‘ಮುಖ್ಯಮಂತ್ರಿ’ಗೆ ಎಂಟುನೂರರ ಸಂಭ್ರಮ...

1980ರಿಂದ ಪ್ರದರ್ಶನ ಕಾಣುತ್ತಿರುವ ‘ಮುಖ್ಯಮಂತ್ರಿ’ ನಾಟಕಕ್ಕೆ ಈಗ 800 ಪ್ರದರ್ಶನಗಳ ಸಂಭ್ರಮ. ಇದೇ 22ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 800ನೇ ಪ್ರದರ್ಶನವಿದೆ. ಜೊತೆಗೆ ಕಲಾಗಂಗೋತ್ರಿ ತಂಡಕ್ಕೆ ಐವತ್ತು ವರ್ಷ. ಇದೊಂದು ದಾಖಲೆ. ಇದಕ್ಕಿಂತ ಮಹತ್ವವಾದ ದಾಖಲೆ ಎಂದರೆ; ಈ ನಾಟಕದ ಬೇರೆ ಬೇರೆ ಪಾತ್ರಗಳು ಬದಲಾದರೂ ‘ಮುಖ್ಯಮಂತ್ರಿ’ ಪಾತ್ರವನ್ನು ಚಂದ್ರು ಅವರೇ ನಿರ್ವಹಿಸುತ್ತಿದ್ದಾರೆ.

ಹೊನ್ನಸಂದ್ರ ಚಂದ್ರಶೇಖರ ಅಂದರೆ ಯಾರು ಎಂದು ನೀವು ಕೇಳಬಹುದು. ಆದರೆ ‘ಮುಖ್ಯಮಂತ್ರಿ’ ಚಂದ್ರು ಎಂದರೆ ಓ ಗೊತ್ತಲ್ಲ ಎನ್ನುವಿರಿ. ‘ಮುಖ್ಯಮಂತ್ರಿ’ ನಾಟಕದ ಮುಖ್ಯಮಂತ್ರಿ ಪಾತ್ರದಿಂದ ಕಾಯಂ ಆಗಿ ‘ಮುಖ್ಯಮಂತ್ರಿ’ ಚಂದ್ರು ಎಂದು ಹೆಸರಾದ ಅವರು ಸಾಧಾರಣ ಹಿನ್ನೆಲೆಯ, ಸಾಧಾರಣ ಬುದ್ಧಿಮತ್ತೆಯ (ಇದು ಅವರೇ ಹೇಳುವುದು) ಹುಡುಗನೊಬ್ಬ ಬೆಳೆದ ಬಗೆ ಅಕ್ಷರಶಃ ಅದ್ಭುತ. ತಮ್ಮ ಬದುಕಿನ ಪ್ರಸಂಗಗಳನ್ನು ಸಕಾರಾತ್ಮಕವಾಗಿ ಪರಿವರ್ತಿಸಿಕೊಂಡ ಯಶೋಗಾಥೆ ನಿರಾಸೆಗೊಂಡವರಿಗೆ ಸ್ಫೂರ್ತಿದಾಯಕ.
ಅವರ ಬದುಕಿನ ಆಕಸ್ಮಿಕ ತಿರುವುಗಳು, ರೂಪಿಸಿದ ಪರಿ ಹಾಗೂ ತಲುಪಿದ ಗಮ್ಯವನ್ನು ಗಮನಿಸಿದಾಗ ಇತರರಿಗೆ ಖಂಡಿತ ಭರವಸೆ ಆಗಬಲ್ಲವು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹೊನ್ನಸಂದ್ರ ಗ್ರಾಮದಲ್ಲಿ 1953ರ ಆಗಸ್ಟ್ 28ರಂದು ಜನಿಸಿದ ಚಂದ್ರು ಓದಿದ್ದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ. ಬೆಂಗಳೂರಲ್ಲಿ ಬಿಎಸ್ಸಿ ಪದವಿ ಪಡೆದು, ಕಾನೂನು ಪದವಿಗಾಗಿ ಓದುತ್ತಿರುವಾಗಲೇ ಬಿ.ವಿ.ರಾಜಾರಾಂ ಅವರೊಂದಿಗೆ ನಂಟು. ಇದರ ಪರಿಣಾಮ; ರಾಜಾರಾಂ ಕಟ್ಟಿದ ಕಲಾಗಂಗೋತ್ರಿ ತಂಡದಲ್ಲಿ ನಿರಂತರವಾಗಿ ನಾಟಕಗಳಲ್ಲಿ ಅಭಿನಯ. ಜೊತೆಗೆ ಮೂಕಾಭಿನಯ ಬೇರೆ.
