ನೇಪಾಳ ವಿಮಾನ ಪತನಕ್ಕೆ ಕೆಲವೇ ನಿಮಿಷ ಮುನ್ನ ಫೇಸ್ಬುಕ್ ಲೈವ್ ಮಾಡಿದ್ದ ಉತ್ತರ ಪ್ರದೇಶ ಮೂಲದ ಪ್ರಯಾಣಿಕ
![ನೇಪಾಳ ವಿಮಾನ ಪತನಕ್ಕೆ ಕೆಲವೇ ನಿಮಿಷ ಮುನ್ನ ಫೇಸ್ಬುಕ್ ಲೈವ್ ಮಾಡಿದ್ದ ಉತ್ತರ ಪ್ರದೇಶ ಮೂಲದ ಪ್ರಯಾಣಿಕ ನೇಪಾಳ ವಿಮಾನ ಪತನಕ್ಕೆ ಕೆಲವೇ ನಿಮಿಷ ಮುನ್ನ ಫೇಸ್ಬುಕ್ ಲೈವ್ ಮಾಡಿದ್ದ ಉತ್ತರ ಪ್ರದೇಶ ಮೂಲದ ಪ್ರಯಾಣಿಕ](https://www.varthabharati.in/sites/default/files/images/articles/2023/01/16/363964-1673846883.gif)
ಲಕ್ನೊ: ಯೇತಿ ಏರ್ಲೈನ್ಸ್ (Yeti Airlines flight) ವಿಮಾನವು ನೇಪಾಳದ ಪೊಖರಾ ಬಳಿ ಅಪಘಾತಕ್ಕೀಡಾಗುವ ಕೆಲವೇ ನಿಮಿಷಗಳ ಮುನ್ನ ಆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಪ್ರದೇಶದ ಘಾಜಿಪುರ ನಿವಾಸಿಗಳಾದ ನಾಲ್ವರು ಪ್ರಯಾಣಿಕರು ಫೇಸ್ಬುಕ್ ಲೈವ್ ಮೂಲಕ ತಮ್ಮ ಪ್ರಯಾಣವನ್ನು ಚಿತ್ರೀಕರಿಸಿದ್ದರು ಎಂದು timesofindia.com ವರದಿ ಮಾಡಿದೆ.
ಈ 1:30 ನಿಮಿಷದ ವಿಡಿಯೊದಲ್ಲಿ ಪೊಖರಾ ನಗರದ ಮೇಲೆ ಹಾರುತ್ತಿರುವ ವಿಮಾನದಲ್ಲಿದ್ದ ಓರ್ವ ಪ್ರಯಾಣಿಕ "ಇದು ನಿಜಕ್ಕೂ ಮಜವಾಗಿದೆ" ಎಂದು ರೋಮಾಂಚನದಿಂದ ಉದ್ಗರಿಸುತ್ತಿರುವುದು ದಾಖಲಾಗಿದೆ. ಫೋನ್ನ ಕ್ಯಾಮೆರಾ ಆ ನಾಲ್ವರ ಪೈಕಿ ಒಬ್ಬರಾಗಿದ್ದ ಸೋನು ಜೈಸ್ವಾಲ್ (29) ಕಡೆಯೂ ತಿರುಗಿದೆ. ಆದರೆ, 58 ಸೆಕೆಂಡುಗಳ ನಂತರ ಎಡಭಾಗಕ್ಕೆ ತೀಕ್ಣವಾದ ತಿರುವು ತೆಗೆದುಕೊಂಡ ವಿಮಾನವು ಪತನಗೊಂಡು, ಬೆಂಕಿ ಹೊತ್ತುಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಫೋನ್ ಕ್ಯಾಮೆರಾ ಚಾಲನೆಯಲ್ಲಿದ್ದುದರಿಂದ ಮುಂದಿನ ಮೂವತ್ತು ಸೆಕೆಂಡುಗಳ ಸ್ಥಳದಲ್ಲಿನ ದೃಶ್ಯಾವಳಿಗಳೂ ಸೆರೆಯಾಗಿದ್ದು, ಬೆಂಕಿಯ ಕೆನ್ನಾಲಿಗೆ ಎಲ್ಲ ದಿಕ್ಕಿಗೂ ಹರಡಿರುವುದೂ ದಾಖಲಾಗಿದೆ.
