‘‘ಗೋ ಮೂತ್ರದಿಂದ ಬಾಯಿ ಮುಕ್ಕಳಿಸಿ’’: ವಿವಾದಕ್ಕೆ ಕಾರಣವಾದ ತ್ರಿಪುರಾ ಸಚಿವನ ಹೇಳಿಕೆ
![‘‘ಗೋ ಮೂತ್ರದಿಂದ ಬಾಯಿ ಮುಕ್ಕಳಿಸಿ’’: ವಿವಾದಕ್ಕೆ ಕಾರಣವಾದ ತ್ರಿಪುರಾ ಸಚಿವನ ಹೇಳಿಕೆ ‘‘ಗೋ ಮೂತ್ರದಿಂದ ಬಾಯಿ ಮುಕ್ಕಳಿಸಿ’’: ವಿವಾದಕ್ಕೆ ಕಾರಣವಾದ ತ್ರಿಪುರಾ ಸಚಿವನ ಹೇಳಿಕೆ](https://www.varthabharati.in/sites/default/files/images/articles/2023/01/16/364055-1673892131.jpg)
ಅಗರ್ತಲ, ಜ. 16: ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಮುನ್ನ ‘‘ಗೋ ಮೂತ್ರದಲ್ಲಿ ಬಾಯಿ ಮುಕ್ಕಳಿಸಿ’’ ಎಂದು ತ್ರಿಪುರಾ ಸಚಿವ ನೀಡಿದ ಹೇಳಿಕೆಗೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮುಂಬರುವ ಚುನಾವಣೆಯಲ್ಲಿ ಸಿಪಿಐ ಕಾಂಗ್ರೆಸ್ ನ ಪ್ರಸ್ತಾವಿತ ಸ್ಥಾನ ಹೊಂದಾಣಿಕೆ ಕುರಿತಂತೆ ಉಭಯ ಪ್ರತಿಪಕ್ಷಗಳನ್ನು ರವಿವಾರ ಟೀಕಿಸುವ ಸಂದರ್ಭ ರಾಜ್ಯ ಕಾನೂನು ಸಚಿವ ರತನ್ ಲಾಲ್ ನಾಥ್(Ratan Lal Nath) ಈ ಅಸಹ್ಯಕರ ಹೇಳಿಕೆ ನೀಡಿದ್ದರು.
‘‘ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಮುನ್ನ ಪ್ರತಿಪಕ್ಷಗಳು ಗೋಮೂತ್ರದಿಂದ ತಮ್ಮ ಬಾಯಿ ಮುಕ್ಕಳಿಸಬೇಕು. ಅವರು ಈ ಹಿಂದೆ ತ್ರಿಪುರಾದ ಆಡಳಿತ ನಡೆಸಿದ ಸಂದರ್ಭ ಹಿಂಸಾಚಾರ, ಅಶಾಂತಿ ಬಿಟ್ಟರೆ ಬೇರೆ ಏನು ಮಾಡಿದ್ದಾರೆ’’ ಎಂದು ರತನ್ ಲಾಲ್ ನಾಥ್ ಪ್ರಶ್ನಿಸಿದ್ದರು. ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಪುನರುಜ್ಜೀವನಗೊಳಿಸಲು ಎಲ್ಲ ಬಿಜೆಪಿ ವಿರೋಧಿ ಪಕ್ಷಗಳು ಒಂದೇ ವೇದಿಕೆ ಅಡಿ ಸಂಘಟಿತರಾಗಬೇಕು ಎಂದು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಡಾ. ಅಜಯ್ ಕುಮಾರ್(Dr Ajay Kumar) ಅವರು ಇತ್ತೀಚೆಗೆ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ರತನ್ ಲಾಲ್ ನಾಥ್ ಈ ಪ್ರತಿಕ್ರಿಯೆ ನೀಡಿದ್ದರು.