ಮೈಸೂರು ವಿವಿ ವೇತನ ಪರಿಷ್ಕರಣೆಯಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ: ಮರಿತಿಬ್ಬೇಗೌಡ ಆರೋಪ
ಮೈಸೂರು,ಜ.17: ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ಆಯಾ ವಿಶ್ವವಿದ್ಯಾನಿಲಯಗಳ ವೇತನ ಪರಿಷ್ಕರಣೆಯ ಅಧಿಕಾರ ಹೊಂದಿದ್ದು, ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಬಂಧಪಟ್ಟ ವೇತನ ಪರಿಷ್ಕರಣೆಯಲ್ಲಿ ಮಾತ್ರ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆರೋಪಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರ ಸಂಭಾವನೆಯನ್ನು ಆಯಾ ವಿವಿಗಳ ಆಂತರಿಕ ಸಂಪ ನ್ಮೂಲಗಳಿಂದ ಭರಿಸಲಾಗುತ್ತದೆ. ಇದಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಪಡೆಯಲಾಗುವುದಿಲ್ಲ. ಯುಜಿಸಿ ನಿಯಮದ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ 2022ರ ಜೂನ್ 4 ರಂದು ಮೈಸೂರು ವಿವಿ ವೇತನ ಪರಿಷ್ಕರಣೆಗಾಗಿ ಒಂದು ಸಮಿತಿಯನ್ನು ರಚಿಸುತ್ತದೆ. ಈ ಸಮಿತಿಯು ಸುಮಾರು 6 ತಿಂಗಳು ಅಧ್ಯಯನ ಮಾಡಿ ಮಾಸಿಕ ರೂ.28 ಸಾವಿರದಿಂದ 37 ಸಾವಿರ ರೂ.ಗಳವರೆಗೆ ವೇತನ ಪರಿಷ್ಕರಿಸಿ ಆಗಸ್ಟ್ ತಿಂಗಳಲ್ಲಿ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಅನುಮೋದಿಸಿ ಅದನ್ನು ಅಕ್ಟೋಬರ್ ನಲ್ಲಿ ಜಾರಿ ಯಾಗುವಂತೆ ಆದೇಶ ಹೊರಡಿಸಲಾಗಿದೆ. ಆದರೆ ಒಂದು ತಿಂಗಳು ಮಾತ್ರ ಪರಿಷ್ಕೃತ ವೇತನ ನೀಡಿ ಅನಂತರ ಏಕಾಏಕಿ ಏಕಪಕ್ಷೀಯ ನಿರ್ಧಾರ ಕೈಗೊಂಡು ಆ ಆದೇಶವನ್ನು ಹಿಂಪಡೆಯಲಾಗಿದೆ. ಇದು ವಿವಿಯ ನಿಯಮಕ್ಕೆ ವಿರುದ್ಧವಾದ ನಿಯಮವಾಗಿದೆ ಎಂದು ದೂರಿದರು.
ರಾಜ್ಯ ವಿಧಾನ ಪರಿಷತ್ತಿನಲ್ಲಿ ಉನ್ನತ ಶಿಕ್ಷಣ ಸಚಿವರು ಲಿಖಿತ ಉತ್ತರವೊಂದನ್ನು ನೀಡಿದ್ದು ಅತಿಥಿ ಉಪನ್ಯಾಸಕರಿಗೆ ಯುಜಿಸಿ ಮಾರ್ಗಸೂಚಿಯನ್ವಯ ವಿದ್ಯಾರ್ಹತೆಯನ್ನುಪರಿಗಣಿಸಿ ಆಯಾಯ ವಿವಿಗಳ ಹಂತ ದಲ್ಲೇ ವೇತನ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಆದರೆ ಮೈಸೂರು ವಿವಿಯವರು ಪರಿಷ್ಕೃತ ವೇತನಕ್ಕೆ ಸಂಬಂಧಿಸಿದಂತೆ ಹಳೆಯ ದತ್ತಾಂಶವನ್ನು ಸರ್ಕಾರಕ್ಕೆ ಒದಗಿಸಿ ಗೊಂದಲ ಸೃಷ್ಟಿಸಿದೆ ಎಂದು ಆರೋಪಿ ಸಿದ ಅವರು ರಾಜ್ಯದ ವಿವಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ವೇತನ ನಿಗದಿಪಡಿಸುವುದು ರಾಜ್ಯ ಸರ್ಕಾರವೇ ಅಥವಾ ಆಯಾ ವಿವಿಗಳೇ ಎಂಬುದನ್ನು ಶಿಕ್ಷಣ ಸಚಿವರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಮೈಸೂರು ವಿವಿಯ 2020-2021 ಮತ್ತು 2021-2022 ನೇ ಸಾಲಿನ ಹಣಕಾಸಿನ ವಿತ್ತೀಯ ಕೊರತೆಯ ಹಿಂಬಾಕಿಯಾದ 77 ಕೋಟಿ ರೂ.ಗಳ ಕೊರತೆ ಯನ್ನು ಆಯಾ ವರ್ಷಗಳಲ್ಲಿ ಆರ್ಥಿಕ ಇಲಾಖೆಯು ಪ್ರಶ್ನಿಸಿಲ್ಲ. ಆದರೆ ಅತಿಥಿ ಉಪನ್ಯಾಸಕರಿಗೆ ನೀಡಲಾಗುವ 2.8 ಕೋಟಿ ರೂ.ಗಳ ಲೆಕ್ಕವನ್ನು ಮಾತ್ರ ಏಕೆ ಪ್ರಶ್ನಿಸುತ್ತಿದೆ? ಈ ಮೊತ್ತ ಮೈಸೂರು ವಿವಿಗೆ ಮಾತ್ರ ಅಷ್ಟೊಂದು ದೊಡ್ಡ ಹೊರೆಯಾಗಿದೆಯೇ? ಎಂದು ಪ್ರಶ್ನಿಸಿದ ಮರಿತಿಬ್ಬೇಗೌಡ ಅವರು ಉನ್ನತ ಶಿಕ್ಷಣ ಸಚಿವರು ವಿಧಾನ ಪರಿಷತ್ತಿನ ಸದನದಲ್ಲಿ ಒಪ್ಪಿಕೊಂಡಿರುವ ಹಾಗೆ ಈ ಕೂಡಲೇಮೈಸೂರು ವಿವಿಯ ಅತಿಥಿ ಉಪನ್ಯಾಸಕರ ಪರಿಷ್ಕೃತ ವೇತನಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಮತ್ತು ಮೈಸೂರು ವಿವಿಯ ಅಧಿಕಾರಿಗಳೊಡನೆ ಚರ್ಚಿಸಿ ಪರಿಷ್ಕೃತ ವೇತನ ಜಾರಿ ಮಾಡಬೇಕು ಎಂದು ಒತ್ತಾಯಿ ಸುತ್ತೇನೆ. ಅತಿಥಿ ಉಪನ್ಯಾಸಕರು ನಡೆಸುತ್ತಿರುವ ನ್ಯಾಯಯುತ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದರು.
''ಮಹಾರಾಣಿ ವಿಜ್ಞಾನ ಕಾಲೇಜಿನ ಕಟ್ಟಡ ದುರಸ್ತಿಪಡಿಸಿ''
'ನಗರದ ಮಹಾರಾಣಿ ವಿಜ್ಞಾನ ಕಾಲೇಜಿನ ಶಿಥಿಲ ಕಟ್ಟಡ ಕುಸಿದು ಬಿದ್ದು ಕೆಲವು ತಿಂಗಳೇ ಸರಿದಿವೆ. ಅದನ್ನು ದುರಸ್ತಿಪಡಿಸುವಂತೆ ನಾನು ಸದನದಲ್ಲಿ ಎರಡು ಮೂರು ಬಾರಿ ಪ್ರಶ್ನೆ ಕೇಳಿದ್ದು ಸರ್ಕಾರಕ್ಕೆ ಪತ್ರಗಳನ್ನು ಸಹ ಬರೆದಿ ದ್ದೇನೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿ 3,700 ವಿದ್ಯಾರ್ಥಿನಿಯರು ವ್ಯಾಸಂಗ ಮಾಡು ತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಮೈಸೂರಿಗೆ ಬರುತ್ತಲೇ ಇರುತ್ತಾರೆ. ಆದರೆ ಇದುವರೆಗೂ ಅವರು ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿ ಸಿಲ್ಲ. ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು'
- ಮರಿತಿಬ್ಬೇಗೌಡ, ವಿಧಾನಪರಿಷತ್ ಸದಸ್ಯ.