ಚಾಮರಾಜನಗರ | ಲಂಚಕ್ಕೆ ಬೇಡಿಕೆ ಆರೋಪ: ಭಿಕ್ಷಾಪಾತ್ರೆ ಹಿಡಿದು ಗ್ರಾ.ಪಂ ಸದಸ್ಯನಿಂದ ವಿನೂತನ ಪ್ರತಿಭಟನೆ
ಚಾಮರಾಜನಗರ,ಜ.15: ಮಾರ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ ರೋಡ್ ಗ್ರಾಮದ ಬಡಾವಣೆಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕಾಮಗಾರಿ ನಡೆಸಲು ಪಿಡಿಒ ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ ಸದಸ್ಯ ಅರುಳಸೆಲ್ವಂ ಎಂಬುವವರು ವಿನೂತನವಾಗಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ.
'ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯತ್ ಎಂಬ ಬಿರುದು ಪಡೆದುಕೊಂಡಿರುವ ಮಾರ್ಟಳ್ಳಿ ಗ್ರಾಮ ಪಂಚಾಯತಿಗೆ ಸೇರಿದ ನಾಲ್ ರೋಡ್ ಬಡಾವಣೆಯಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಚರಂಡಿ ಸೇರಿದಂತೆ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯೆ ಯೋಜನೆ ಮಾಡದೇ ಇರುವುದರಿಂದ ವಾರ್ಡ್ನಲ್ಲಿ ಸಮಸ್ಯೆಗಳು ತಲೆದೋರಿವೆ. ಪಿಡಿಒ ಅರಿಗೆ ಹಲವು ಬಾರಿ ಮನವಿ ಮಾಡಿದರೂ ತಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಎಲ್ಲ ಕಾಮಗಾರಿಗಳಿಗೂ ಲಂಚ ಕೇಳುತ್ತಾರೆ. ನಾವು ಎಲ್ಲಿಂದ ಹಣ ಕೊಡಲು ಸಾಧ್ಯ' ಎಂದು ಅರುಳಸೆಲ್ವಂ ಬಾಯಿಗೆ ಬಟ್ಟೆ ಕಟ್ಟಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಪ್ರಾಮಾಣಿಕತೆಗೆ ಸಿಕ್ಕ ಪ್ರತಿಫಲ ಭಿಕ್ಷಾ ಪಾತ್ರೆ' ಎಂಬ ಬಾಕ್ಸ್ ಇಟ್ಟುಕೊಂಡು ಬಾಯಿಗೆ ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ತನ್ನ ವಾರ್ಡ್ನಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಿಸಲು ಲಂಚ ಕೊಡಬೇಕಾಗಿರುವುದರಿಂದ ಗ್ರಾಮಸ್ಥರಿಂದ ಭಿಕ್ಷೆ ಬೇಡುತ್ತಿದ್ದೇನೆ. ಭ್ರಷ್ಟಾಚಾರ ಎಂಬುದು ಸಕ್ಕರೆ ಕಾಯಿಲೆ ಇದ್ದ ಹಾಗೆ. ಅದು ನಮ್ಮನ್ನು ಮತ್ತು ನಮ್ಮ ಸಮುದಾಯವನ್ನು ಸಂಪೂರ್ಣವಾಗಿ ನಾಶ ಮಾಡುತ್ತದೆ. ನಮ್ಮ ದೇಶದಲ್ಲಿ ಕರ್ತವ್ಯ ಮಾಡೋದಕ್ಕೆ ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ಯುವಕರೇ - ವಯಸ್ಕರೇ ಚಿಂತಿಸಿ ಎಂಬ ಭಿತ್ತಿ ಪತ್ರ ಬರೆದುಕೊಂಡು ಗ್ರಾಮಸ್ಥರಿಂದ ಭಿಕ್ಷೆ ಬೇಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
'ಸತ್ಯಕ್ಕೆ ದೂರವಾದ ಮಾತು': ಪಿಡಿಒ ಪ್ರತಿಕ್ರಿಯೆ
'ನಾಲ್ ರೋಡ್ ವಾರ್ಡ್ನ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ನಾವು ಸಿದ್ಧರಿದ್ದೇವೆ. ಆದರೆ ಅವರು ಕಾಮಗಾರಿಗಳನ್ನು ಪಟ್ಟಿ ಮಾಡಿಕೊಟ್ಟರೆ ಮುಂದಿನ ದಿನಗಳಲ್ಲಿ ಕ್ರಿಯೆ ಯೋಜನೆ ಮಾಡಿ ಅಭಿವೃದ್ಧಿಪಡಿಸುತ್ತೇವೆ. ಲಂಚ ಕೇಳುತ್ತೇನೆ ಎನ್ನುವುದು ಸತ್ಯಕ್ಕೆ ದೂರ' ಎಂದು ಮಾರ್ಟಳ್ಳಿ ಗ್ರಾಮ ಪಂಚಾಯತ್ ಪಿಡಿಒ ಗಂಗಾಧರ್ ಪ್ರತಿಕ್ರಿಯಿಸಿದ್ದಾರೆ.