ ಎಂಬುದನ್ನು ವಿವರಿಸಿದರು.
ಶಾಲೆಗಳಲ್ಲಿ ಭಗವದ್ಗೀತೆ ಪಾಠ, ಸೂರ್ಯನಮಸ್ಕಾರ ಇತ್ಯಾದಿಗಳೆಲ್ಲ ಹಿಂದುತ್ವವನ್ನು ತರುವ ಪೂರ್ವತಯಾರಿಗಳಾಗಿವೆ ಎಂದು ಹೇಳಿದ ಮೂಡ್ನಾಕೂಡು, ಎಲ್ಲ ಮುಸಲ್ಮಾನರನ್ನು ಉಗ್ರರು ಎಂದು ಬಿಂಬಿಸಲಾಗುತ್ತಿದೆ. ಎಲ್ಲ ಧರ್ಮಗಳಲ್ಲೂ ಉಗ್ರರಿರುತ್ತಾರೆ ಎಂದರೆ ಅವರು ನಂಬುತ್ತಿಲ್ಲ ಎಂದರು.
ದಲಿತರಿಗಿಂತ ಮುಸ್ಲಿಮರ ಸಾಕ್ಷರತೆ ಕೆಟ್ಟ ಸ್ಥಿತಿಯಲ್ಲಿದೆ ಎಂದು ಸಾಚಾರ್ ವರದಿ ಹೇಳಿದ್ದ ವಾಸ್ತವವನ್ನು ಮರೆತು, ಸ್ಕಾಲರ್ಶಿಪ್ ಕೂಡ ರದ್ದುಗೊಳಿಸಲಾಗಿದೆಯೆಂಬ ವದಂತಿಗಳಿವೆ. ಏಕೆ ಎಂಬ ಪ್ರಶ್ನೆಗೆ ಇಡೀ ಶಿಕ್ಷಣವನ್ನೇ ಉಚಿತವಾಗಿ ನೀಡಲಾಗುತ್ತಿದೆ ಎಂಬ ಉತ್ತರ ಬರುತ್ತಿದೆ ಎಂದು ಹೇಳಿದರು.
ಹಿಜಾಬ್, ಹಲಾಲ್ ನಂಥ ಘಟನೆಗಳ ಬಳಿಕ ಮುಸಲ್ಮಾನರನ್ನು ಪೂರ್ತಿ ಹೊರಗಿಡುವ, ಅವರಿಗೆ ದೇವಸ್ಥಾನಗಳ ಬಳಿ ಅಂಗಡಿ ತೆರೆಯಲು ಅವಕಾಶ ನೀಡದ, ಅವರ ಅಂಗಡಿಗಳಲ್ಲಿ ಮಾಂಸ ಖರೀದಿಸಬಾರದೆನ್ನುವ, ಕಡೆಗೆ ಅವರ ಆಟೋವನ್ನು ಹತ್ತಬಾರದೆನ್ನುವ ವಾತಾವರಣವೊಂದು ಸೃಷ್ಟಿಯಾಗಿದೆ. ಆದರೆ ನಿಜವಾಗಿಯೂ ಧಾರ್ಮಿಕತೆ ಯಾವುದು ಎಂಬುದನ್ನು ಯೋಚಿಸುತ್ತಿಲ್ಲ. ಇನ್ನೊಬ್ಬರಿಗಾಗಿ ಅನುಕಂಪ ತೋರುವುದು, ಸಹಿಷ್ಣತೆ ತೋರಿಸುವುದು ನಿಜವಾದ ಧಾರ್ಮಿಕತೆಯಾಗಿದೆ ಎಂದರು.
