ವಿಮಾನದ ತುರ್ತು ನಿರ್ಗಮನವನ್ನು ತೆರೆದ ತೇಜಸ್ವಿ ಸೂರ್ಯ, ಅಣ್ಣಾಮಲೈ: ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋಗೆ ದೂರು
![ವಿಮಾನದ ತುರ್ತು ನಿರ್ಗಮನವನ್ನು ತೆರೆದ ತೇಜಸ್ವಿ ಸೂರ್ಯ, ಅಣ್ಣಾಮಲೈ: ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋಗೆ ದೂರು ವಿಮಾನದ ತುರ್ತು ನಿರ್ಗಮನವನ್ನು ತೆರೆದ ತೇಜಸ್ವಿ ಸೂರ್ಯ, ಅಣ್ಣಾಮಲೈ: ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋಗೆ ದೂರು](https://www.varthabharati.in/sites/default/files/images/articles/2023/01/17/364139-1673969660.jpeg)
ಬೆಂಗಳೂರು: ಬೆಂಗಳೂರು ದಕ್ಷಿಣ ಬಿಜೆಪಿ (BJP) ಸಂಸದ ಹಾಗೂ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ (Tejasvi Surya) ಅವರು ಡಿಸೆಂಬರ್ 10, 2022 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಚೆನ್ನೈ-ತಿರುಚ್ಚಿ ಇಂಡಿಗೋ ವಿಮಾನವೊಂದರ ತುರ್ತು ನಿರ್ಗಮನ ದ್ವಾರವನ್ನು ತೆರೆದಿರುವ ಕುರಿತು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋಗೆ ಸಾಮಾಜಿಕ ಕಾರ್ಯಕರ್ತ ಪಿಯುಷ್ ಮಾನುಷ್ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ತಮ್ಮ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ಮಾನುಷ್,” ರಫೇಲ್ ವಾಚ್ಗಳನ್ನು ಧರಿಸಿದ್ದ ಈ ಇಬ್ಬರು ವ್ಯಕ್ತಿಗಳು ಏರ್ಕ್ರಾಫ್ಟ್ನೊಂದಿಗೆ ಆಟವಾಡಿ ಭಯ ಹುಟ್ಟಿಸಿ ಎರಡು ಗಂಟೆಗಳ ಕಾಲ (ವಿಮಾನದ) ಹಾರಾಟವನ್ನು ವಿಳಂಬಗೊಳಿಸಿದ್ದಾರೆ. ಡಿಸೆಂಬರ್ 10 ರಂದು, ಅವರು ಚೆನ್ನೈನಿಂದ ತಿರುಚ್ಚಿಗೆ ಹೊರಟ ವಿಮಾನವನ್ನು ಹತ್ತಿದ್ದು, ತುರ್ತು ಬಾಗಿಲನ್ನು ತೆರೆದ ಕಾರಣ ಅವರನ್ನು ಇಳಿಲಾಯಿತು, ಆದರೂ, ತಮ್ಮ ಪ್ರಭಾವವನ್ನು ಬಳಸಿಕೊಂಡು ತಮ್ಮ ಪ್ರಯಾಣವನ್ನು ಮುಂದುವರಿಸಲು ಅನುಮತಿಸಲಾಯಿತು. ಅವರಿಬ್ಬರೂ ವಿಕೃತ ಪಕ್ಷದಲ್ಲಿಲ್ಲದಿದ್ದರೆ ಇಬ್ಬರೂ ಕಂಬಿ ಹಿಂದೆ ಬೀಳುತ್ತಿದ್ದರು. ಜನವರಿ 5 ರಂದು RTI ಅರ್ಜಿಯೊಂದಿಗೆ ನಾನು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋಗೆ ದೂರನ್ನು ದಾಖಲಿಸಿದೆ. ನೂರಾರು ಜೀವಗಳಿಗೆ ಅಪಾಯ ತಂದೊಡ್ಡಿರುವ ಈ ಘಟನೆಯ ಕುರಿತು ಡಿಜಿಸಿಎ ತನಿಖೆಗೆ ಆದೇಶಿಸಿದೆ.” ಎಂದು ತಿಳಿಸಿದ್ದಾರೆ.