ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣ ಅನುಷ್ಠಾನ ಕುರಿತು ದುಂಡು ಮೇಜಿನ ಸಮ್ಮೇಳನ
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ಮೌಲ್ಯ ಶಿಕ್ಷಣ ಅಳವಡಿಕೆ: ಶಿಕ್ಷಣ ಸಚಿವ ನಾಗೇಶ್

ಬೆಂಗಳೂರು: ಜ.9: ಶಾಲಾ ಹಂತದಲ್ಲಿ ‘ಮೌಲ್ಯ ಶಿಕ್ಷಣ’ ಅಳವಡಿಸುವ ನಿಟ್ಟಿನಲ್ಲಿ ಮಹತ್ವದ ಸಭೆ ನಡೆಸಿದ್ದು, ಮೌಲ್ಯ ಶಿಕ್ಷಣವನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಅನುಷ್ಠಾನಗೊಳಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ‘ಶಾಲಾ ಹಂತದಲ್ಲಿ ಮೌಲ್ಯ ಶಿಕ್ಷಣದ ಅನುಷ್ಠಾನ’ ಕುರಿತು ಶಿಕ್ಷಣ ತಜ್ಞರು, ವಿವಿಧ ಧಾರ್ಮಿಕ ಗುರುಗಳು, ಚಿಂತಕರು, ಉನ್ನತ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ದುಂಡು ಮೇಜಿನ ಸಮಾಲೋಚನಾ ಸಭೆಯ ಬಳಿಕ ಮಾತನಾಡಿದ ಅವರು, ಶಾಲಾ ಹಂತದಲ್ಲಿ ಮೌಲ್ಯ ಶಿಕ್ಷಣ ಅಳವಡಿಸುವುದು ಇಂದು ಅತ್ಯಂತ ಅಗತ್ಯ. ಹಾಗಾಗಿ ಸಭೆಯಲ್ಲಿ ಭಾಗವಹಿಸಿದ ಎಲ್ಲ ಗಣ್ಯರ ಅಭಿಪ್ರಾಯಗಳನ್ನು ಪಡೆಯಲಾಗಿದೆ. ಲಿಖಿತ ರೂಪದಲ್ಲಿ ಇನ್ನಷ್ಟು ಅಭಿಪ್ರಾಯ, ಸಲಹೆ, ಸೂಚನೆಗಳನ್ನು ಪಡೆಯಲಾಗುತ್ತದೆ ಎಂದರು.
ಆನ್ಲೈನ್ ಮತ್ತು ಆಫ್ಲೈನ್ ಮೂಲಕ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ಬಹುತೇಕ ಎಲ್ಲರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಸಭೆಯಲ್ಲಿ ವ್ಯಕ್ತವಾಗುವ ಅಂಶಗಳ ಆಧಾರದ ಮೇಲೆ ಇಲಾಖಾ ಹಂತದಲ್ಲಿ ಆಯೋಜಿಸುವ ಸಭೆಗಳಲ್ಲಿ ಚರ್ಚಿಸಿ ‘ಮೌಲ್ಯ ಶಿಕ್ಷಣ’ದ ಅನುಷ್ಠಾನದ ವಿಧಾನಗಳನ್ನು ಅಂತಿಮಗೊಳಿಸಲಾಗುತ್ತದೆ’ ಎಂದು ಅವರು ಹೇಳಿದರು.
ಕರ್ನಾಟಕ ಸೇರಿದಂತೆ ದೇಶದ ಅನೇಕ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಈಗಾಗಲೇ ಮೌಲ್ಯ ಶಿಕ್ಷಣವನ್ನು ಅಳವಡಿಸಿಕೊಂಡಿವೆ. ಇದನ್ನು ವ್ಯಾಪಕವಾಗಿ ಎಲ್ಲ ಶಾಲೆಗಳಲ್ಲೂ ಅಳವಡಿಸಬೇಕು ಎಂಬ ಅಭಿಪ್ರಾಯಗಳು ಸಭೆಯಲ್ಲಿ ಭಾಗವಹಿಸಿದವರು ಮಂಡಿಸಿದ್ದಾರೆ ಎಂದರು.
ನೈತಿಕ ಶಿಕ್ಷಣವು ದೇವರು, ಗುರುಗಳು, ಹಿರಿಯರು ಎನ್ನುವ ಗೌರವ ಭಾವನೆ, ಭಕ್ತಿಯನ್ನು ಒಳಗೊಂಡಿರಬೇಕು. ನೈತಿಕತೆ, ಮೌಲ್ಯಗಳು ಕೇವಲ ಪಠ್ಯ ಪುಸ್ತಕಕ್ಕೆ ಸೀಮಿತವಾಗದೇ ದೈನಂದಿನ ಜೀವನದಲ್ಲಿ ಅಳವಡಿಕೆಯಾಗಬೇಕು. ನೈತಿಕ ಶಿಕ್ಷಣದ ಪಾಠಗಳು ಪ್ರಾಯೋಗಿಕವಾಗಿರಬೇಕು ಎಂದು ಸಭೆಯಲ್ಲಿ ಭಾಗವಹಿಸಿದವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ರಾಜಕಾರಣಿಗಳು ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಮೌಲ್ಯ ಶಿಕ್ಷಣಕ್ಕೆ ಮೇಲ್ಪಂಕ್ತಿ ಹಾಕಬೇಕು. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗಬೇಕು. ಶಿಕ್ಷಕರು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮನೆಯಲ್ಲಿ ಪಾಲಕರು ಮಕ್ಕಳಿಗೆ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತೆ ಸೂಕ್ತ ವಾತಾವರಣ ನಿರ್ಮಾಣ ಮಾಡಬೇಕು. ನೈತಿಕತೆ, ಮೌಲ್ಯಗಳನ್ನು ಶಿಕ್ಷಣದ ಪ್ರತಿ ಹಂತದಲ್ಲೂ, ಹಂತ ಹಂತವಾಗಿ ನೀಡಬೇಕು. ಈ ಬಗ್ಗೆ ಮೌಲ್ಯಾಂಕನ ನಿಗದಿಯಾಗಬೇಕು. ಪರೀಕ್ಷೆಯನ್ನೂ ಮಾಡಬೇಕು. ನೈತಿಕ, ಮೌಲ್ಯ ಶಿಕ್ಷಣದಿಂದ ಮಕ್ಕಳು ವ್ಯಕ್ತಿತ್ವ ರೂಪಿಸಲು ಸಾಧ್ಯವಾಗುತ್ತದೆ. ಮೌಲ್ಯ ಶಿಕ್ಷಣವೂ ಸಹಬಾಳ್ವೆ, ಅಹಿಂಸೆ, ಸತ್ಯ ಮಾರ್ಗ, ಭಾರತೀಯತೆಯನ್ನು ಒಳಗೊಂಡಿರಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಎನ್ಇಪಿ-2020 ರಚನಾ ಸಮಿತಿ ಮುಖ್ಯಸ್ಥ ಪ್ರೊ. ಕೆ.ಕಸ್ತೂರಿ ರಂಗನ್, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿಯ ಖತೀಬ್ ಒ ಇಮಾಮ್ ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ, ಗ್ಲೋಬಲ್ ಎಜುಕೇಷನ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಅಬ್ದುಲ್ ರಹೀಮ್, ನಿವೃತ್ತ ಐಎಎಸ್ ಅಧಿಕಾರಿ ಮುಹಮ್ಮದ್ ಸನಾವುಲ್ಲಾ, ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ಸುಭಾನ್, ರಾಜ್ಯ ಶಿಕ್ಷಣ ಸುಧಾರಣೆ ಪ್ರೊ. ಎಂ.ಆರ್.ದೊರೆಸ್ವಾಮಿ, ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ, ಫಾದರ್ ಫ್ರಾನ್ಸಿಸ್, ರೇವರೆಂಡ್ ಡಾ. ಪ್ರಸನ್ನ ಕುಮಾರ್ ಸ್ಯಾಮ್ಯುಯಲ್, ನಿರ್ಮಲಾನಂದನಾಥ ಸ್ವಾಮೀಜಿ, ಗುರುಬಸವ ಪಟ್ಟದೇವರು, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಮಾದರ ಚನ್ನಯ್ಯ ಗುರುಪೀಠ, ರೆವರೆಂಡ್ ಡಾ. ಪೀಟರ್ ಮಾಚಾದೋ, ಈಶಪ್ರಿಯ ಸ್ವಾಮೀಜಿ, ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ರವಿಶಂಕರ ಗುರೂಜಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
‘ಮಕ್ಕಳಿಗೆ ಸಾತ್ವಿಕ ಆಹಾರವನ್ನು ನೀಡಬೇಕು. ಇದರಿಂದ ಮಕ್ಕಳಿಗೆ ಉತ್ತಮ ಆರೋಗ್ಯ ಮತ್ತು ಮೌಲ್ಯಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳ ಮೊಬೈಲ್ಪೊನ್ ಗೀಳು ಬಿಡಿಸಬೇಕು. ಅದಕ್ಕಾಗಿ ಪಾಲಕರು ಸಾಧ್ಯವಾದಷ್ಟು ಮೊಬೈಲ್ ಬಳಕೆ ಕಡಿಮೆ ಮಾಡಿ ಮಾದರಿಯಾಗಬೇಕು’ ಎಂದು ಸಭೆಯಲ್ಲಿ ಒತ್ತಾಯಿಸಿದರು.






.jpg)
.jpg)


