ಸಾಗರ | ಬಜರಂಗದಳದ ಸಹ ಸಂಚಾಲಕನ ಮೇಲೆ ಹಲ್ಲೆ ಯತ್ನ ಪ್ರಕರಣ: ಮೂವರು ಆರೋಪಿಗಳು ವಶಕ್ಕೆ
ಓರ್ವ ಆರೋಪಿಯ ತಂಗಿಯನ್ನು ಸುನೀಲ್ ಚುಡಾಯಿಸಿದ್ದೇ ಹಲ್ಲೆ ಯತ್ನಕ್ಕೆ ಕಾರಣ: ಎಸ್ಪಿ ಮಾಹಿತಿ
ಶಿವಮೊಗ್ಗ, ಜ.10: ಸಾಗರ ಪಟ್ಟಣದ ಬಜರಂಗದಳದ ಸಹ ಸಂಚಾಲಕ ಸುನೀಲ್ ಮೇಲೆ ಹಲ್ಲೆಗೆ ಯತ್ನಿಸಿರುವ ಆರೋಪಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಎಸ್ಪಿ, ಸಮೀರ್(A1), ಇಮಿಯಾನ್ ಹಾಗೂ ಮನ್ಸೂರ್ ಎಂಬವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಹಲ್ಲೆ ಯತ್ನ ಪ್ರಕರಣದ ಮುಖ್ಯ ಆರೋಪಿ ಸಮೀರ್ ತಂಗಿಯನ್ನು ಬಜರಂಗದಳದ ಸಹ ಸಂಚಾಲಕ ಸುನೀಲ್ ನಾಲ್ಕೈದು ತಿಂಗಳಿನಿಂದ ಚುಡಾಯಿಸುತ್ತಿದ್ದ. ಇದೇ ಕಾರಣಕ್ಕೆ ಹಲ್ಲೆಗೆ ಯತ್ನಿಸಿರುವುದಾಗಿ ತನಿಖೆ ವೇಳೆ ಆರೋಪಿ ತಿಳಿಸಿದ್ದಾನೆ ಎಂದು ಎಸ್ಪಿ ಹೇಳಿದ್ದಾರೆ.
ತಂಗಿಯನ್ನು ಚುಡಾಯಿಸುತ್ತಿರುವ ಬಗ್ಗೆ ಸುನೀಲ್ ಗೆ ಈ ಹಿಂದೆ ಸಮೀರ್ ಎಚ್ಚರಿಕೆ ನೀಡಿದ್ದ. ಆದರೆ ಸುನೀಲ್ ನಿನ್ನ ತಂಗಿಯ ನಂಬರ್ ಕೊಡು ಅಂತ ಸಮೀರ್ ನನ್ನೇ ಕೇಳಿದ್ದ. ಇದಲ್ಲದೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಚುಡಾಯಿಸುವುದನ್ನು ಮುಂದುವರಿಸಿದ್ದ. ಸೋಮವಾರ ಬೈಕ್ ನಲ್ಲಿ ಬರುತ್ತಿದ್ದ ಸಮೀರ್ ನನ್ನು ಸುನೀಲ್ ರೇಗಿಸಿದ್ದ. ಇದರಿಂದ ಕೋಪಗೊಂಡ ಸಮೀರ್ ತನ್ನ ಬೈಕಿನಲ್ಲಿದ್ದ ಮಚ್ಚು ತೆಗೆದುಕೊಂಡು ಹಲ್ಲೆಗೆ ಯತ್ನಿಸಿರುವುದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ ಎಸ್ಪಿ ಮಾಹಿತಿ ನೀಡಿದ್ದಾರೆ.
ಸಮೀರ್ ಕುರಿಗಾಹಿ ಯುವಕನಾಗಿದ್ದು, ಎಂದಿನಂತೆ ಕುರಿಗಳಿಗೆ ಸೊಪ್ಪು ತರಲು ಬೈಕಿನಲ್ಲಿ ಮಚ್ಚನ್ನು ಇಟ್ಟುಕೊಂಡಿದ್ದ. ಸುನೀಲ್ ರೇಗಿಸಿದ್ದರಿಂದ ಅದೇ ಮಚ್ಚಿನಿಂದ ಹಲ್ಲೆಗೆ ಮುಂದಾಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಸಮೀರ್ ಸ್ನೇಹಿತರಾದ ಇಮಿಯಾನ್ ಮತ್ತು ಮನ್ಸೂರ್ ನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಅವರ ಪಾತ್ರ ಏನೆಂಬುದು ತನಿಖೆ ನಡೆಸುತ್ತಿದ್ದೇವೆ. ಹೆಚ್ಚಿನ ಮಾಹಿತಿ ವಿಚಾರಣೆ ನಂತರ ತಿಳಿಯಲಿದೆ ಎಂದು ತಿಳಿಸಿದರು.