ಜ.15: ಬಂದರು ಕಸಾಯಿಗಲ್ಲಿಯಲ್ಲಿ ರಕ್ತದಾನ, ಉಚಿತ ಆರೋಗ್ಯ ತಪಾಸಣೆ, ವಿಕಲಚೇತನರಿಗೆ ಪರಿಕರ ವಿತರಣೆ ಕಾರ್ಯಕ್ರಮ

ಪಣಂಬೂರು, ಜ.12: ಮಂಗಳೂರಿನ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ನೇತೃತ್ವದಲ್ಲಿ ವಫಾ ಎಂಟರ್ಪ್ರೈಸಸ್, ಕಾಟಿಪಳ್ಳ ಸಂಘಸಂಸ್ಥೆಗಳ ಒಕ್ಕೂಟದ ಆಶ್ರಯದಲ್ಲಿ ಜ.15ರಂದು ನಡೆಯುವ ರಕ್ತದಾನ ಶಿಬಿರ ಅಭಿಯಾನದ ಭಿತ್ತಿಪತ್ರವನ್ನು ಸೋಮವಾರ ಅನಾವರಣಗೊಳಿಸಲಾಯಿತು.
ಈ ವೇಳೆ ಮಾತನಾಡಿದ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಗೌರವ ಸಲಹೆಗಾರ ಹುಸೈನ್ ಕಾಟಿಪಳ್ಳ, ಜ.15ರಂದು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಕಾಟಿಪಳ್ಳದ ಜಾಸ್ಮಿನ್ ಮಹಲ್ ಹಾಗೂ ಬಂದರ್ ಫ್ರೆಂಡ್ಸ್ ಮಂಗಳೂರು ಇವುಗಳ ನೇತೃತ್ವದಲ್ಲಿ ಬಂದರು ಕಸಾಯಿಗಲ್ಲಿಯಲ್ಲಿರುವ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ, ಉಚಿತ ಆರೋಗ್ಯ ತಪಾಸಣೆ, ವಿಕಲಚೇತನರಿಗೆ ಪರಿಕರಗಳ ವಿತರಣೆ ಕಾರ್ಯಕ್ರಮ ಏಕಕಾಲದಲ್ಲಿ ನಡೆಯಲಿದೆ ಎಂದರು.
ಸಂಸ್ಥೆಯ ಪ್ರಮುಖರಾದ ರುಬಿಯಾ ಅಕ್ತರ್ ಮಾತನಾಡಿ ರಕ್ತದಾನ ಶಿಬಿರಕ್ಕೆ ವೆನ್ಲಾಕ್ ಹಾಗೂ ಕೆಎಂಸಿ ವೈದ್ಯರು ಸಹಕಾರ ನೀಡುತ್ತಿದ್ದಾರೆ.
ವೆನ್ಲಾಕ್ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ರಕ್ತ ದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರಿಗೆ 3 ತಿಂಗಳ ಉಚಿತ ಡಯಾಲಿಸಿಸ್, ವಿಕಲಚೇತನರಿಗೆ ವೀಲ್ ಚೆಯರ್, ವಾಕರ್ ಮುಂತಾದ ಪರಿಕರಗಳ ವಿತರಣೆ ಹಾಗೂ ವಫಾ ಎಂಟರ್ಪ್ರೈಸಸ್ ನ ಮಾಸಿಕ ಸ್ಟೀಮ್ ಹಾಗೂ ವಿಶೇಷ ಲಕ್ಕೀ ಡ್ರಾದ ವಿಜೇತರಿಗೆ ನಿಗದಿತ ಸಾಮಗ್ರಿಗಳನ್ನು ವಿತರಿಸಲಾಗುತ್ತದೆ ಎಂದವರು ವಿವರಿಸಿದರು.
ಫೆ.15ರಂದು ಬೆಂಗ್ರೆಯಲ್ಲಿ ಮಂಗಳೂರಿನ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಮತ್ತು ಕುರಾನ್ ದೀನ್ ಅಸೋಸಿಯೇಶನ್ ನೇತೃತ್ವದಲ್ಲಿ ರಕ್ತದಾನ ನಡೆಯಲಿದೆ ಎಂದವರು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ.ಓಸ್ವಾಲ್ಡ್ ಫುರ್ಟಾಡೋ ಮಾತನಾಡಿ, ನಮ್ಮ ಸಂಸ್ಥೆ ಹಾಗೂ ಲಯನ್ಸ್ ಕದ್ರಿ ವತಿಯಿಂದ ಜ.3 ರಂದು ಇಬ್ಬರಿಗೆ ಕಣ್ಣು ದಾನ ನೀಡಿ ಬೆಳಕಾಗಿದ್ದೇವೆ.ಇದರ ವೆಚ್ಚ ಭರಿಸಿದ್ದೇವೆ. ಇದರ ಜತೆಗೆ ಕಳೆದ 6 ವರ್ಷಗಳಲ್ಲಿ ಸಂಸ್ಥೆ ರಕ್ತದಾನ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದೆ ಎಂದರು.
ಮಂಗಳೂರಿನ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಸ್ಥಾಪಕಾಧ್ಯಕ್ಷ ರವೂಫ್ ಬಂದರ್, ಕುರಾನ್ ದೀನ್ ಇದರ ಅಧ್ಯಕ್ಷ ಎಂ.ಕೆ ಅಬ್ದುಲ್ ನಾಸಿರ್, ಬಂದರ್ ಫ್ರೆಂಡ್ಸ್ ಪ್ರಮುಖರಾದ ಜೆ.ಅಲ್ತಾಫ್, ಎಂ.ಕೆ.ಫಯಾಝ್, ವುಮೆನ್ಸ್ ವಿಂಗ್ ನ ಆಲಿಶಾ ಅಮೀನ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.