ತೀವ್ರ ಆಕ್ರೋಶದ ಬಳಿಕ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ
ಬೆಂಗಳೂರು, ಜ. 12: ಹೊಸದಿಲ್ಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ-2023ರ ಪರೇಡ್ನಲ್ಲಿ ಕರ್ನಾಟಕ ರಾಜ್ಯದ ಸ್ತಬ್ಧಚಿತ್ರಕ್ಕೆ ಕೊನೆಗೂ ಅವಕಾಶ ಕಲ್ಪಿಸಲಾಗಿದೆ.
ಗುರುವಾರ ಈ ಸಂಬಂಧ ಕೇಂದ್ರ ಸರಕಾರದ ಅಧೀನ ಕಾರ್ಯದರ್ಶಿ ಅಶೋಕ್ ಪಾಂಡೆ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ದಿಲ್ಲಿ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಈ ಮುಂಚೆ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ದೊರೆತಿರಲಿಲ್ಲ. ಆ ಹಿನ್ನೆಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿಯೂ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು.
ಆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದ ಸ್ತಬ್ಧಚಿತ್ರಕ್ಕೆ ಗಣರಾಜ್ಯೋತ್ಸವ ಪರೇಡ್ನಲ್ಲಿ ಅವಕಾಶ ಕಲ್ಪಿಸಬೇಕೆಂದು ಒತ್ತಡ ಹೇರಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸ್ಪಂದಿಸಿದ್ದು, ಕೊನೆಗೆ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಸರಕಾರ ‘ಸ್ತಬ್ಧಚಿತ್ರ’ ಸಂಬಂಧ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಲಗತ್ತಿಸಿದ್ದಾರೆ. ಸ್ತಬ್ಧಚಿತ್ರ ಜ.19ರ ವೇಳೆಗೆ ಸಿದ್ಧಗೊಳ್ಳಬೇಕು. ಜ.23ರಿಂದ ಪರೇಡ್ ಪೂರ್ವಸಿದ್ಧತೆ ನಡೆಯಲಿದೆ. ಹೀಗಾಗಿ ನಿಗದಿತ ದಿನದೊಳಗೆ ಸ್ತಬ್ಧಚಿತ್ರ ತಯಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
ಕರ್ನಾಟಕ ಪ್ರತಿನಿಧಿಸುವ 2023ರ ಸ್ತಬ್ಧಚಿತ್ರದಲ್ಲಿ ‘ನಾರಿಶಕ್ತಿ’ ವಿಷಯ ವಸ್ತುವಾಗಿದೆ. ಈ ವಿಷಯ ವಸ್ತು ಆರಂಭದ ಕೆಲ ಸುತ್ತಿನಲ್ಲಿ ಆಯ್ಕೆಯಾಗಿತ್ತು. ಸ್ತಬ್ಧಚಿತ್ರದ ವಿನ್ಯಾಸ ಮತ್ತು ಸಂಗೀತಕ್ಕೆ ತಜ್ಞರ ಸಮಿತಿ ಒಪ್ಪಿಗೆ ನೀಡಿತ್ತು. ಆದರೆ ಕೊನೆಯ ಸುತ್ತಿನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಕಳೆದ ಬಾರಿ ‘ಸಾಂಸ್ಕೃತಿಕ ತೊಟ್ಟಿಲು’ ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಕರ್ನಾಟಕ ರಾಜ್ಯ ಪ್ರದರ್ಶಿಸಿದ್ದ ಸ್ತಬ್ಧಚಿತ್ರಕ್ಕೆ ದ್ವಿತೀಯ ಪ್ರಶಸ್ತಿ ಲಬಿಸಿತ್ತು.
ಇದನ್ನೂ ಓದಿ: 13 ವರ್ಷ ಬಳಿಕ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಗಳು ಇಲ್ಲ!