ಸ್ವಾಮಿ ವಿವೇಕಾನಂದರು ಪ್ರಧಾನಿ ಮೋದಿಯಾಗಿ ಪುನರ್ಜನ್ಮ ಪಡೆದಿದ್ದಾರೆ ಎಂದ ಬಿಜೆಪಿ ಸಂಸದ

ಕೋಲ್ಕತ್ತ: ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಸೌಮಿತ್ರಾ ಖಾನ್ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದರ ಪುನರ್ಜನ್ಮ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.
ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಖಾನ್, "ಸ್ವಾಮೀಜಿ ಅವರು ಪ್ರಧಾನಿ ನರೇಂದ್ರ ಮೋದಿಯಾಗಿ ಹೊಸ ಲುಕ್ನಲ್ಲಿ ಮರುಜನ್ಮ ಪಡೆದಿದ್ದಾರೆ, ನಮಗೆ ಸ್ವಾಮೀಜಿ ದೇವರಿಗೆ ಸಮಾನ" ಎಂದರು.
"ಇಂದು ಪ್ರಧಾನಿ ಮೋದಿಯವರು ತಮ್ಮ ತಾಯಿಯನ್ನು ಕಳೆದುಕೊಂಡಾಗಲೂ ಈ ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ರೀತಿ, ಅವರು ಆಧುನಿಕ ಭಾರತದ ಸ್ವಾಮಿ ವಿವೇಕಾನಂದ ಎಂದು ನಾನು ಭಾವಿಸುತ್ತೇನೆ" ಎಂದು ಖಾನ್ ಹೇಳಿದರು.
ಖಾನ್ ಅವರ ಹೇಳಿಕೆಗಳು ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ)ಯಿಂದ ವ್ಯಾಪಕ ಟೀಕೆಗೊಳಗಾಗಿದೆ.
ಟಿಎಂಸಿ ಸಚಿವ ಮತ್ತು ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಅವರು ಖಾನ್ ಅವರ ಕಾಮೆಂಟ್ ಅನ್ನು ಸ್ವಾಮಿ ವಿವೇಕಾನಂದರಿಗೆ 'ಅವಮಾನ' ಎಂದು ಬಣ್ಣಿಸಿದ್ದಾರೆ ಮತ್ತು ಸ್ವಾಮಿ ವಿವೇಕಾನಂದರ ಸಿದ್ಧಾಂತವು ಬಿಜೆಪಿಯ ಸಿದ್ಧಾಂತಕ್ಕೆ ನಿಖರವಾಗಿ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಸ್ವಾಮಿ ವಿವೇಕಾನಂದ ಮತ್ತು ಪ್ರಧಾನಿ ಮೋದಿ ನಡುವೆ ಈ ರೀತಿಯ ಹೋಲಿಕೆಗಳನ್ನು ನಡೆಸಿ ಹೇಳಿಕೆ ನೀಡಿದ್ದು ಇದೇ ಮೊದಲಲ್ಲ. ಈ ಹಿಂದೆ ಬಿಹಾರದ ಬಿಜೆಪಿ ಅಧ್ಯಕ್ಷ ನಿತ್ಯಾನಂದ ರೈ ಇದೇ ಹೇಳಿಕೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದರ ಪುನರ್ಜನ್ಮ ಎಂದು ಹೇಳಿದ್ದರು.







