ಉಡುಪಿ: ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಒತ್ತು; ಸಿಇಓ ಪ್ರಸನ್ನ

ಉಡುಪಿ: ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲು ಸರಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ಮಹಿಳೆಯರು ಇದರ ಪ್ರಯೋಜನ ವನ್ನು ಪಡೆದುಕೊಳ್ಳಬೇಕು ಎಂದು ಜಿಪಂ ಸಿಇಓ ಪ್ರಸನ್ನ ಎಚ್. ತಿಳಿಸಿದ್ದಾರೆ.
ರವಿವಾರ ಜಿಲ್ಲಾ ಪಂಚಾಯತ್, ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ, ಲಿಂಗತ್ವ ಆಧಾರಿತ ದೌರ್ಜನ್ಯ ವಿಮೋಚನ ಅಭಿಯಾನದ ಪ್ರಯುಕ್ತ ಬನ್ನಂಜೆಯ ಬಾಲಭವನ ಬಯಲು ರಂಗಮಂದಿರ ದಲ್ಲಿ ಏರ್ಪಡಿಸಿದ ಸಂಜೀವಿನಿ ಸಂತೆ ಮತ್ತು ಸಾಂಸ್ಕೃತಿಕ ಕಲರವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿ 86 ಸಾವಿರ ಮಹಿಳೆಯರು ಸಂಜೀವಿನಿಯ ಸದಸ್ಯರಾಗಿದ್ದು, 156 ಗ್ರಾಮಪಂಚಾಯತ್ಗಳ ವ್ಯಾಪ್ತಿಯಲ್ಲಿಯೂ ಸಕ್ರಿಯವಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಇಂತಹ ಕಾರ್ಯಕ್ರಮಗಳಿಂದ ಮಹಿಳೆಯರಿಗೆ ಮತ್ತಷ್ಟು ಸ್ಪೂರ್ತಿ ದೊರೆಯಲಿದೆ. ನಮ್ಮ ಮನೆ ಹಾಗೂ ಸುತ್ತಮುತ್ತಲು ಬೆಳೆದ ಆಹಾರೋತ್ಪನ್ನಗಳನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ಹಾಗೂ ಸ್ಥಳೀಯವಾಗಿ ಉದ್ಯೋಗವಕಾಶ ಸೃಷ್ಟಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಪ್ರಯತ್ನಶೀಲರಾಗಬೇಕು ಎಂದರು.
ಕಾಂತಾರ ಚಲನಚಿತ್ರದ ಪೋಷಕ ನಟಿ ಮಾನಸಿ ಸುಧೀರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಜೀವಿನಿ ಜೀವ ಕೊಡುವ ನಂಬಿಕೆ ಪುರಾಣದಲ್ಲಿದೆ. ಇಲ್ಲಿನ ಸಂಜೀವಿನಿ ಯೋಜನೆ ಹಲವಾರು ಮಂದಿಗೆ ಜೀವನ ನೀಡಿದೆ. ನಮ್ಮ ಸುತ್ತಮುತ್ತಲಿನ ಆಹಾರಗಳನ್ನು ಸೇವಿಸಿ ಆರೋಗ್ಯವನ್ನು ಉತ್ತಮ ಗೊಳಿಸಿಕೊಳ್ಳಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಶಿಶು ಅಭಿವೃಧ್ದಿ ಯೋಜನಾಧಿಕಾರಿ ವೀಣಾ ವಿವೇಕಾನಂದ, ಜಿಪಂ ಯೋಜನಾ ನಿರ್ದೇಶಕ ಬಾಬು ಎಂ., ಬ್ರಹ್ಮಾವರ ವಲಯದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಜಿಪಂ ಸಂಜೀವಿನಿಯ ಸಮಾಲೋಚಕ ಕೆ.ಪಾಂಡುರಂಗ ಸ್ವಾಗತಿಸಿದರು. ಸಂಜೀವಿನಿಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅವಿನಾಶ್ ವಂದಿಸಿ, ನವ್ಯಾ ಕಾರ್ಯಕ್ರಮ ನಿರೂಪಿಸಿದರು.
ಭಾಷಣ ಸ್ಪರ್ಧೆ, ಸಮೂಹ ಗಾಯನ, ಜನಪದ ನೃತ್ಯ ಗಮನ ಸೆಳೆದರೆ, ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ತಯಾರಿಸಿದ್ದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಇದೇ ಸಂದರ್ಭದಲ್ಲಿ ನಡೆಯಿತು.



