ಚಿಕ್ಕಮಗಳೂರು | ಪ್ರೀತಿಸಿ ವಂಚನೆ ಆರೋಪ: ಡೆತ್ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ
► ಬಿಜೆಪಿ ಕಾರ್ಯಕರ್ತನ ವಿರುದ್ಧ ಪೊಕ್ಸೊ ಪ್ರಕರಣ ದಾಖಲು ► ಪ್ರಕರಣ ದಾಖಲಿಸಲು ಪೊಲೀಸರು ಸತಾಯಿಸಿದ್ದರು: ಪೋಷಕರ ಆರೋಪ

ಚಿಕ್ಕಮಗಳೂರು, ಜ.15: ಬಿಜೆಪಿ ಕಾರ್ಯಕರ್ತನೊಬ್ಬ ಕಾಲೇಜು ವಿದ್ಯಾರ್ಥಿನಿಯನ್ನು ಪ್ರೀತಿಸುವುದಾಗಿ ಹೇಳಿ ವಂಚನೆ ಮಾಡಿದ್ದರಿಂದ ನೊಂದ ವಿದ್ಯಾರ್ಥಿನಿ ಡೆತ್ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಜೋಗಿಕುಂಬ್ರಿ ಗ್ರಾಮದಲ್ಲಿ ವರದಿಯಾಗಿದೆ.
ಕಳಸ ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಕಳಸ ತಾಲೂಕಿನ ಸಂಸೆ ಗ್ರಾಪಂ ವ್ಯಾಪ್ತಿಯ ಜೋಗಿಕುಂಬ್ರಿ ಗ್ರಾಮದ ನಿವಾಸಿ ದೀಪ್ತಿ(17) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯಾಗಿದ್ದಾಳೆ.
ಬಿಜೆಪಿ ಹಾಗೂ ಬಜರಂಗದಳದಲ್ಲಿ ಸಕ್ರೀಯ ಕಾರ್ಯಕರ್ತನಾಗಿದ್ದ ಕಾರಗದ್ದೆ ಗ್ರಾಮದ ನಿತೇಶ್ ಎಂಬಾತ ದೀಪ್ತಿಯನ್ನು ಪ್ರೀತಿಸಿ ನಂತರ ಪ್ರೀತಿಸಿ ನಂತರ ಮೋಸ ಮಾಡಿದ್ದರಿಂದ ನೊಂದ ವಿದ್ಯಾರ್ಥಿನಿ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತಿಳಿದುಬಂದಿದೆ.
ದೀಪ್ತಿ ಹಾಗೂ ಆಕೆಯ ಪ್ರಿಯಕರ ನಿತೇಶ್ ಒಂದೇ ಸಮುದಾಯದವರಾಗಿದ್ದು, ಪರಸ್ಪರ ಪರಿಚಯಸ್ಥರಾಗಿದ್ದರು. ಪರಿಚಯ ಪ್ರೀತಿಗೆ ತಿರುಗಿದ್ದು, ಇಬ್ಬರು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಜಗಳ ಆಗಿದ್ದು, ಈ ವೇಳೆ ನಿತೇಶ್ ಪ್ರೀತಿಯನ್ನು ನಿರಾಕರಿಸಿದ್ದಾನೆ ಎನ್ನಲಾಗಿದೆ.
ಇದರಿಂದ ತೀವ್ರವಾಗಿ ನೊಂದಿದ್ದ ದೀಪ್ತಿ ಕಳೆದ ಜ.10ರಂದು ಬೆಳಗ್ಗೆ ತನ್ನ ಮನೆಯಲ್ಲಿದ್ದ ಕಳೆನಾಶಕ ಔಷಧವನ್ನು ಸೇವಿಸಿದ್ದಾಳೆ. ನಂತರ ತೀವ್ರವಾಗಿ ಅಸ್ವಸ್ಥಳಾದ ದೀಪ್ತಿಯನ್ನು ಕುಟುಂಬಸ್ಥರು ಕಳಸ ಪಟ್ಟಣದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿನ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ ಎನ್ನಲಾಗಿದೆ.
ಕೂಡಲೇ ಕುಟುಂಬಸ್ಥರು ದೀಪ್ತಿಯನ್ನು ಮಂಗಳೂರು ನಗರದ ಎಜೆ ಆಸ್ಪತ್ರೆಗೆ ದಾಖಲಿಸಿದ್ದು, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ದೀಪ್ತಿಗೆ ಅಲ್ಲಿನ ವೈದ್ಯರು 4 ದಿನಗಳ ಕಾಲ ಚಿಕಿತ್ಸೆ ನೀಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ದೀಪ್ತಿ ಜ.14ರಂದು ಮೃತಪಟ್ಟಿದ್ದಾಳೆಂದು ತಿಳಿದು ಬಂದಿದೆ.
ಘಟನೆ ಸಂಬಂಧ ದೀಪ್ತಿಯ ತಂದೆ ಚೆನ್ನೇಗೌಡ ಶನಿವಾರ ಕುದುರೆಮುಖ ಪೊಲೀಸ್ ಠಾಣೆಗೆ ದೂರು ನೀಡಿ, ನಿತೇಶ್ ಎಂಬ ಯುವಕ ತನ್ನ ಮಗಳನ್ನು ಪ್ರೀತಿ ಮಾಡುವುದಾಗಿ ಹೇಳಿ ನಂತರ ವಂಚನೆ ಮಾಡಿದ್ದು, ಇದರಿಂದ ಮನನೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದೀಪ್ತಿ ವಿಷ ಸೇವನೆಗೂ ಮುನ್ನ ತನ್ನ ಮನೆಯಲ್ಲಿ ಡೆತ್ನೋಟ್ ಬರೆದಿಟ್ಟಿರುವುದಾಗಿ ಕುಟುಂಬಸ್ಥರ ಬಳಿ ತಿಳಿಸಿದ್ದಾಳೆ, ತನ್ನ ಮಗಳ ಸಾವಿಗೆ ಕಾರಣನಾದ ನಿತೇಶ್ನನ್ನು ಬಂಧಿಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರಕರಣ ದಾಖಲಿಸಲು ಪೊಲೀಸರ ಹಿಂದೇಟು: ಆರೋಪ
ಆರೋಪಿ ಬಿಜೆಪಿ ಹಾಗೂ ಬಜರಂಗದಳದ ಕಾರ್ಯಕರ್ತನಾಗಿದ್ದು, ಪ್ರಭಾವಿ ಎಂಬ ಕಾರಣಕ್ಕೆ ಕುದುರೆಮುಖ ಠಾಣಾಧಿಕಾರಿಗಳು ದೂರು ನೀಡಿ ಒಂದು ದಿನ ಕಳೆದರೂ ಎಫ್ಐಆರ್ ದಾಖಲಿಸಲು ಹಿಂದೇಟು ಹಾಕಿದ್ದಾರೆ. ಕುದುರೆಮುಖ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಮೃತಳ ಕುಟುಂಬಸ್ಥರು ಎಸ್ಪಿ ಬಳಿ ಅಳಲು ತೋಡಿಕೊಂಡಿದ್ದಾರೆ.
ಎಸ್ಪಿ ಕುದುರೆಮುಖ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಬಳಿಕ ಪೊಲೀಸರು ಘಟನೆ ಸಂಬಂಧ ಬಿಜೆಪಿ ಕಾರ್ಯಕರ್ತ ನಿತೇಶ್ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಆರೋಪಿಯನ್ನು ಪೊಲೀಸರು ಇದುವರೆಗೂ ಬಂಧಿಸಿಲ್ಲ ಎಂದು ತಿಳಿದು ಬಂದಿದೆ.










