ನಮ್ಮದು ಪ್ರಜಾಪ್ರಭುತ್ವ ದೇಶವೇ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ: ಉಪರಾಷ್ಟ್ರಪತಿ ಜಗದೀಪ್ ಧನ್ಕರ್
ಜೈಪುರ (ರಾಜಸ್ಥಾನ): ಕೇಶವಾನಂದ ಭಾರತಿ ಪ್ರಕರಣದಲ್ಲಿ 1973ರಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಬುಧವಾರ ಇಲ್ಲಿ ಉಲ್ಲೇಖಿಸಿದ ಉಪರಾಷ್ಟ್ರಪತಿ ಜಗದೀಪ ಧನ್ಕರ್ ಅವರು, ‘ನಾವು ಪ್ರಜಾಪ್ರಭುತ್ವ ದೇಶವೇ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟವಾಗುತ್ತದೆ ’ಎಂದು ಹೇಳಿದರು. ಸಂಸತ್ತು ಸಂವಿಧಾನವನ್ನು ತಿದ್ದುಪಡಿಗೊಳಿಸುವ ಅಧಿಕಾರವನ್ನು ಹೊಂದಿದೆ,ಅದರ ಮೂಲ ಸ್ವರೂಪವನ್ನಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿತ್ತು.
ಇಲ್ಲಿ 83ನೇ ಅಖಿಲ ಭಾರತ ವಿಧಾನಸಭಾ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಧನ್ಕರ್,ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗ ಕಾಯ್ದೆ,2014ನ್ನು ರದ್ದುಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯದ 2015ರ ನಿರ್ಧಾರವನ್ನು ಎತ್ತಿ ತೋರಿಸುವ ಮೂಲಕ ನ್ಯಾಯಾಂಗ ಮತ್ತು ಶಾಸಕಾಂಗದ ಅಧಿಕಾರಗಳ ವಿಷಯವನ್ನು ಮತ್ತೆ ಪ್ರಸ್ತಾಪಿಸಿದರು. 2022ರಲ್ಲಿ ರಾಜ್ಯಸಭೆಯ ಸಭಾಪತಿಯಾಗಿ ತನ್ನ ಚೊಚ್ಚಲ ಭಾಷಣದಲ್ಲಿ ತಾನು ಈ ವಿಷಯವನ್ನು ಎತ್ತಿದ್ದೆ ಎಂದರು.
ಸಂಸದೀಯ ಸಾರ್ವಭೌಮತ್ವ ಮತ್ತು ಸ್ವಾಯತ್ತೆಯೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ,ಏಕೆಂದರೆ ಪ್ರಜಾಪ್ರಭುತ್ವದ ಉಳಿವಿಗೆ ಅವು ಅನಿವಾರ್ಯವಾಗಿವೆ ಎಂದು ಹೇಳಿದ ಅವರು,ನ್ಯಾಯಾಂಗ ಆದೇಶಗಳನ್ನು ಬರೆಯಲು ಶಾಸಕಾಂಗಕ್ಕೆ ಹೇಗೆ ಅಧಿಕಾರವಿಲ್ಲವೋ ಅದೇ ರೀತಿ ಶಾಸನಗಳನ್ನು ಮಾಡುವ ಅಧಿಕಾರ ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಇಲ್ಲ ಎಂದರು.
ಇದಕ್ಕೂ ಮುನ್ನ ಕಾರ್ಯಾಂಗ,ಶಾಸಕಾಂಗ ಮತ್ತು ನ್ಯಾಯಾಂಗ ಪರಸ್ಪರ ಗೌರವಿಸುವ ಮಹತ್ವದ ಕುರಿತು ಮಾತನಾಡಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು,ನ್ಯಾಯಾಂಗದ ಅಧಿಕಾರಗಳನ್ನು ಶಾಸಕಾಂಗಗಳು ಸದಾ ಗೌರವಿಸಿವೆ ಮತ್ತು ಸಂವಿಧಾನವು ಕಡ್ಡಾಯಗೊಳಿಸಿರುವ ಅಧಿಕಾರಗಳ ಪ್ರತ್ಯೇಕತೆಯನ್ನು ನ್ಯಾಯಾಂಗವು ಅನುಸರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಮೂರೂ ಅಂಗಗಳು ಪರಸ್ಪರ ನಂಬಿಕೆ ಮತ್ತು ಸಾಮರಸ್ಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.