ಭಟ್ಕಳ: ಶಮ್ಸ್ ಶಾಲೆ ವಿದ್ಯಾರ್ಥಿಗಳ ಕೀರ್ತಿ ಆಕಾಶದೆತ್ತರಕ್ಕೆ ಹರಡಲಿ-ಝೀನತ್

ಭಟ್ಕಳ: ಶಮ್ಸ್ ಶಾಲಾ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು ದೇಶದ ಮೂಲೆ ಮೂಲೆಗಳಲ್ಲಿ ನೆಲೆಸಿದ್ದಾರೆ. ಇಲ್ಲಿ ಬದುಕನ್ನು ರೂಪಿಸುವ ತರಬೇತಿ ನೀಡುತ್ತಿರುವುದು ವಿದ್ಯಾರ್ಥಿಗಳ ಸೌಭಾಗ್ಯವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು ಅವರ ಕೀರ್ತಿ ಆಕಾಶದೆತ್ತರಕ್ಕೆ ಹರಡಲಿ ಎಂದು ಜಾಮಿಯಾತುಸ್ಸಾಲಿಹಾತ್ ನ ಪ್ರಾಂಶುಪಾಲೆ ಝೀನತ್ ಅಬ್ದುಲ್ ಗನಿ ರುಕ್ನುದ್ದೀನ್ ಹೇಳಿದರು.
ಅವರು ಸೋವಾರ ಭಟ್ಕಳದ ನ್ಯೂ ಶಮ್ಸ್ ಸ್ಕೂಲ್ ನಲ್ಲಿ ನಡೆದ ವಿದ್ಯಾರ್ಥಿನೀಯರ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಅತ್ಯುತ್ತಮ ವಿದ್ಯಾರ್ಥಿನೀಯರಿಗೆ ನೀಡಲ್ಪಡುವ “ನಜ್ಮೆ ಇಖ್ವಾನ್’ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಹತ್ತನೆ ತರಗತಿಯಲ್ಲಿ ಓದುತ್ತಿರುವ ಮಸೀರಾ ಮುಖೀಮ್ ಹಲ್ಲಾರೆ ಗೆ ಪ್ರದಾನಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನ್ಯೂ ಶಮ್ಸ್ ಸ್ಕೂಲ್ ಪ್ರಾಂಶುಪಾಲ ಲಿಯಾಖತ್ ಅಲಿ, ಪ್ರಶಸ್ತ ಮತ್ತು ಬಹುಮಾನ ಪಡೆದ ಎಲ್ಲ ವಿದ್ಯಾರ್ಥಿನೀಯರಿಗೆ ಅಭಿನಂದಿಸಿದ್ದು, ಶಿಕ್ಷಕರ ತರಬೇತಿ ಮತ್ತು ವಿದ್ಯಾರ್ಥಿಗಳ ಶ್ರಮ ಇವೆರಡ ಫಲಿತಾಂಶ ಇಲ್ಲಿ ಕಂಡು ಬರುತ್ತಿದೆ. ಇದು ನಿರಂತರವಾಗಿ ಮುಂದುವರೆಯಬೇಕು. ಸಾಧಕರಿಗೆ ಯಾವುದೇ ಅಡೆತಡೆಗಳು ಇರುವುದಿಲ್ಲ. ಎಂತಹ ಸಂದರ್ಭ ಒದಗಿ ಬಂದರೂ ಕೂಡ ನಮ್ಮ ಪರಿಶ್ರಮ ಮುಂದುವರೆಸಬೇಕು ಮತ್ತು ಇದು ಕೊನೆಯಲ್ಲ. ಭವಿಷ್ಯದಲ್ಲಿ ಬಹಳಷ್ಟು ಅವಕಾಶಗಳು ಒದಗಿ ಬರುತ್ತವೆ ಅದನ್ನು ಬಳಸಿಕೊಂಡು ಜೀವನದಲ್ಲಿ ಮುನ್ನುಗ್ಗುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.
ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕಿ ಸಬಿಹಾ ಫರೂಖ್ ಕೌಡ ಗೌರವ ಅತಿಥಿಯಾಗಿ ಉಪಸ್ಥಿತರಿದ್ದರು.
ಫಹಮಿದಾ ಖಿಝರ್ ಮುಲ್ಲಾ ವರ್ಷದ ಅತ್ಯತ್ತಮ ಶಿಕ್ಷಕಿ ಪ್ರಶಸ್ತಿಗೆ ಬಾಜನರಾದರೆ, ಉತ್ತಮ ಕೋಅರ್ಡಿನೇಟರ್ ಪ್ರಶಸ್ತಿಗೆ ರುಝ್ಮಾ ಕೋಬಟ್ಟೆ ಪಡೆದುಕೊಂಡರು. 25 ವರ್ಷಗಳ ದೀರ್ಘ ಸೇವೆಗಾಗಿ ಹಿರಿಯ ಶಕ್ಷಕಿ ಅರ್ಜುಮಂದ್ ರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಳೆದ ಸಾಲಿನ ಐ.ಸಿ.ಎಸ್.ಸಿ 10ನೆ ತರಗತಿಯ ವಾರ್ಷಿಕ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು 14 ವಿದ್ಯಾರ್ಥಿನೀಯರಿಗೆ ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು.







