ಉಕ್ರೇನ್ ಯುದ್ಧಕ್ಕೆ ಮತ್ತೆ ಹೊಸ ಕಮಾಂಡರ್ ನೇಮಿಸಿದ ರಶ್ಯ
![ಉಕ್ರೇನ್ ಯುದ್ಧಕ್ಕೆ ಮತ್ತೆ ಹೊಸ ಕಮಾಂಡರ್ ನೇಮಿಸಿದ ರಶ್ಯ ಉಕ್ರೇನ್ ಯುದ್ಧಕ್ಕೆ ಮತ್ತೆ ಹೊಸ ಕಮಾಂಡರ್ ನೇಮಿಸಿದ ರಶ್ಯ](https://www.varthabharati.in/sites/default/files/images/articles/2023/01/12/363611-1673544657.jpeg)
ಮಾಸ್ಕೊ, ಜ.12: ಉಕ್ರೇನ್ ವಿರುದ್ಧದ ಯುದ್ಧದ ಉಸ್ತುವಾರಿ ವಹಿಸುವ ಸೇನಾ ಕಮಾಂಡರ್ ಅನ್ನು 3 ತಿಂಗಳಲ್ಲೇ ಮತ್ತೊಮ್ಮೆ ಬದಲಿಸಿರುವ ರಶ್ಯ, ವ್ಯಾಲರಿ ಗೆರಸಿಮೋವ್ರನ್ನು ಈ ಹುದ್ದೆಗೆ ನೇಮಿಸಿ ಬುಧವಾರ ಆದೇಶ ಜಾರಿಗೊಳಿಸಿದೆ.
ಕಳೆದ ಅಕ್ಟೋಬರ್ ನಲ್ಲಿ ಸೇನಾ ಕಮಾಂಡರ್ ಆಗಿ ನೇಮಕಗೊಂಡಿದ್ದ ಜನರಲ್ ಸೆರ್ಗೆಯ್ ಸುರೊವಿಕಿನ್, ಸೇನಾಪಡೆಗೆ ಉಕ್ರೇನ್ ನ ಇಂಧನ ಮೂಲಸೌಕರ್ಯಕ್ಕೆ ದಾಳಿ ನಡೆಸಲು ಆದೇಶಿಸಿದ್ದರು ಎಂಬ ವಿವಾದದ ಬಳಿಕ ಅವರನ್ನು ಹುದ್ದೆಯಿಂದ ತೆರವುಗೊಳಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ, ರಶ್ಯದ ಬಾಡಿಗೆ ಸಿಪಾಯಿಗಳ ತುಕಡಿ `ವಾಗ್ನರ್' ಉಕ್ರೇನ್ನ ಸೊಲೆದಾರ್ ನಗರವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದಿದ್ದು ಈ ಸಂಘರ್ಷದಲ್ಲಿ ಸುಮಾರು 500 ಉಕ್ರೇನ್ ಸೈನಿಕರು ಹತರಾಗಿದ್ದಾರೆ ಎಂದು `ವಾಗ್ನರ್' ತುಕಡಿಯ ಕಮಾಂಡರ್ ಯೆವ್ಜಿನಿ ಪ್ರಿಗೊಝಿನ್ ಹೇಳಿದ್ದಾರೆ. ಈ ನಗರದಲ್ಲಿ 15 ಮಕ್ಕಳ ಸಹಿತ 559 ನಾಗರಿಕರು ಸಿಕ್ಕಿಬಿದ್ದಿದ್ದು ತೀವ್ರ ಸಂಘರ್ಷ ಮುಂದುವರಿದಿರುವುದರಿಂದ ಅವರನ್ನು ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಡೊನೆಟ್ಸ್ಕ್ ಪ್ರಾಂತದ ಗವರ್ನರ್ ಪಾವ್ಲೊ ಕಿರಿಲೆಂಕೊರನ್ನು ಉಲ್ಲೇಖಿಸಿ ಉಕ್ರೇನ್ನ ಟಿವಿ ವಾಹಿನಿ ವರದಿ ಮಾಡಿದೆ.