ಗಂಗಾ ವಿಲಾಸ ವಿಹಾರನೌಕೆ ಕುರಿತು ಬಿಜೆಪಿ ಸುಳ್ಳು ಹೇಳಿದೆ: ಅಖಿಲೇಶ್ ಯಾದವ್
![ಗಂಗಾ ವಿಲಾಸ ವಿಹಾರನೌಕೆ ಕುರಿತು ಬಿಜೆಪಿ ಸುಳ್ಳು ಹೇಳಿದೆ: ಅಖಿಲೇಶ್ ಯಾದವ್ ಗಂಗಾ ವಿಲಾಸ ವಿಹಾರನೌಕೆ ಕುರಿತು ಬಿಜೆಪಿ ಸುಳ್ಳು ಹೇಳಿದೆ: ಅಖಿಲೇಶ್ ಯಾದವ್](/images/placeholder.jpg)
ಲಕ್ನೋ,ಜ.15: ಐಷಾರಾಮಿ ನದಿ ವಿಹಾರನೌಕೆ ಎಂವಿ ಗಂಗಾವಿಲಾಸ ಕುರಿತು ಬಿಜೆಪಿಯು ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ ಎಂದು ಆರೋಪಿಸಿರುವ ಎಸ್ಪಿ ವರಿಷ್ಠ ಅಖಿಲೇಶ್ ಯಾದವ್ ಅವರು,ಇಂತಹ ನೌಕಾಸೇವೆ ಕಳೆದ 17 ವರ್ಷಗಳಿಂದಲೂ ಅಸ್ತಿತ್ವದಲ್ಲಿದೆ ಎಂಬ ಮಾಹಿತಿ ತನಗೆ ಲಭಿಸಿದೆ ಎಂದು ಹೇಳಿದ್ದಾರೆ.
ಇತ್ತೀಚಿಗೆ ಪಕ್ಷದ ಮುಖಂಡ ಮನೋಜ್ ಕುಮಾರ್ ಪಾಂಡೆಯವರ ತಾಯಿಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್,ಗಂಗಾವಿಹಾರ ನೌಕಾಯಾನವು ಹೊಸದೇನಲ್ಲ,ಅದು ಹಲವು ವರ್ಷಗಳಿಂದಲೂ ನಡೆಯುತ್ತಿದೆ.ಅದಕ್ಕೆ ಕೆಲವು ಭಾಗಗಳನ್ನು ಸೇರಿಸಲಾಗಿದೆ ಎಂದು ತನಗೆ ಮಾಹಿತಿ ಲಭಿಸಿದೆ. ಅವರು (ಬಿಜೆಪಿ) ತಾವು ಈ ನೌಕಾ ಯಾನವನ್ನು ಆರಂಭಿಸಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ ಎಂದರು.
ಬಿಜೆಪಿಗರು ಸುಳ್ಳುಗಳನ್ನು ಹೇಳುವುದರಲ್ಲಿ ಮತ್ತು ಪ್ರಚಾರದಲ್ಲಿ ತುಂಬ ಮುಂದಿದ್ದಾರೆ. ಗಂಗಾ ವಿಲಾಸ ನೌಕೆಯಲ್ಲಿ ಬಾರ್ ಕೂಡ ಇದೆ ಎಂದು ತಾನು ಕೇಳಿದ್ದೇನೆ ಎಂದ ಅವರು,ಅದರಲ್ಲಿ ಬಾರ್ ಇದೆಯೇ ಇಲ್ಲವೇ ಎನ್ನುವುದನ್ನು ಬಿಜೆಪಿಗರು ಮಾತ್ರ ಹೇಳಬಲ್ಲರು ಎಂದರು.
ಎಂವಿ ಗಂಗಾ ವಿಲಾಸ ನೌಕೆಯನ್ನು ನಿರ್ವಹಿಸುತ್ತಿರುವ ಅಂತರಾ ಲಕ್ಸುರಿ ರಿವರ್ ಕ್ರೂಸ್ನ ಸಿಇಒ ರಾಜ್ ಸಿಂಗ್ ಅವರು, ನೌಕೆಯಲ್ಲಿ ಮಾಂಸಾಹಾರ ಅಥವಾ ಮದ್ಯ ಲಭ್ಯವಿರುವುದಿಲ್ಲ ಎಂದು ಈ ಹಿಂದೆ ತಿಳಿಸಿದ್ದರು.
ವಿಶ್ವದ ಅತ್ಯಂತ ಉದ್ದದ ನದಿವಿಹಾರ ಯಾನವೆನ್ನಲಗಿರುವ ಗಂಗಾ ವಿಲಾಸ್ ಗೆ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ವಾರಣಾಸಿಯಲ್ಲಿ ಚಾಲನೆ ನೀಡಿದ್ದರು. ಅದು 51 ದಿನಗಳಲ್ಲಿ ಭಾರತ ಮತ್ತು ಬಾಂಗ್ಲಾದೇಶದ 27 ನದಿಗಳ ಮೂಲಕ 3,200 ಕಿ.ಮೀ.ದೂರವನ್ನು ಕ್ರಮಿಸಲಿದ್ದು,ಅಸ್ಸಾಮಿನ ದಿಬ್ರುಗಡದಲ್ಲಿ ಮುಕ್ತಾಯಗೊಳ್ಳಲಿದೆ.
ಇದನ್ನು ಓದಿ: ಉತ್ತರಪ್ರದೇಶದಲ್ಲಿ ಲೋಕಸಭೆ, ಇತರೆ ಚುನಾವಣೆಗಳಲ್ಲಿ ಬಿಎಸ್ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ: ಮಾಯಾವತಿ