ಮಂಚಿ: ಅಗ್ನಿ ಅವಘಡ; ಅಕೇಶಿಯಾ ಮರ, ಕಟ್ಟಿಗೆ ರಾಶಿ ಬೆಂಕಿಗಾಹುತಿ

ಮಣಿಪಾಲ: 80 ಬಡಗಬೆಟ್ಟು ಗ್ರಾಮದ ಮಂಚಿ ರಾಜೀವನಗರದ ಮೀಸಲು ಅರಣ್ಯ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಕಾಡಿನಲ್ಲಿ ಹತ್ತಿಕೊಂಡ ಬೆಂಕಿಯ ಕೆನ್ನಾಲಿಗೆ ಇಡೀ ಸುತ್ತಮುತ್ತಲಿನ ಪರಿಸರಕ್ಕೆ ವ್ಯಾಪಿಸಿದೆ. ಇದರಿಂದ ಸುತ್ತಮುತ್ತ ಪರಿಸರದಲ್ಲಿ ಕೆಲಕಾಲ ದಟ್ಟ ಹೊಗೆ ಆವರಿಸಿಕೊಂಡಿತ್ತು. ರಾಜೀವ ನಗರದ ರತ್ನ ಆಚಾರ್ಯ ಅವರ ಹಡಿಲು ಗದ್ದೆಯ ಹುಲ್ಲು ಗಾವಲು, ಮನೆಯೊಂದರ ಬಳಿ ರಾಶಿ ಹಾಕಿದ್ದ ಕಟ್ಟಿಗೆಯ ರಾಶಿ, ಕಾಡಿನ ಅಕೇಶಿಯ ಮರಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ.
ಮೊದಲಿಗೆ ಕಾಡಿನಲ್ಲಿ ಕಾಣಿಸಿಕೊಂಡ ಬೆಂಕಿಯ ಸಣ್ಣ ಕಿಡಿ, ನೋಡು ನೋಡುತ್ತಿದ್ದಂತೆ ವ್ಯಾಪಕವಾಗಿ ಹರಡಿದೆ. ರಾಜೀವನಗರದ 6ನೇ ಅಡ್ಡ ರಸ್ತೆಯ ಬಳಿಯ ಎರಡು ಎಕರೆಯಷ್ಟು ವ್ಯಾಪ್ತಿಯಲ್ಲಿ ಬೆಂಕಿ ಅವಘಡ ನಡೆದಿದೆ.
ಕೂಡಲೇ ಎಚ್ಚೆತ್ತ ಸ್ಥಳೀಯರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ ಎಂದು ಹೇಳಲಾಗಿದೆ.





