ಜೈಲಿನಲ್ಲಿ ನಾಲ್ಕೈದು ಅಡಿ ಜಾಗದಲ್ಲಿದ್ದವನು ನಾನು, ಆಸ್ತಿ ಜಪ್ತಿಗೆ ಹೆದರುವ ಪ್ರಶ್ನೆಯೇ ಇಲ್ಲ: ಜನಾರ್ದನ ರೆಡ್ಡಿ
ಕೊಪ್ಪಳ, ಜ. 11: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಹೊಸ ಪಕ್ಷವನ್ನು ಸ್ಥಾಪಿಸಿದ ಹಿನ್ನೆಲೆಯಲ್ಲಿ ನನ್ನ ಆಸ್ತಿಪಾಸ್ತಿ ಜಪ್ತಿಗೆ ಸಿಬಿಐ ಮುಂದಾಗಿದ್ದು, ಇದಕ್ಕೆ ನಾನು ಹೆದರುವ ಪ್ರಶ್ನೆಯೇ ಇಲ್ಲ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ತಿರುಗೇಟು ನೀಡಿದ್ದಾರೆ.
ಬುಧವಾರ ಜಿಲ್ಲೆಯ ಗಂಗಾವತಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾರಾಗೃಹದಲ್ಲಿ ನಾಲ್ಕೈದು ಅಡಿ ಜಾಗದಲ್ಲಿದ್ದವನು ನಾನು. ನನ್ನ ಬಂಧನದ ವೇಳೆ ಸಿಬಿಐ 1,200 ಕೋಟಿ ರೂ.ಆಸ್ತಿ ಜಪ್ತಿ ಮಾಡಿದ್ದರು. ಆದರೆ, ಹೈಕೋರ್ಟ್ನಲ್ಲಿ ಗೆದ್ದಿದ್ದೆ. ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.
ನನ್ನ ವೇಗ ಸ್ವಲ್ಪ ಜಾಸ್ತಿ. ಹೀಗಾಗಿಯೇ 1,200 ಕೋಟಿ ರೂ.ಇದ್ದ ಆಸ್ತಿ ಇದೀಗ 4 ಸಾವಿರ ಕೋಟಿ ರೂ.ಗಳಾಗಿದೆ. ಹನುಮ ಹುಟ್ಟಿದ ನಾಡಿಗೆ ನಾನು ಬಂದಿದ್ದೇನೆ, ನನಗೆ ಲಕ್ಷ್ಮೀ ಕೃಪೆ ಇದೆ. ಇನ್ನೂ ಮುಂದೆ ನಾನು ಯಾವುದೇ ಕಾರಣಕ್ಕೂ ಕಣ್ಣೀರು ಹಾಕುವುದಿಲ್ಲ. 12 ವರ್ಷಗಳ ಹಿಂದೆಯೇ ಆ ಕೆಲಸವನ್ನು ಮಾಡಿದ್ದು, ಇದೀಗ ಅದೆಲ್ಲ ಮುಗಿದಿದೆ ಎಂದು ರೆಡ್ಡಿ ಹೇಳಿದರು.
ಯಾರೇ ಏನೇ ಮಾಡಿದರೂ ನಾನು ಮತ್ತೆ ರಾಜಕೀಯಕ್ಕೆ ಬಂದಿದ್ದೇನೆ. ಗಂಗಾವತಿ ಅಭಿವೃದ್ಧಿ ಮಾಡುವುದು ನನ್ನ ಗುರಿ. ಚುನಾವಣೆಗೆ ಇನ್ನೂ 3 ತಿಂಗಳು ಇದೆ. ಇನ್ನೂ ಏನೇನು ಆಗುತ್ತೋ ನೋಡೋಣ. ನನ್ನ ಮೇಲೆ ಕೋರ್ಟ್ನಲ್ಲಿ ಆರೋಪವಿದೆ. ಅದೆಲ್ಲ ಬಯಲಿಗೆ ಬರುತ್ತೆ. ಅದು ಗೊತ್ತಾದ ಮೇಲೆಯೇ ನನ್ನ ಉಸಿರು ಹೋಗುವುದು ಎಂದು ಜನಾರ್ದನ ರೆಡ್ಡಿ ಹೇಳಿದರು.
ಇದನ್ನೂ ಓದಿ: ಜನಾರ್ದನ ರೆಡ್ಡಿಯವರ ಹೊಸ ಪಕ್ಷಕ್ಕೆ ಶ್ರೀರಾಮುಲು ಹೋಗುವುದು ಯಾವಾಗ?: ಕಾಂಗ್ರೆಸ್ ಪ್ರಶ್ನೆ