‘ಮದ್ಯ ಖರೀದಿ’ ವಯಸ್ಸಿನ ಮಿತಿ 21 ರಿಂದ 18ಕ್ಕೆ ಇಳಿಕೆಗೆ ಚಿಂತನೆ: ವಿದ್ಯಾರ್ಥಿ ಸಂಘಟನೆಗಳಿಂದ ವ್ಯಾಪಕ ವಿರೋಧ
ಬೆಂಗಳೂರು, ಜ.13: ರಾಜ್ಯ ಸರಕಾರವು ‘ಮದ್ಯ ಖರೀದಿಸುವ ವಯಸ್ಸಿನ’ ನಿರ್ಬಂಧವನ್ನು 21 ರಿಂದ 18 ವರ್ಷಕ್ಕೆ ಇಳಿಸುವ ಕುರಿತು ‘ಕರ್ನಾಟಕ ಅಬಕಾರಿ ನಿಯಮಗಳು–2023’ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ವಿದ್ಯಾರ್ಥಿ ಸಂಘಟನೆಗಳು ಸರಕಾರದ ಈ ನಿರ್ಧಾರಕ್ಕೆ ವಿರೋಧವನ್ನು ವ್ಯಕ್ತಪಡಿಸಿವೆ.
2015ರ ವರೆಗೆ ಆಲ್ಕೊಹಾಲ್ ಪಾನೀಯಗಳನ್ನು ಖರೀದಿಸಲು ಕಾನೂನುಬದ್ಧ ವಯಸ್ಸನ್ನು 18 ವರ್ಷವಿತ್ತು. 1967ರ ಕರ್ನಾಟಕ ಅಬಕಾರಿ ಪರವಾನಗಿ ನಿಯಮಗಳಿಗೆ ತಿದ್ದುಪಡಿ ಮಾಡುವ ಮೂಲಕ ಮದ್ಯ ಖರೀದಿ ವಯಸ್ಸನ್ನು 21ವರ್ಷಕ್ಕೆ ಹೆಚ್ಚಿಸಲಾಯಿತು. ಆದರೆ ಈಗ ಸರಕಾರ ಮಧ್ಯ ಖರೀದಿಸುವ ವಯಸ್ಸನ್ನು 18ವರ್ಷಕ್ಕೆ ಇಳಿಸಲು ಚಿಂತನೆ ನಡೆಸುತ್ತಿದೆ.
ಎಸ್ಎಫ್ಐ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷ ವಾಸುದೇವ ರೆಡ್ಡಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ‘ರಾಮ ರಾಜ್ಯದ ಬಗ್ಗೆ ಹೇಳುವ ಬಿಜೆಪಿ ಸರಕಾರ ಯುವಕರಿಗೆ ಮದ್ಯ ಬೇಗನೆ ಸಿಗುವಂತೆ ಮಾಡಿ ಪಾನ ರಾಜ್ಯ ಮಾಡಲು ಚಿಂತಿಸುತ್ತಿದೆ. ಹಾಗಾಗಿ ಮಧ್ಯ ಖರೀದಿಯ ವಯಸ್ಸನ್ನು ಇಳಿಸಿದೆ. ನಿರುದ್ಯೋಗ ಸೇರಿದಂತೆ ಹಲವಾರು ಸಮಾಜಘಾತುಕ ಶಕ್ತಿಗಳಿಗೆ, ಕೋಮುವಾದಕ್ಕೆ, ಜಾತಿ-ಅಸ್ಪೃಶ್ಯತೆಗೆ ಒಳಗಾಗುತ್ತಿದ್ದಾರೆ. ಇದೆಲ್ಲದರ ಜೊತೆಗೆ ಆನ್ಲೈನ್ ಜೂಜಾಟ ಹೆಚ್ಚಾಗಿದ್ದು, ಯುವಜನರು ಇವುಗಳಲ್ಲಿ ತೊಡಗಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿರುವಾಗ ಸರಕಾರ ಮದ್ಯ ಖರೀದಿಯ ವಯಸ್ಸನ್ನು ಇಳಿಸಿ ದೊಡ್ಡ ಪ್ರಮಾಣದಲ್ಲಿ ಯುವ ಜನರನ್ನು ಕುಡುಕರನ್ನಾಗಿ ಮಾಡುವ ಹುನ್ನಾರ ಮಾಡುತ್ತಿದೆ’ ಎಂದು ಟೀಕಿಸಿದ್ದಾರೆ.
