‘ಬಲವಂತದ ಮತಾಂತರ’ದ ಕುರಿತ ಹಲವು ಮನವಿ: ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯಗೆ ಸುಪ್ರೀಂ ಎಚ್ಚರಿಕೆ
![‘ಬಲವಂತದ ಮತಾಂತರ’ದ ಕುರಿತ ಹಲವು ಮನವಿ: ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯಗೆ ಸುಪ್ರೀಂ ಎಚ್ಚರಿಕೆ ‘ಬಲವಂತದ ಮತಾಂತರ’ದ ಕುರಿತ ಹಲವು ಮನವಿ: ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯಗೆ ಸುಪ್ರೀಂ ಎಚ್ಚರಿಕೆ](https://www.varthabharati.in/sites/default/files/images/articles/2023/01/16/364058-1673890143.jpeg)
ಹೊಸದಿಲ್ಲಿ, ಜ. 16: ‘‘ಬಲವಂತದ ಮತಾಂತರ’’ದ ಕುರಿತು ಸುಪ್ರೀಂ ಕೋರ್ಟ್ನ ವಿವಿಧ ಪೀಠಗಳು ಹಾಗೂ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಹಲವು ಅರ್ಜಿಗಳನ್ನು ಸಲ್ಲಿಸಿರುವ ಕುರಿತಂತೆ ಸುಪ್ರೀಂ ಕೋರ್ಟ್ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರಿಗೆ ಎಚ್ಚರಿಕೆ ನೀಡಿದೆ.
ಬಲವಂತದ ಹಾಗೂ ಸಂಚಿನ ಮತಾಂತರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅಶ್ವಿನಿ ಉಪಾಧ್ಯಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ, ಜೆ. ಬಿ. ಪರ್ದಿವಾಲ ಅವರನ್ನು ಒಳಗೊಂಡ ಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ಸಂದರ್ಭ ತಮಿಳುನಾಡು ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಪಿ. ವಿಲ್ಸನ್, 2021ರಲ್ಲಿ ನ್ಯಾಯಮೂರ್ತಿ ಆರ್.ಎಫ್. ನಾರಿಮನ್ ನೇತೃತ್ವದ ಪೀಠ ಇದೇ ರೀತಿಯ ಮನವಿಯನ್ನು ವಿಚಾರಣೆ ನಡೆಸಲು ನಿರಾಕರಿಸಿದ ಬಳಿಕ ದೂರುದಾರರು ಹಿಂದೆ ಪಡೆದಿದ್ದರು. ಅಲ್ಲದೆ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಕೂಡ ಇದೇ ರೀತಿಯ ಮನವಿ ಸಲ್ಲಿಸಿ ಹಿಂದೆ ಪಡೆದಿದ್ದರು ಎಂದು ಪೀಠಕ್ಕೆ ತಿಳಿಸಿದರು. ನ್ಯಾಯವಾದಿ ದುಷ್ಯಂತ ದವೆ ಅವರು, ಉಪಾಧ್ಯಾಯ ಅವರ ಅರ್ಜಿಯ ನಿರ್ದಿಷ್ಟ ಹೇಳಿಕೆ ಅಲ್ಪ ಸಂಖ್ಯಾತ ಸಮುದಾಯದ ವಿರುದ್ಧವಾಗಿ ಇದೆ ಎಂದು ಪೀಠಕ್ಕೆ ತಿಳಿಸಿದರು.
‘‘ಅವರು ಮುಸ್ಲಿಮರು ಹಾಗೂ ಕ್ರಿಶ್ಚಿಯನರನ್ನು ಅತ್ಯಾಚಾರಿಗಳು ಹಾಗೂ ಕೊಲೆಗಡುಕರು ಎಂದು ಬಿಂಬಿಸಿದ್ದಾರೆ. ಇಂತಹ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಪರಿಗಣಿಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ’’ ಎಂದು ಅವರು ಹೇಳಿದರು. ಅನಂತರ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ ಅವರು, ತಾನು ಮನವಿಯ ನಿಯಮಕ್ಕೆ ಬದ್ಧನಾಗಿದ್ದೇನೆಂದು ಸಾರ್ವಜನಿಕ ಹಿತಾಸಕ್ತಿ ದೂರುದಾರ ಭಾವಿಸಿದಂತೆ ಕಾಣುತ್ತಿಲ್ಲ ಎಂದರು. ‘‘ನೀವು ಹೊಸ ಮನವಿ ಸಲ್ಲಿಸುವುದು, ಹಿಂದೆ ತೆಗೆಯುವುದು ಸಾಧ್ಯವಿಲ್ಲ’’ ಎಂದು ಹೇಳಿದರು.