ಕೋವಿಡ್ ಕರಾಳವಾಗಿದ್ದ ಸಂದರ್ಭದಲ್ಲಿ ಅನಾಥವಾಗಿ ಬಿದ್ದಿದ್ದ ಹೆಣಗಳನ್ನು ಯಾವ ಧರ್ಮದವರದ್ದು ಎಂದು ಕೂಡ ನೋಡದೆ, ಜೀವದ ಹಂಗು ತೊರೆದು ದಫನ್ ಮಾಡಿದವರು ಮುಸಲ್ಮಾನರು. ಹಿಂದೂಗಳು ಹೆಣಗಳನ್ನು ಕಣ್ಣೆತ್ತಿ ನೋಡಲೂ ಹೋಗದಿದ್ದ ಸನ್ನಿವೇಶದಲ್ಲಿ ತಮ್ಮ ಪ್ರಾಣ ಲೆಕ್ಕಿಸದೆ, ದಿನಗಟ್ಟಲೆ ಸ್ಮಶಾನದಲ್ಲಿದ್ದು ಶವಗಳ ಅಂತ್ಯಸಂಸ್ಕಾರ ಮಾಡಿದವರು ಮುಸ್ಲಿಂ ಯುವಕರು. ಅದು ನಿಜವಾದ ಧಾರ್ಮಿಕತೆ. ಕೋಲಾರದ ಮುಸ್ಲಿಂ ವ್ಯಕ್ತಿಯೊಬ್ಬರು ತನ್ನ ಜಮೀನು ಮಾರಿ ಕೋವಿಡ್ ಕಾಲದಲ್ಲಿ ಅನ್ನದಾಸೋಹ ಮಾಡಿದ್ದರು. ಅದು ನಿಜವಾದ ಧಾರ್ಮಿಕತೆ ಎಂದು ಮೂಡ್ನಾಕೂಡು ಹೇಳಿದರು.
ಹಿಂದಿ-ಹಿಂದೂ-ಹಿಂದೂಸ್ತಾನ ಎಂಬುದು ವೈವಿಧ್ಯತೆಗೆ ಮಾರಕ. ಹಿಂದಿಯನ್ನು ಅತಿರಂಜಿತಗೊಳಿಸಲಾಗುತ್ತಿದೆ. ಉತ್ತರಭಾರತದಲ್ಲಿನ ಇತರ 50 ಭಾಷೆಗಳನ್ನಾಡುವವರನ್ನೂ ಸೇರಿಸಿಕೊಂಡು ಹಿಂದಿ ಭಾಷಿಕರು 52 ಕೋಟಿ ಎಂದು ಬಿಂಬಿಸಲಾಗುತ್ತಿದೆ. ಹಿಂದಿಯೇತರ ಭಾಷೆಗಳನ್ನಾಡುವ 69 ಕೋಟಿ ಜನರ ಮೇಲೆ, ದ್ರಾವಿಡ ಬಾಷೆಗಳ ಮೇಲೆ ಹಿಂದಿ ಹೇರಿಕೆ ನಡೆದಿದೆ ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಖ್ಯಾತ ನಟ ಪ್ರಕಾಶ್ ರಾಜ್ ಮಾತನಾಡಿ, ನಮ್ಮ ಜೊತೆಗಿರುವವರೇ ತಮ್ಮನ್ನು ಮಾರಿಕೊಳ್ಳುತ್ತಿರುವ ಸಂದರ್ಭದಲ್ಲಿ ನಾವು ಮಾರಾಟಕ್ಕಿಲ್ಲ ಎಂದು ಹೇಳುವುದು ಈ ಸಮ್ಮೇಳನದ ಉದ್ದೇಶವಾಗಿದೆ ಎಂದರು. ಜನರ ಶಕ್ತಿಯೆಂಥದು ಎಂಬುದನ್ನು ಹೇಳುವ ಪಾಬ್ಲೊ ನೆರೂಡ ಕವಿತೆಯ ಕನ್ನಡಾನುವಾದವನ್ನು ಅವರು ಈ ಸಂದರ್ಭದಲ್ಲಿ ವಾಚಿಸಿದರು.









