ಉತ್ತರಪ್ರದೇಶ: ಕಾಂಗ್ರೆಸ್ ಮಾಜಿ ಶಾಸಕನ ಮೊಮ್ಮಗನನ್ನು ಥಳಿಸಿ ಹತ್ಯೆ
![ಉತ್ತರಪ್ರದೇಶ: ಕಾಂಗ್ರೆಸ್ ಮಾಜಿ ಶಾಸಕನ ಮೊಮ್ಮಗನನ್ನು ಥಳಿಸಿ ಹತ್ಯೆ ಉತ್ತರಪ್ರದೇಶ: ಕಾಂಗ್ರೆಸ್ ಮಾಜಿ ಶಾಸಕನ ಮೊಮ್ಮಗನನ್ನು ಥಳಿಸಿ ಹತ್ಯೆ](https://www.varthabharati.in/sites/default/files/images/articles/2023/01/9/363104-1673244692.jpg)
ಮವೂ(ಉತ್ತರಪ್ರದೇಶ): ಇಲ್ಲಿನ ಕೋಪಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮಾಜಿ ಶಾಸಕ ದಿವಂಗತ ಕೇದಾರ್ ಸಿಂಗ್ ಅವರ 35 ವರ್ಷದ ಮೊಮ್ಮಗನನ್ನು ಹೊಡೆದು ಹತ್ಯೆಗೈಯಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಶನಿವಾರ ರಾತ್ರಿ 10 ಗಂಟೆಯ ಸುಮಾರಿಗೆ ಮಹುವಾರ್ ಗ್ರಾಮದಲ್ಲಿ ಏಳು-ಎಂಟು ಜನರು ಹಳೆಯ ವೈಷ್ಯಮ್ಯದಲ್ಲಿ ಹಿಮಾಂಶು ಸಿಂಗ್ ಅವರನ್ನು ಮಾರಣಾಂತಿಕ ಹಲ್ಲೆ ನಡೆಸಿ ಕೊಂದಿದ್ದಾರೆ ಎಂದು ಮವೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ)ತ್ರಿಭುವನ್ ನಾಥ್ ತ್ರಿಪಾಠಿ ಹೇಳಿದ್ದಾರೆ.
ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಮತ್ತು ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಎಎಸ್ಪಿ ಹೇಳಿದರು.
ಪೊಲೀಸ್ ಮೂಲಗಳ ಪ್ರಕಾರ, ಮೃತ ಹಿಮಾಂಶು ಸಿಂಗ್ 1980 ರಲ್ಲಿ ಘೋಸಿ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ದಿವಂಗತ ಕೇದಾರ್ ಸಿಂಗ್ ಅವರ ಮೊಮ್ಮಗ.
ಶನಿವಾರ ರಾತ್ರಿ ಕೊಪಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಲೈರೊ ಡೊನ್ವಾರ್ ಗ್ರಾಮದಲ್ಲಿ ಪಂಚಾಯಿತಿಗೆ ತೆರಳಿದ್ದ ಅವರು ಅಲ್ಲಿ ಜನರ ಗುಂಪಿನೊಂದಿಗೆ ವಾಗ್ವಾದ ನಡೆಸಿದ್ದರು. ಗುಂಪು ಸಿಂಗ್ ರನ್ನು ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿತ್ತು.
ಸಿಂಗ್ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.