ನಿಟ್ಟೆ ಪರಿಗಣಿತ ವಿವಿಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ-2023
ಕಾಮನ್ ವೆಲ್ತ್ ಪದಕ ವಿಜೇತ ವೈಟ್ ಲಿಫ್ಟರ್ ಗುರುರಾಜ್ ಪೂಜಾರಿಗೆ ಸನ್ಮಾನ

ಮಂಗಳೂರು: ಯುವ ಜನತೆ ಶೈಕ್ಷಣಿಕವಾಗಿ ಸಾಧನೆಗೈದರೆ ಸಾಲದು, ಕ್ರೀಡೆಯಲ್ಲೂ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ ಕಾಪಾಡಲು ಸಾಧ್ಯ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದರು.
ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ಆಚರಿಸಲಾಗುತ್ತಿರುವ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟಷನ್ ಇನ್ನೋವೇಷನ್ ಕೌನ್ಸಿಲ್ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿವಿ ಕ್ರೀಡಾ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಕ್ಷೇಮ ಚಿಂತನಾ ಸಭಾಂಗಣದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಯುವ ದಿನಾಚರಣೆ-2023 ರಲ್ಲಿ ಗುರುರಾಜ್ ಪೂಜಾರಿ ಅವರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ನಿಟ್ಟೆ ಪರಿಗಣಿತ ವಿವಿಯ ಕ್ರೀಡಾ ಸಲಹೆಗಾರ ಪ್ರೊ. ಡಾ. ಮುರಲೀಕೃಷ್ಣ ಮಾತನಾಡಿ, "ಶೈಕ್ಷಣಿಕವಾಗಿ ಸಾಧಿಸಿ, ಜತೆಗೆ ಕ್ರೀಡೆಯಲ್ಲೂ ಆಸಕ್ತಿ ತೋರಿಸಬೇಕು. ಪ್ರಶಸ್ತಿ ದಕ್ಕಿಸಿಕೊಳ್ಳದಿದ್ದರೂ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಿ. ಯಾಕೆಂದರೆ ಇತ್ತೀಚೆಗೆ ಹೃದಯಾಘಾತದಿಂದ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ರಕ್ಷಣೆ ಸಾಧ್ಯ ಎಂದು ಅವರು ಹೇಳಿದರು.
ಯುವಜನತೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ಅಲ್ಲದೆ ಕ್ರೀಡೆಯಲ್ಲಿ ಉತ್ತಮ ಸಾಧನೆಗೈದರವರಿಗೆ ಭವಿಷ್ಯವನ್ನು ಭದ್ರಪಡಿಸುವ ಅವಕಾಶ ಇದ್ದು, ಸಾಧನೆಗೈದರೆ ಉದ್ಯೋಗ ಅವಕಾಶ ಕೈಬೀಸಿ ಕರೆಯುತ್ತದೆ. ಅದಕ್ಕೆ ನಾನು ಭಾರತೀಯ ವಾಯುಸೇನೆಯಲ್ಲಿ ಉದ್ಯೋಗಸ್ಥನಾಗಿರುವುದು ಸಾಕ್ಷಿ ಎಂದು ಕಾಮನ್ ವೆಲ್ತ್ ಪದಕ ವಿಜೇತ ವೈಟ್ ಲಿಫ್ಟರ್ ಗುರುರಾಜ ಪೂಜಾರಿ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊ. ಡಾ. ಅನಂತರಾಮ ಶೆಟ್ಟಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕ ಶಶಿಕುಮಾರ್ ಶೆಟ್ಟಿ ಹಾಗೂ ಇನ್ಸ್ಟಿಟ್ಯೂಟಷನ್ ಇನ್ನೋವೇಷನ್ ಕೌನ್ಸಿಲ್ ಅಧ್ಯಕ್ಷ ಡಾ. ಜಿ. ಶ್ರೀನಿಕೇತನ್ ಉಪಸ್ಥಿತರಿದ್ದರು.
ನಿಟ್ಟೆ ವಿವಿ ಕುಲಸಚಿವ ಡಾ. ಹರ್ಷ ಹಾಲಹಳ್ಳಿ ಸ್ವಾಗತಿಸಿದರು. ಕ್ಷೇಮ ವಿದ್ಯಾರ್ಥಿನಿ ತಾನ್ಸಿಯಾ ಕಾರ್ಯಕ್ರಮ ನಿರೂಪಿಸಿದರು.
ಇಂಗ್ಲೆಂಡ್ ನಲ್ಲಿ ಒಬ್ಬ ಕ್ರೀಡಾಳುವಿನ ಸಮಗ್ರ ಬೆಳವಣಿಗೆಗೆ ಆ ದೇಶ ಸುಮಾರು 250 ಕೋಟಿ ರೂ. ಗಳನ್ನು ಖರ್ಚು ಮಾಡುತ್ತದೆ. ಹಾಗಾಗಿ ಅತಿ ಕಡಿಮೆ ಜನಸಂಖ್ಯೆ ಇರುವ ದೇಶಗಳ ಪೈಕಿ ಅದು ಒಂದಾಗಿದ್ದರೂ ಒಲಿಂಪಿಕ್ ನಲ್ಲಿ ಒಂದಷ್ಟು ಪದಕ ಆ ದೇಶದ ಹೆಸರಿನಲ್ಲಿ ಸದಾ ಖಚಿತವಾಗಿರುತ್ತದೆ.
- ಪ್ರೊ. ಡಾ. ಅನಂತರಾಮ ಶೆಟ್ಟಿ, ಪ್ರೊಫೆಸರ್, ಕ್ಯಾನ್ ಬರಿ ವಿಶ್ವವಿದ್ಯಾಲಯ