ವಿಮಾನ ಪತನದಲ್ಲಿ ಸಾವಿಗೀಡಾದ 68 ಮಂದಿ ಪ್ರಯಾಣಿಕರ ಪೈಕಿ ಇದ್ದ ಐದು ಮಂದಿ ಭಾರತೀಯ ಪ್ರಯಾಣಿಕರಲ್ಲಿ ಘಾಝಿಪುರದ ಬರೇಸರ್ ಗ್ರಾಮದ ನಿವಾಸಿಗಳಾದ ಈ ನಾಲ್ವರೂ ಇದ್ದರು. ಜನವರಿ 13ರಂದು ಕಠ್ಮಂಡುವಿನಲ್ಲಿ ಇಳಿದಿದ್ದ ಸೋನು ಜೈಸ್ವಾಲ್ (29), ಅನಿಲ್ ರಾಜ್ಭರ್ (28), ವಿಶಾಲ್ ಶರ್ಮ (23) ಹಾಗೂ ಅಭಿಷೇಕ್ ಸಿಂಗ್ ಕುಶ್ವಾಹಾ (23) ಪಶುಪತಿನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪ್ಯಾರಾಗ್ಲೈಡಿಂಗ್ನಲ್ಲಿ ಪಾಲ್ಗೊಳ್ಳಲು ಅಲ್ಲಿಂದ ಪೊಖರಾದತ್ತ ತೆರಳುತ್ತಿದ್ದರು ಎಂದು ಹೇಳಲಾಗಿದೆ.
ಆದರೆ, ರವಿವಾರ ಈ ನಾಲ್ವರ ಗ್ರಾಮಗಳಾದ ಘಾಝಿಪುರದ ಬರೇಸರ್ ಗ್ರಾಮ ಹಾಗೂ ನೋನಾಹರ ಪ್ರದೇಶದಲ್ಲಿ ದುಃಖದ ಕಾರ್ಮೋಡ ಕವಿಯಿತು. ನಾಲ್ವರ ಪೈಕಿ ಸೋನು ಜೈಸ್ವಾಲ್ ಮದ್ಯ ವರ್ತಕರಾಗಿದ್ದರೆ, ಅನಿಲ್ ರಾಜ್ಭರ್ ಮತ್ತು ಅಭಿಷೇಕ್ ಕುಶ್ವಾಹಾ ಇಬ್ಬರು ಕ್ರಮವಾಗಿ ಘಾಝಿಪುರದಲ್ಲಿನ ಝಹೂರಾಬಾದ್ ಮತ್ತು ಅಲಾವಲ್ಪುರದಲ್ಲಿ ಜನಸೇವಾ ಕೇಂದ್ರಗಳನ್ನು ನಡೆಸುತ್ತಿದ್ದರು. ವಿಶಾಲ್ ಶರ್ಮ ದ್ವಿಚಕ್ರ ವಾಹನ ಮಾರಾಟದ ಏಜೆನ್ಸಿಯೊಂದರಲ್ಲಿ ಕಳೆದ ಎರಡು ವರ್ಷಗಳಿಂದ ಸಾಲ ಸೌಲಭ್ಯ ಒದಗಿಸುವ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಇದನ್ನೂ ಓದಿ: ದೇಶದ ಅತ್ಯಂತ ಶ್ರೀಮಂತ 21 ಮಂದಿಯ ಸಂಪತ್ತು 70 ಕೋಟಿ ಮಂದಿಯ ಒಟ್ಟು ಸಂಪತ್ತಿಗಿಂತ ಅಧಿಕ: ವರದಿ