ಪ್ರೀತಿಸುವುದಾಗಿ ಹೇಳಿ ವಂಚನೆ, ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಆರೋಪಿ ಸಂಘಪರಿವಾರದ ಕಾರ್ಯಕರ್ತನ ಬಂಧನ

ಚಿಕ್ಕಮಗಳೂರು, ಜ.15: ಯುವಕನೋರ್ವ ಪ್ರೀತಿಸುವುದಾಗಿ ಹೇಳಿ ವಂಚಿಸಿದ್ದರಿಂದ ಮನನೊಂದು ಕಳಸ ತಾಲೂಕಿನ ಜೋಗಿಕುಂಬ್ರಿ ಗ್ರಾಮದಲ್ಲಿ ಪಿಯು ಕಾಲೇಜು ವಿದ್ಯಾರ್ಥಿನಿ ದೀಪ್ತಿ(17) ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಕುದುರೆಮುಖ ಪೊಲೀಸರು ಬಂಧಿಸಿದ್ದಾರೆ.
ಕಾರಗದ್ದೆ ಗ್ರಾಮದ ನಿವಾಸಿ ನಿತೇಶ್ ಬಂಧಿತ ಆರೋಪಿ. ಬಿಜೆಪಿ ಹಾಗೂ ಬಜರಂಗದಳದ ಸಕ್ರಿಯ ಕಾರ್ಯಕರ್ತನೆನ್ನಲಾದ ಈತ ಅಪ್ರಾಪ್ತ ವಯಸ್ಸಿನ ದೀಪ್ತಿಯನ್ನು ಪ್ರೀತಿಸಿ ನಂತರ ಮೋಸ ಮಾಡಿದ್ದ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಾಗಿತ್ತು.
ನೊಂದ ದೀಪ್ತಿ ವಾರದ(ಜ.10) ಹಿಂದೆ ಮನೆಯಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ನಾಲ್ಕು ದಿನಗಳ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ದೀಪ್ತಿ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ನಿತೇಶ್ ಪ್ರೀತಿಸಿ ಮೋಸ ಮಾಡಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದರು. ಈ ಬಗ್ಗೆ ದೀಪ್ತಿ ತಂದೆ ನೀಡಿದ ದೂರಿನಂತೆ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