‘ಜನರನ್ನು ಕುಡಿಸಲು ಸರಕಾರವೇ ಅಬಕಾರಿ ಇಲಾಖೆಗೆ ಟಾರ್ಗೆಟ್ ನೀಡಿರಬಹುದು ಎಂದು ಅನುಮಾನ ಉಂಟಾಗಿದೆ. ಬಿಜೆಪಿ ಸರಕಾರ ಈಗಾಗಲೆ ಯುವಜನರನ್ನು ಜಾತಿ-ಧರ್ಮ, ಕೋಮುಗಲಭೆ ಅನ್ನುವ ಅಮಲಿನಲ್ಲಿ ಮುಳುಗಿಸಿದೆ. ಇದೀಗ ಮತ್ತೆ ದೈಹಿಕ ಮತ್ತು ಮಾನಸಿಕ ಅಮಲಿನಲ್ಲೆ ಯುವಜನರು ಇರಬೇಕು ಎಂದು ಬಯಸುತ್ತಿದೆ. ಒಟ್ಟಿನಲ್ಲಿ ಯುವಜನರ ಮಾನಸಿಕ ಮತ್ತು ದೈಹಿಕ ಆರೋಗ್ಯ ಹಾಗೂ ಅವರ ಭವಿಷ್ಯವನ್ನು ಹಾಳುಮಾಡಲು ಪಣತೊಟ್ಟು ನಿಂತಿದೆ’
-ಸರೋವರ್ ಬೆಂಕಿಕೆರೆ, ಕೆವಿಎಸ್ ಸಂಘಟನೆಯ ಸಂಚಾಲಕ
--------------------------------------------------
‘ಈಗಾಗಲೇ ವಿದ್ಯಾರ್ಥಿಗಳು ಸೇರಿದಂತೆ ಯುವಜನರು ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾಗಿರುವುದರ ದುಷ್ಪರಿಣಾಮ ನಮ್ಮ ಮುಂದಿದೆ. 21ರಿಂದ 18 ವರ್ಷಕ್ಕೆ ವಯೋಮಿತಿ ಇಳಿಸಿದರೆ, ಇನ್ನೂ ಬೃಹತ್ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸರಕಾರದ ಅನುಮೋದನೆಯೊಂದಿಗೆ ದುಶ್ಚಟಕ್ಕೆ ಬಲಿಯಾಗುತ್ತಾರೆ. ಸದಾ ಸಂಸ್ಕೃತಿ ಎಂದು ಮಾತಾಡುವ, ಬಿಜೆಪಿ ಸರಕಾರ ವಿವೇಕಾನಂದರ ಜನ್ಮದಿನದ ಸಂದರ್ಭದಲ್ಲಿ ಇಂತಹ ವಿದ್ಯಾರ್ಥಿ-ಯುವಜನ ವಿರೋಧಿ ನೀತಿ ತರುತ್ತಿರುವುದು ವಿಷಾದಕರ. ಈ ಕೂಡಲೇ ರಾಜ್ಯ ಸರಕಾರ ತನ್ನ ಮಾನವ ವಿರೋಧಿ ಪ್ರಸ್ತಾವವನ್ನು ಹಿಂಪಡೆಯಬೇಕು’
-ಅಜಯ್ ಕಾಮತ್, ಎಐಡಿಎಸ್ಓನ ರಾಜ್ಯ ಕಾರ್ಯದರ್ಶಿ