ಅವರಿಗೆ ಸಿಕ್ಕ ರಂಗ ಗುರುಗಳೆಲ್ಲ ದಿಗ್ಗಜರೇ. ಹೀಗಿರುವಾಗ ಇಂಗ್ಲಿಷ್ ಅಧ್ಯಾಪಕರೂ ರಂಗಕರ್ಮಿಯೂ ಆದ ಟಿ.ಎಸ್.ಲೋಹಿತಾಶ್ವ ಅವರು ಹಿಂದಿಯಲ್ಲಿ ಜನಪ್ರಿಯವಾಗಿದ್ದ ರಣಜಿತ್ ಕಪೂರ್ ಅವರ ‘ಮುಖ್ಯಮಂತ್ರಿ’ ನಾಟಕವನ್ನು ರಾಜಾರಾಂ ಅವರು ನಿರ್ದೇಶಿಸಿ, ತಮ್ಮ ಕಲಾಗಂಗೋತ್ರಿ ತಂಡದಿಂದ ಆಡಿಸಲು ಮುಂದಾದರು. ತಾವೇ ಮುಖ್ಯಮಂತ್ರಿ ಪಾತ್ರ ನಿರ್ವಹಿಸುವುದಾಗಿ ಲೋಹಿತಾಶ್ವ ಅವರು ತಿಳಿಸಿದರು. ಆದರೆ ಅವರಿಗೆ ಟೈಫಾಯ್ಡಿ ಆದ ಪರಿಣಾಮ ಮುಖ್ಯಮಂತ್ರಿ ಪಾತ್ರ ಮಾಡಲು ಸಾಧ್ಯವಾಗಲಿಲ್ಲ. ಆದರೆ ನಾಟಕ ಪ್ರದರ್ಶನದ ದಿನವನ್ನು ಪ್ರಕಟಿಸಲಾಗಿತ್ತು. ಇದಕ್ಕಾಗಿ ಲೋಹಿತಾಶ್ವ ಅವರು ನಾಟಕ ಮುಂದೂಡದೆ ಪ್ರದರ್ಶನ ಆಗಲೆಂದು ಹೇಳಿದರು. ಆದರೆ ಮುಖ್ಯಮಂತ್ರಿ ಪಾತ್ರ ಮಾಡಲು ಯಾರೂ ಮುಂದೆ ಬರಲಿಲ್ಲ. ಅನಿವಾರ್ಯವಾಗಿ ಚಂದ್ರು ಅವರಿಗೆ ಬಂತು. ‘‘ಲೋಹಿತಾಶ್ವ ಅವರ ಹಾಗೆ ನನಗೆ ಪಾತ್ರ ಮಾಡಲಾಗದು. ನನ್ನದೇ ಛಾಪು ಮೂಡಿಸುವೆ. ಸಂಭಾಷಣೆ ಮರೆತರೂ ಮತ್ತೇನೋ ಸೇರಿಸಿಕೊಂಡು ನಾಟಕ ಮುಗಿಸುವೆ. ಚೆನ್ನಾಗಿ ಬಂದರೆ ನನ್ನ ಅದೃಷ್ಟ. ಚೆನ್ನಾಗಿ ಬರದಿದ್ದರೆ ನಿಮ್ಮ ದುರದೃಷ್ಟ’’ ಎಂದರು. ಗಂಭೀರವಾದ, ರಾಜಕೀಯ ಕುರಿತ ನಾಟಕವು ಹಾಸ್ಯಮಯ ನಾಟಕವಾಗಿ ಪ್ರದರ್ಶನ ಕಂಡು ಯಾಶಸ್ವಿಯಾಯಿತು.
ಆಗ ಲೋಹಿತಾಶ್ವ ಅವರು ‘‘ಇದು ನಾನು ಬರೆದ ನಾಟಕವಲ್ಲ; ನಿಮ್ಮಿಷ್ಟದ ನಾಟಕ. ತುಂಬಾ ಗಂಭೀರವಾದ ನಾಟಕವನ್ನು ಕೊಂದಿದ್ದೀರಿ. ಆದರೆ ಪಂಚ್ ಡೈಲಾಗ್ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡಿದ್ದೀರಿ. ಜನ ಮೆಚ್ಚಿದ್ದಾರೆ. ಮುಂದುವರಿಸಿಕೊಂಡು ಹೋಗಿ’’ ಎಂದು ಹಾರೈಸಿದರು. ಹೀಗೆ 1980ರಿಂದ ಪ್ರದರ್ಶನ ಕಾಣುತ್ತಿರುವ ‘ಮುಖ್ಯಮಂತ್ರಿ’ ನಾಟಕಕ್ಕೆ ಈಗ 800 ಪ್ರದರ್ಶನಗಳ ಸಂಭ್ರಮ. ಇದೇ 22ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 800ನೇ ಪ್ರದರ್ಶನವಿದೆ. ಜೊತೆಗೆ ಕಲಾಗಂಗೋತ್ರಿ ತಂಡಕ್ಕೆ ಐವತ್ತು ವರ್ಷ. ಇದೊಂದು ದಾಖಲೆ. ಇದಕ್ಕಿಂತ ಮಹತ್ವವಾದ ದಾಖಲೆ ಎಂದರೆ; ಈ ನಾಟಕದ ಬೇರೆ ಬೇರೆ ಪಾತ್ರಗಳು ಬದಲಾದರೂ ‘ಮುಖ್ಯಮಂತ್ರಿ’ ಪಾತ್ರವನ್ನು ಚಂದ್ರು ಅವರೇ ನಿರ್ವಹಿಸುತ್ತಿದ್ದಾರೆ. ಈ ನಾಟಕದ ಬಲದಿಂದ ‘ಚಕ್ರವ್ಯೆಹ’ ಸಿನೆಮಾಕ್ಕೆ ಖಳನಾಯಕನ ಪಾತ್ರಕ್ಕೆ ಆಯ್ಕೆಯಾಗಿದ್ದು ಇತಿಹಾಸ. ಅಲ್ಲಿಂದ 500ಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ‘ಮುಖ್ಯಮಂತ್ರಿ’ ನಾಟಕಕ್ಕೆ ಬಣ್ಣ ಹಚ್ಚುತ್ತಾರೆ. ಮುಖ್ಯಮಂತ್ರಿ ನಾಟಕದಿಂದ ಅವರು ಗೌರಿಬಿದನೂರಿನ ಶಾಸಕರಾದುದು ಗಮನಾರ್ಹ. ಶಾಸಕರಾಗಿದ್ದ ಅವಧಿಯಲ್ಲಿ ಗೌರಿಬಿದನೂರು ತಾಲೂಕಿನಲ್ಲಿದ್ದ ಕಟ್ಟಡರಹಿತ ಪ್ರಾಥಮಿಕ ಶಾಲೆಗಳನ್ನು ಅಭಿವೃದ್ಧಿಗೊಳಿಸಲು ಈ ನಾಟಕದ ಮೂಲಕ ರೂ. 7.5 ಲಕ್ಷ ಸಂಗ್ರಹಿಸಿದರು. ಹೀಗೆಯೇ ಅತಿವೃಷ್ಟಿಯಾದಾಗ, ಅನಾವೃಷ್ಟಿಯಾದಾಗ ಮುಖ್ಯಮಂತ್ರಿ ನಾಟಕದ ಮೂಲಕ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ನೆರವಾದರು. ಸಮುದಾಯ ಭವನಗಳ ಕಟ್ಟಡಗಳ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ. ಬೆಂಗಳೂರಿನ ಕೃಷ್ಣ ಬುದ್ಧಿಮಾಂದ್ಯ ಮಕ್ಕಳ ವಸತಿಶಾಲೆಯ ಕಟ್ಟಡ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಅಲ್ಲದೆ ಹಿಂದುಳಿದ ವರ್ಗಗಳ ಮಕ್ಕಳ ವಿದ್ಯಾರ್ಥಿನಿಲಯಗಳ ಕಟ್ಟಡಗಳ ಅಭಿವೃದ್ಧಿಗೂ ಶ್ರಮಿಸಿದ್ದಾರೆ.
ಮುಖ್ಯಮಂತ್ರಿಗಳಾಗಿದ್ದ ಗುಂಡೂರಾವ್, ರಾಮಕೃಷ್ಣ ಹೆಗಡೆ ