ED ಅಧಿಕಾರಿಗಳೇ ನನಗೇನಾದರೂ ಕೊಟ್ಟು ಹೋಗಬೇಕಷ್ಟೇ..: ಈಡಿ ದಾಳಿ ಬಗ್ಗೆ ಸ್ಪಷ್ಟನೆ ನೀಡಿದ ಕಿಮ್ಮನೆ ರತ್ನಾಕರ್
ತೀರ್ಥಹಳ್ಳಿ, ಜ.11: 'ನನ್ನ ಮನೆ ಮತ್ತು ಕಚೇರಿ ಮೇಲೆ ಯಾವುದೇ ರೀತಿಯ ಈಡಿ ದಾಳಿ ನಡೆದಿಲ್ಲ' ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ಈಡಿ ದಾಳಿ ಕುರಿತು ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿರುವ ಅವರು, ನಾನು ಬಾಡಿಗೆಗಿದ್ದ ಕಟ್ಟಡದ ಮೇಲೆ ಈಡಿ ದಾಳಿ ನಡೆದಿದೆ. ಬೆಳಿಗ್ಗೆ ನಮ್ಮ ಕಚೇರಿಗೆ ಬಂದ ಈಡಿ ಅಧಿಕಾರಿಗಳು ನನ್ನನ್ನು ಕಚೇರಿಗೆ ಕರೆಯಿಸಿದ್ದರು. ಆಗ ನಾನು ಕಚೇರಿ ಬಾಡಿಗೆ ಪಡೆದಿರುವ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದರು.
ಹಾಶಿಮ್ ಎಂಬುವರ ಕಟ್ಟಡವನ್ನು ಹತ್ತು ವರ್ಷಕ್ಕೆ ಲೀಸ್ ಪಡೆದಿದ್ದೇವೆ. ಜೊತೆಗೆ ಒಂದು ತಿಂಗಳಿಗೆ ಒಂದು ಸಾವಿರ ಬಾಡಿಗೆ ನೀಡುತಿದ್ದೇವೆ. ಹತ್ತು ಲಕ್ಷ ರೂಪಾಯಿ ವಾಪಸ್ ಕೊಟ್ಟ ದಿನವೇ ನಾವು ಕಟ್ಟಡ ಖಾಲಿ ಮಾಡುವುದಾಗಿ ಹೇಳಿದ್ದೇವೆ. ಹಾಶಿಮ್ ಮತ್ತು ನಮ್ಮ ನಡುವೆ ಇರುವುದು ಮಾಲಕ ಹಾಗೂ ಬಾಡಿಗೆದಾರ ಸಂಬಂಧವಷ್ಟೇ ಎಂದು ಹೇಳಿದ್ದಾರೆ.
'ಹಾಶಿಮ್ಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಮನೆ ಮೇಲೆ ಈಡಿ ದಾಳಿಯಾದರೆ ಹತ್ತು ಸಾವಿರ ರೂಪಾಯಿಯೂ ಸಿಗುವುದಿಲ್ಲ. ಮನೆಯಲ್ಲಿರುವ ಸೋಫಾ ಹಾಗೂ ಫ್ರಿಡ್ಜ್ಗಳನ್ನೇನಾದರೂ ತೆಗೆದುಕೊಂಡು ಹೋಗಬೇಕಷ್ಟೇ. ಇಲ್ಲವೇ ಈಡಿಯವರೇ ನನಗೇನಾದರೂ ಕೊಟ್ಟು ಹೋಗಬೇಕು. ಹಾಶಿಮ್ಗೂ ಗೃಹಸಚಿವ ಆರಗ ಜ್ಞಾನೇಂದ್ರ ಅವರಿಗೂ ಏನು ಸಂಬಂಧವೋ ಗೊತ್ತಿಲ್ಲ ಅವರನ್ನೇ ಕೇಳಬೇಕು' ಎಂದು ಹೇಳಿದ್ದಾರೆ.
ತೀರ್ಥಹಳ್ಳಿಯಲ್ಲಿ ಕೋಮುಗಲಭೆ ಸೃಷ್ಟಿಸುವವರೇ ಆರಗ ಜ್ಞಾನೇಂದ್ರ. ಈ ಹಿಂದೆ ನಡೆದ ಕೋಮುಗಲಭೆಯಲ್ಲಿ ಆರಗ ಜ್ಞಾನೇಂದ್ರ ಅವರೇ ಆರೋಪಿಯಾಗಿದ್ದರು. ಈಗಲೂ ಕೋಮು ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆಯೇ ಎಂಬ ಅನುಮಾನವಿದೆ. ಬಿಜೆಪಿ ಆಡಳಿತದಲ್ಲಿ ಮಾನ ಮರ್ಯಾದೆ ಎಲ್ಲವನ್ನೂ ಕಳೆದುಕೊಂಡಿದೆ. ಹೀಗಾಗಿ ಇದೀಗ ಜಾತಿ ಧರ್ಮದ ವಿಷಯದಲ್ಲಿ ಏನಾದರೂ ಸಿಗುತ್ತದೆಯಾ ಎಂದು ನೋಡುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.