ಮಹತ್ವದ ಜವಾಬ್ದಾರಿ ಹೊತ್ತು ನಿಮ್ಮ ಮುಂದೆ ಬಂದಿದ್ದೇನೆ: ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಪರ ಪುತ್ರಿಯಿಂದ ಪ್ರಚಾರ
ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರಿ ಬ್ರಾಹ್ಮಿಣಿ ರೆಡ್ಡಿ ರಾಜಕೀಯ ಪ್ರವೇಶ ಮಾಡಿದ್ದು, ಮುಂಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ತಂದೆಯನ್ನು ಬೆಂಬಲಿಸಿ ಬಳ್ಳಾರಿ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಪ್ರಚಾರ ಮಾಡುವೆ ಎಂದು ಘೋಷಿಸಿದ್ದಾರೆ.
ಅವರು ಬುಧವಾರ ಜನಾರ್ದನ ರೆಡ್ಡಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಬಳ್ಳಾರಿಯ ಅವರ ನಿವಾಸದ ಎದುರಿನ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
'ಒಂದು ಕಡೆ ಸಂತೋಷ, ಇನ್ನೊಂದು ಕಡೆ ದುಃಖ. ಮಹತ್ವದ ಜವಾಬ್ದಾರಿ ಹೊತ್ತು ನಿಮ್ಮ ಮುಂದೆ ಬಂದಿದ್ದೇನೆ. ಕಲ್ಯಾಣ ರಾಜ್ಯದ ಕನಸು ನನಸು ಮಾಡಲು ಜನಾರ್ದನ ರೆಡ್ಡಿ ನಿಂತಿದ್ದಾರೆ. ಜನರ ಅಭಿವೃದ್ಧಿಗಾಗಿ ಮತ್ತೊಮ್ಮೆ ರಾಜಕೀಯ ಪಕ್ಷ ಕಟ್ಟಿದ್ದಾರೆ. ಅವರ ಕಟ್ಟಿದ ಸಾಮ್ರಾಜ್ಯದಿಂದ ಅವರೇ ದೂರವಾಗೋ ಸ್ಥಿತಿ ಬಂದಿದೆ. ಜನ್ಮ ಭೂಮಿಯ ಬಗ್ಗೆ ಅಪಾರ ಗೌರವ ಹೊಂದಿರುವ ಜನಾರ್ದನ ರೆಡ್ಡಿ ಅವರು, ಬಳ್ಳಾರಿಯಿಂದ ದೂರ ಇರುತ್ತೇನೆ ಎಂದು ನನ್ನ ಕುಟುಂಬ ಯಾವತ್ತು ಅಂದುಕೊಂಡಿರಲಿಲ್ಲ ಎಂದು ವಿಷಾದಿಸಿದ್ದಾರೆ' ಎಂದು ಬ್ರಾಹ್ಮಿಣಿ ಕಾರ್ಯಕರ್ತರಿಗೆ ತಿಳಿಸಿದರು.
'ಜನಾರ್ದನ ರೆಡ್ಡಿ ಒಬ್ಬಂಟಿಯಲ್ಲ, ನಿಮ್ಮಲ್ಲರ ಆಶೀರ್ವಾದ ನಮ್ಮ ಮೇಲಿದೆ. ಮನೆ ಮನೆಗೂ ಬಂದು ಪಕ್ಷದ ಬಗ್ಗೆ ಹೇಳ್ತೇನೆ. ಶೀಘ್ರದಲ್ಲೇ ಪ್ರಣಾಳಿಕೆ ಬಿಡುಗಡೆ ಮಾಡ್ತೇವೆ. ಜನರಿಂದ ಬಳ್ಳಾರಿಗೆ ಮತ್ತೊಮ್ಮೆ ಜನಾರ್ದನ ರೆಡ್ಡಿ ಬರಬೇಕು' ಎಂದು ಜನರಿಂದ ಬ್ರಾಹ್ಮಿಣಿ ಹೇಳಿಸಿದರು.
ಇದನ್ನೂ ಓದಿ: ನಾನು ಕಾಂಗ್ರೆಸ್ ಸೇರುವುದು ಖಚಿತ: ಎಚ್.ವಿಶ್ವನಾಥ್