ಜ.13ರಿಂದ 17ರವರೆಗೆ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ: ಉಪ್ಪಿನಂಗಡಿಯಲ್ಲಿ ಭರದ ಸಿದ್ಧತೆ

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ.13ರಿಂದ 17ರ ತನಕ ಅಖಿಲ ಭಾರತ ಮಟ್ಟದ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಲಿದ್ದು, ಕಾಲೇಜಿನಲ್ಲಿ ನಿರ್ಮಿಸಲಾಗಿರುವ ಹೊಸ ಮೈದಾನದಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದರೆ, ಕ್ಯಾಂಪಸ್ ಆವರಣ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಾಲೇಜು ಕ್ಯಾಂಪಸ್ನ ಆವರಣದಲ್ಲಿ ನೇತ್ರಾವತಿ ನದಿ ದಡಕ್ಕೆ ತಾಗಿಕೊಂಡು ಪಾಳು ಬಿದ್ದು ಗುಡ್ಡದಂತಿದ್ದ ಜಾಗ ಇದೀಗ ವಿಶಾಲವಾದ ಕ್ರೀಡಾಂಗಣವಾಗಿ ಬದಲಾಗಿದೆ. ಕಳೆದ 1 ತಿಂಗಳಿಂದ ದಿನಂಪ್ರತಿ 25ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈಗಾಗಲೇ ಬಹುತೇಕ ಕೆಲಸಗಳು ಮುಗಿದಿವೆ. ಕೊನೆಯ ಹಂತದ ಅಂಕಣ ಸಿದ್ಧತೆ ಕೆಲಸಗಳು ಬಾಕಿ ಇವೆ. ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಮೈದಾನ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಲಿದೆ ಎಂದು ಹೇಳಲಾಗಿದೆ.
ಈ ಪಂದ್ಯಾಟದಲ್ಲಿ ಭಾಗವಹಿಸಲು ದೇಶದ ವಿವಿಧ ವಿಶ್ವವಿದ್ಯಾನಿಲಯಗಳನ್ನು ಪ್ರತಿನಿಧಿಸುವ ಸುಮಾರು 89 ತಂಡಗಳು ಹೆಸರನ್ನು ನೋಂದಾಯಿಸಿಕೊಂಡಿದ್ದು, 1000 ಸಾವಿರ ಕ್ರೀಡಾಪಟುಗಳು, 200 ಮಂದಿ ತೀರ್ಪುಗಾರರು, 300 ಮಂದಿ ಅಧಿಕಾರಿಗಳನ್ನೊಳಗೊಂಡಂತೆ ದೇಶದಾದ್ಯಂತದಿಂದ ಒಟ್ಟು 1500 ಮಂದಿ ಪಂದ್ಯಾಟದಲ್ಲಿ ನೇರವಾಗಿ ಭಾಗಿಯಾಗಲಿದ್ದಾರೆ. ಆರು ಅಂಕಣಗಳಲ್ಲಿ ಪಂದ್ಯಾಟ ನಡೆಯಲಿದೆ ಎಂದು ಪಂದ್ಯಾಟದ ಸಂಚಾಲಕ, ಕಾಲೇಜಿನ ಕ್ರೀಡಾ ನಿರ್ದೇಶಕ ಪ್ರವೀಣ್ ಕುಮಾರ್ ವಿವರಿಸಿದರು.
ಪಂದ್ಯಾಟ ನಡೆಯುವ ಮೈದಾನ ನದಿ ದಡದಲ್ಲಿರುವುದರಿಂದ ಈಗಾಗಲೇ ಎಲ್ಲಾ ತಂಡಗಳಿಗೆ ಮತ್ತು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸ್ವಚ್ಛತೆ ಮತ್ತು ರಕ್ಷಣೆಗೆ ಆದ್ಯತೆ ನೀಡಲಾಗಿದ್ದು, 100 ಮಂದಿ ಸ್ವಯಂ ಸೇವಕರನ್ನು ಮೈದಾನ ಸುತ್ತ ನಿಯೋಜನೆ ಮಾಡಲಾಗುವುದು. 10 ಮಂದಿ ರಾಷ್ಟ್ರ ಮಟ್ಟದ ತಾಂತ್ರಿಕ ಅಧಿಕಾರಿಗಳು, 50 ಮಂದಿ ದೈಹಿಕ ಶಿಕ್ಷಣ ನಿರ್ದೇಶಕರು ಸ್ಥಳದಲ್ಲಿ ಇರಲಿದ್ದಾರೆ ಎಂದು ಅವರು ವಿವರಿಸಿದರು.
ಪಂದ್ಯಾಟಕ್ಕೆ ಆಗಮಿಸುವ ಅಧಿಕಾರಿಗಳಿಗೆ ಉಪ್ಪಿನಂಗಡಿಯ ವಸತಿ ಗೃಹದಲ್ಲಿ ಮತ್ತು ಕ್ರೀಡಾಪಟುಗಳಿಗೆ ಶಾಲಾ ಕಾಲೇಜುಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೋರ್ವ ಆಟಗಾರರಿಗೂ ಹಾಸಿಗೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಪಂದ್ಯಾಟ ವೀಕ್ಷಣೆಗೆ ಬರುವವರ ವಾಹನವನ್ನು ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಒಟ್ಟಿನಲ್ಲಿ ಪಂದ್ಯಾಟ ವ್ಯವಸ್ಥಿತವಾಗಿ ಮತ್ತು ಶಿಸ್ತುಬದ್ಧವಾಗಿ ನಡೆಯುವಂತೆ ಎಲ್ಲಾ ಅಗತ್ಯ ಕ್ರಮ ಅನುಸರಿಸಲಾಗುವುದು ಎಂದು ಅವರು ತಿಳಿಸಿದರು.
ಪಂದ್ಯಾಟವನ್ನು ಜ. 13ರಂದು ಸಂಜೆ ಕರ್ನಾಟಕ ಸರಕಾರದ ಯುವಜನ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ಉದ್ಘಾಟಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು ಧ್ವಜಾರೋಹಣ ನೆರವೇರಿಸಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.