ಫೆಬ್ರವರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ

ಉಡುಪಿ: ರಾಜ್ಯಾದ್ಯಂತ ನಡೆಯುತ್ತಿರುವ ಪ್ರಜಾ ಧ್ವನಿ ಯಾತ್ರೆ ಮುಗಿದ ಬಳಿಕ ಪ್ರತಿ ಜಿಲ್ಲೆಯ ವೀಕ್ಷಕರು ಈಗಾಗಲೇ ಸಲ್ಲಿಸಿರುವ ವರದಿಯ ಆಧಾರದಂತೆ , ಕೆಪಿಸಿಸಿಯ ಚುನಾವಣಾ ಸಮಿತಿಯ ಸಭೆ ಕರೆದು ಫೆಬ್ರವರಿ ಎರಡನೇ ವಾರದೊಳಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸ ಲಾಗುವುದು ಎಂದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ತಿಳಿಸಿದ್ದಾರೆ.
ಉಡುಪಿ ಕಾಂಗ್ರೆಸ್ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣೆಗೆ ಆದಷ್ಟು ಬೇಗ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಬೇಕೆಂಬುದು ಎಲ್ಲರ ಒತ್ತಾಯವಾಗಿದೆ. ಆ ಪ್ರಕಾರ ಕೆಪಿಸಿಸಿಯು ಚುನಾವಣಾ ಸಮಿತಿಯನ್ನು ನೇಮಕ ಮಾಡಿದೆ. ಈಗಾಗಲೇ ಒಂದು ಸುತ್ತಿನ ಸಭೆ ಕೂಡ ನಡೆಸಲಾಗಿದೆ. ಅದೇ ರೀತಿ ಆಕಾಂಕ್ಷಿಗಳ ಹಾಗೂ ಮುಖಂಡರ ಅಭಿಪ್ರಾಯ ಸಂಗ್ರಹಕ್ಕಾಗಿ ಪ್ರತಿ ಜಿಲ್ಲೆಗಳಿಗೂ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಈಗಾಗಲೇ ವೀಕ್ಷಕರು ವರದಿ ತಯಾರಿಸಿ ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಿದ್ದಾರೆ. ಈಗ ಯಾತ್ರೆ ಇರುವುದರಿಂದ ಪಟ್ಟಿಯನ್ನು ಅಂತಿಮಗೊಳಿಸುವುದು ಸ್ವಲ್ಪ ತಡವಾಗಿದೆ ಎಂದರು.
ಉಚಿತ ವಿದ್ಯುತ್ ಭರವಸೆ ಘೋಷಣೆಗೆ ಇಂಧನ ಸಚಿವರ ಟೀಕೆ ಕುರಿತು ಪ್ರತಿಕ್ರಿಯಿಸಿದ ಧ್ರುವ ನಾರಾಯಣ್, ಇದು ಇಂಧನ ಸಚಿವರ ಹಾತಾಸೆ ಹೇಳಿಕೆ. ಸಿದ್ಧರಾಮಯ್ಯ ಸರಕಾರದ ಅವಧಿಯಲ್ಲಿ ನಮ್ಮ ರಾಜ್ಯ ವಿದ್ಯುತ್ನಲ್ಲಿ ಸ್ವಾವಲಂಬಿ ಯಾಗಿತ್ತು. ಅತ್ಯಂತ ಹೆಚ್ಚು ವಿದ್ಯುತ್ ಉತ್ಪಾದನೆ ಆಗಿರುವುದು ನಮ್ಮ ಅವಧಿ ಯಲ್ಲಿ. ನಮಲ್ಲಿನ 2000 ಮೆ.ವ್ಯಾ ವಿದ್ಯುತ್ ಕೊರತೆಯನ್ನು ತುಂಬಿಸುವುದ ರೊಂದಿಗೆ 6ಸಾವಿರ ಕ್ಕೂ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಿದ್ದೇವೆ. ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ. ಅಧಿಕಾರದಲ್ಲಿರುವಾಗ ಎಲ್ಲ ಭರವಸೆ ಈಡೇರಿಸಿ ದ್ದೇವೆ. ಆದುದರಿಂದ ಅವರ ಹೇಳಿಕೆ ಹತಾಶೆಯಿಂದ ಕೂಡಿದೆ ಎಂದು ದೂರಿದರು.
ಉಚಿತ ಭರವಸೆಗಳಿಂದ ರಾಜ್ಯಕ್ಕೆ ಶ್ರೀಲಂಕಾದ ಪರಿಸ್ಥಿತಿ ಬರಬಹುದು ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದು ಬಿಜೆಪಿಯ ಬೇಜಾವಾಬ್ದಾರಿ ಹೇಳಿಕೆಯಾಗಿದೆ. ಬಿಜೆಪಿಯವರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಕರ್ನಾಟಕದ ಸಾಲ 2.5ಲಕ್ಷ ರೂ. ಕೋಟಿ ಇತ್ತು. ಈಗ ಅದು 5ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಬಿಜೆಪಿಯವರು 2.5ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ರಾಜ್ಯದ ಆರ್ಥಿಕ ದಿವಾಳಿತನ ಮಾಡುವ ಪ್ರಯತ್ನ ವನ್ನು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕೆತೆಯೇ ಇವರಿಗೆ ಇಲ್ಲ. ಇಡೀ ಬೊಕ್ಕಸವನ್ನು ಖಾಲಿ ಮಾಡಿ ಲೂಟಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಅಮಿತ್ ಶಾ ಮಂಡ್ಯದಲ್ಲಿ ನಡೆದ ಸಭೆಯಲ್ಲಿ ಮಂದಿರ ನಿರ್ಮಿಸಿರುವುದೇ ಕೇಂದ್ರ ಸರಕಾರ ಕಾರ್ಯಕ್ರಮಗಳೆಂದು ಹೇಳಿದ್ದಾರೆ. ನಾವು ಯಾರು ಕೂಡ ದೇವಸ್ಥಾನದ ವಿರೋಧಿಗಳಲ್ಲ. ನಾವು ಕೂಡ ದೇವರ ಭಕ್ತರು. ಆದರೆ ಮನುಷ್ಯರ ಜೀವನ ಮುಖ್ಯ. ಹೊಟ್ಟೆಗೆ ಹಿಟ್ಟು ಮುಖ್ಯ. ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂಬ ಸಿದ್ಧಾಂತ ಬಿಜೆಪಿ ಪಕ್ಷದ್ದು. ಕಾಂಗ್ರೆಸ್ ಯಾವತ್ತು ಅನ್ನ ಕೊಡುವ ಪಕ್ಷವಾಗಿದೆ ಎಂದು ಅವರು ತಿಳಿಸಿದರು.