"ಹಿಂದುತ್ವ ಸಂಘಟನೆಗಳು ಇತರ ಮಸೀದಿಗಳ ಮೇಲೆ ಹಕ್ಕು ಸ್ಥಾಪಿಸುವ ಬೇಡಿಕೆಯಿಡಲು ಅಯೋಧ್ಯೆ ತೀರ್ಪು ಕಾರಣ"
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ
![ಹಿಂದುತ್ವ ಸಂಘಟನೆಗಳು ಇತರ ಮಸೀದಿಗಳ ಮೇಲೆ ಹಕ್ಕು ಸ್ಥಾಪಿಸುವ ಬೇಡಿಕೆಯಿಡಲು ಅಯೋಧ್ಯೆ ತೀರ್ಪು ಕಾರಣ ಹಿಂದುತ್ವ ಸಂಘಟನೆಗಳು ಇತರ ಮಸೀದಿಗಳ ಮೇಲೆ ಹಕ್ಕು ಸ್ಥಾಪಿಸುವ ಬೇಡಿಕೆಯಿಡಲು ಅಯೋಧ್ಯೆ ತೀರ್ಪು ಕಾರಣ](https://www.varthabharati.in/sites/default/files/images/articles/2023/01/9/363130-1673259957.jpg)
ಹೊಸದಿಲ್ಲಿ: "ಅಯೋಧ್ಯೆ (Ayodhya) ವಿವಾದದ ಕುರಿತಂತೆ 2019 ರಲ್ಲಿ ಸುಪ್ರೀಂ ಕೋರ್ಟ್ (Supreme Court) ಹಿಂದು ಅರ್ಜಿದಾರರ ಪರ ನೀಡಿದ ತೀರ್ಪು ಬಲಪಂಥೀಯವಾದಿ ಶಕ್ತಿಗಳಿಗೆ ಜ್ಞಾನವಾಪಿ ಮಸೀದಿ ಸಹಿತ ದೇಶದ ಇತರೆಡೆಗಳಲ್ಲಿರುವ ಮಸೀದಿಗಳ ಮೇಲೆ ಹಕ್ಕು ಸ್ಥಾಪಿಸುವ ಬೇಡಿಕೆ ಮುಂದಿಡಲು ಕಾರಣವಾಗಿದೆ, ಇದು ಪ್ರಜಾಪ್ರಭುತ್ವ ದೇಶವಾಗಿರುವ ಭಾರತಕ್ಕೆ ದೊಡ್ಡ ಅಪಾಯ," ಎಂದು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲ ಗೌಡ (Justice V Gopala Gowda) ಹೇಳಿದ್ದಾರೆ.
"ಸಂವಿಧಾನ ಉಳಿಸಿ ಪ್ರಜಾಪ್ರಭುತ್ವ ಉಳಿಸಿ" ಎಂಬ ವಿಷಯದ ಮೇಲೆ ಅಖಿಲ ಭಾರತ ವಕೀಲರ ಯೂನಿಯನ್, ದಿಲ್ಲಿ ಪತ್ರಕರ್ತರ ಯೂನಿಯನ್ ಮತ್ತು ಡೆಮಾಕ್ರೆಟಿಕ್ ಟೀಚರ್ಸ್ ಫ್ರಂಟ್ ಆಯೋಜಿಸಿದ್ದ ರಾಷ್ಟ್ರೀಯ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
"ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಭಾರತದ ಸಂವಿಧಾನ ಖಾತರಿಪಡಿಸುತ್ತದೆ, ಆದರೆ ತೀವ್ರಗಾಮಿ ಶಕ್ತಿಗಳ ಕಾರಣದಿಂದ ಮತ್ತು ಸರಕಾರ ಫ್ಯಾಸಿಸ್ಟ್ ಹಿಂದು ಆಗುತ್ತಿರುವುದರಿಂದ ಈ ಮೌಲ್ಯಗಳು ಅಪಾಯದಲ್ಲಿವೆ. ಈ ಶಕ್ತಿಗಳು ಸಂವಿಧಾನದ ಎಲ್ಲಾ ಸ್ಥಂಭಗಳನ್ನು ಆಕ್ರಮಿಸಿಕೊಂಡಿವೆ. ಉದಾ: ಪೌರತ್ವ ತಿದ್ದುಪಡಿ ಕಾಯಿದೆಯು ಸಮಾನ ಪೌರತ್ವವನ್ನು ನಿರಾಕರಿಸುತ್ತದೆ ಮತ್ತು ಪ್ರಜಾಪ್ರಭುತ್ವದ ಆಧಾರಸ್ಥಂಭವಾಗಿರುವ ಜಾತ್ಯತೀತತೆಗೆ ವಿರುದ್ಧವಾಗಿದೆ," ಎಂದು ನ್ಯಾಯಮೂರ್ತಿ ಗೌಡ ಹೇಳಿದರು.
ಕೇಂದ್ರ ಸರ್ಕಾರ 2016 ರಲ್ಲಿ ಜಾರಿಗೆ ತಂದ ಅಮಾನ್ಯೀಕರಣ ಕುರಿತಂತೆ ಸುಪ್ರೀಂ ಕೋರ್ಟಿನ ಇತ್ತೀಚಿಗಿನ ತೀರ್ಪನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಗೌಡ, "ಸಂವಿಧಾನಿಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ಧೈರ್ಯವನ್ನು" ಏಕೈಕ ನ್ಯಾಯಾಧೀಶೆ ಮಾತ್ರ ತಮ್ಮ ಭಿನ್ನ ತೀರ್ಪಿನಿಂದ ಎತ್ತಿ ಹಿಡಿದರು ಹಾಗೂ ಅಮಾನ್ಯೀಕರಣ ನೀತಿ ಜಾರಿಗೊಳಿಸುವಲ್ಲಿ ಅಗತ್ಯ ಪ್ರಕ್ರಿಯೆ ಪಾಲಿಸಲಾಗಿಲ್ಲ ಎಂದರು," ಎಂದು ಹೇಳಿದರು.
"ಕಾರ್ಯಾಂಗದ ಒತ್ತಡಕ್ಕೆ ಬಗ್ಗಿರುವ ಇನ್ನೊಂದು ಸಾಂವಿಧಾನಿಕ ಸಂಸ್ಥೆ ಚುನಾವಣಾ ಆಯೋಗವಾಗಿದೆ. 2017ರ ಗುಜರಾತ್ ಚುನಾವಣೆ ಘೋಷಣೆ ವೇಳೆ ಹಾಗೂ ಆಪ್ ಶಾಸಕರ ಏಕಪಕ್ಷೀಯ ಅನರ್ಹತೆಯ ವಿಚಾರದಲ್ಲಿ ಹೀಗಾಗಿದೆ, ನಂತರ ಸುಪ್ರೀಂ ಕೋರ್ಟ್ ಈ ಕುರಿತು ತರಾಟೆಗೆ ತೆಗೆದುಕೊಂಡಿತ್ತು," ಎಂದು ಜಸ್ಟಿಸ್ ಗೌಡ ಹೇಳಿದರು
"ಇಬ್ಬರು ಆರ್ಬಿಐ ಗವರ್ನರ್ಗಳಾದ ರಘುರಾಮ್ ರಾಜನ್ ಮತ್ತು ಉರ್ಜಿತ್ ಪಟೇಲ್ ಅವರನ್ನು ರಾಜೀನಾಮೆ ನೀಡಲು ಬಲವಂತಪಡಿಸಲಾಗಿತ್ತು," ಎಂದು ಅವರು ಹೇಳಿದರು.
"ಎನ್ಜಿಒಗಳ ವಿದೇಶಿ ದೇಣಿಗೆ ಮೇಲೆ ಸರ್ಕಾರ ನಿಯಂತ್ರಣಗಳನ್ನು ಹೆಚ್ಚಿಸಿದೆ. ಸುಮಾರು 20,000 ಎನ್ಜಿಒಗಳು ಪರವಾನಗಿ ಕಳೆದುಕೊಂಡಿವೆ. ಆಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಇಲ್ಲಿನ ಚಟುವಟಿಕೆಯನ್ನು ನಿಲ್ಲಿಸುವಂತಾಯಿತು. ಈ ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯನ್ನು ಹೆಚ್ಚಾಗಿ ಸರ್ಕಾರದ ಜೊತೆ ಅಸಮ್ಮತಿ ಹೊಂದಿದವರ ಸದ್ದಡಗಿಸಲು ಬಳಸಲಾಗುತ್ತಿದೆ ಎಂದು ಹೇಳಿರುವ ಮೂವರು ವಿಶ್ವ ಸಂಸ್ಥೆಯ ವಿಶೇಷ ಅಧಿಕಾರಿಗಳ ಅದರ ವಾಪಸ್ ಪಡೆಯುವಿಕೆಗೂ ಆಗ್ರಹಿಸಿದ್ದಾರೆ," ಎಂದು ನ್ಯಾಯಮೂರ್ತಿ ಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ದಿಲ್ಲಿ ಹೈಕೋರ್ಟಿನ ಮಾಜಿ ನ್ಯಾಯಾಧೀಶೆ ರೇಖಾ ಶರ್ಮ, ಹಿರಿಯ ವಕೀಲರಾದ ಇಂದಿರಾ ಜೈಸಿಂಗ್, ಬಿಕಾಶ್ ರಂಜನ್ ಭಟ್ಟಾಚಾರ್ಯ, ರಾಜು ರಾಮಚಂದ್ರನ್, ಪಿ ವಿ ಸುರೇಂದ್ರನಾಥ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಕೆ.ಎಚ್ ಮುನಿಯಪ್ಪ ಮನವೊಲಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿ?