ಮಂಗಳೂರು: ಜುಗಾರಿ ಅಡ್ಡೆ, ಜೂಜು ಕೇಂದ್ರಗಳಿಗೆ ಡಿವೈಎಫ್ಐ ಮುತ್ತಿಗೆ

ಮಂಗಳೂರು: ನಗರದಲ್ಲಿ ಕಾರ್ಯಾಚರಿಸುತ್ತಿರುವ ಜುಗಾರಿ ಅಡ್ಡೆ, ವೀಡಿಯೋ ಗೇಮ್, ಸ್ಕಿಲ್ಗೇಮ್ಗಳನ್ನು ಶಾಶ್ವತವಾಗಿ ಮುಚ್ಚಬೇಕು ಎಂದು ಆಗ್ರಹಿಸಿ ಡಿವೈಎಫ್ಐ ಕಾರ್ಯಕರ್ತರು ಬುಧವಾರ ಜೂಜು ಕೇಂದ್ರಗಳಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯೊಳಗೆ ಸ್ಕಿಲ್ಗೇಮ್, ವಿಡಿಯೋ ಗೇಮ್, ಜುಗಾರಿ ಅಡ್ಡೆಗಳು ರಾಜಾರೋಷವಾಗಿ ಕಾರ್ಯಾಚರಿಸುತ್ತಿವೆ. ರಿಕ್ರಿಯೇಶನ್ ಕ್ಲಬ್ನ ಹೆಸರಿನಲ್ಲಿ ಜೂಜು ಕೇಂದ್ರಗಳನ್ನು ನಡೆಸಿ ಮೋಸದಾಟಕ್ಕೆ ಜನರನ್ನು ಬಲಿಪಡೆಯುತ್ತಿದೆ. ನಗರದ ಸಣ್ಣ ವ್ಯಾಪಾರಿಗಳು, ಕಾರ್ಮಿಕರು, ವಿದ್ಯಾರ್ಥಿಗಳನ್ನು ಒಳಗೊಂಡಂತೆ ಬಡ ಮಧ್ಯಮ ವರ್ಗದ ಕೂಲಿ ಕಾರ್ಮಿಕರನ್ನು ಈ ಅಡ್ಡೆಯು ಗುರಿಯಾಗಿಸಿ ಜನರ ದುಡಿಮೆಯ ಹಣವನ್ನು ದೋಚುವ ಕಾರ್ಯದಲ್ಲಿ ತೊಡಗಿದೆ ಎಂದು ಡಿವೈಎಫ್ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಆರೋಪಿಸಿದರು.
ಈ ಮೋಸದಾಟಕ್ಕೆ ಸಿಲುಕಿದ ಬಹಳಷ್ಟು ಕುಟುಂಬಗಳು ಮನೆ, ಅಮೂಲ್ಯ ಸೊತ್ತುಗಳನ್ನು ಕಳಕೊಂಡು ಬೀದಿಗೆ ಬಿದ್ದಿವೆ. ಇಂತಹ ಅಕ್ರಮ ಜೂಜು ಕೇಂದ್ರಗಳ ವಿರುದ್ಧ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರೂ ಸ್ಥಳೀಯ ಠಾಣೆಗಳ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಬರೀ ತೋರಿಕೆಗಷ್ಟೆ ಬಂದ್ ಮಾಡುವ ನಾಟಕ ಮಾಡಿ ಮತ್ತೆ ಕೆಲವು ದಿನದ ನಂತರ ಯಥಾಸ್ಥಿತಿಗೆ ಮರಳುವಂತೆ ಮಾಡುತ್ತಾರೆ ಎಂದು ಬಿ.ಕೆ.ಇಮ್ತಿಯಾಝ್ ಕಿಡಿಕಾರಿದರು.
ಈ ಸಂದರ್ಭ ಡಿವೈಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು, ನವೀನ್ ಕೊಂಚಾಡಿ, ಹನೀಫ್ ಬೆಂಗ್ರೆ, ಮುಸ್ತಫಾ ಕಲ್ಲಕಟ್ಟೆ, ರಿಯಾಬ್, ಆಸೀಫ್, ಸಾದಿಕ್ ಉಪಸ್ಥಿತರಿದ್ದರು.








