ರಣಜಿ ಟೂರ್ನಿಯ ನಡುವೆ ಅನಾರೋಗ್ಯಕ್ಕೆ ಒಳಗಾದ ವೇಗದ ಬೌಲರ್ ಸಿದ್ದಾರ್ಥ್ ಶರ್ಮಾ ನಿಧನ

ಅಹಮದಾಬಾದ್, ಜ.13: ಹಿಮಾಚಲಪ್ರದೇಶದ ವೇಗದ ಬೌಲರ್ ಸಿದ್ದಾರ್ಥ್ ಶರ್ಮಾ Sidharth Sharma ವಡೋದರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ತಡರಾತ್ರಿ ನಿಧನರಾದರು.
28ರ ಹರೆಯದ ಶರ್ಮಾ ಕಳೆದ ಎರಡು ವಾರಗಳಿಂದ ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದರು. ಬಹು ಅಂಗಾಂಗ ವೈಫಲ್ಯದಿಂದಾಗಿ ನಿಧನರಾದರು. ಹಿಮಾಚಲಪ್ರದೇಶದ ಸೀನಿಯರ್ ತಂಡದ ಸದಸ್ಯರಾಗಿದ್ದ ಶರ್ಮಾ ಡಿಸೆಂಬರ್ನಲ್ಲಿ ಕೋಲ್ಕತಾದ ಈಡನ್ಗಾರ್ಡನ್ಸ್ನಲ್ಲಿ ಬಂಗಾಳದ ವಿರುದ್ಧ ಕೊನೆಯ ಬಾರಿ ಆಡಿದ್ದರು. ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ಗೊಂಚಲು ಪಡೆದಿದ್ದರು. 2ನೆ ಇನಿಂಗ್ಸ್ನಲ್ಲಿ 2 ವಿಕೆಟ್ ಕಬಳಿಸಿದ್ದರು.
‘‘ರಣಜಿ ಟ್ರೋಫಿಯ ಮೊದಲೆರಡು ಪಂದ್ಯಗಳನ್ನು ಆಡಿದ್ದ ಶರ್ಮಾ ಬರೋಡ ವಿರುದ್ಧ 3ನೇ ಪಂದ್ಯವನ್ನಾಡಲು ವಡೋದರಕ್ಕೆ ತನ್ನ ತಂಡದೊಂದಿಗೆ ಪ್ರಯಾಣಿಸುತ್ತಿದ್ದಾಗ ಅನಾರೋಗ್ಯಕ್ಕೆ ಒಳಗಾಗಿದ್ದರು. ಆಸ್ಪತ್ರೆಗೆ ದಾಖಲಿಸಿ ಕೆಲವು ಪರೀಕ್ಷೆ ನಡೆಸಿದಾಗ ಕ್ರಿಯೇಟಿನೈನ್ ಮಟ್ಟ ಹೆಚ್ಚಾಗಿತ್ತು. ಅವರ ಕಿಡ್ನಿ ಹಾಗೂ ಇತರ ಅಂಗಾಂಗಗಳ ಮೇಲೆ ಪ್ರಭಾವಬೀರಿತ್ತು. ವೈದ್ಯರು ಅವರ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ’’ ಎಂದು ಹಿಮಾಚಲ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಐಪಿಎಲ್ ಚೇರ್ಮನ್ ಅರುಣ್ ಧುಮಾಲ್ ಹೇಳಿದ್ದಾರೆ.







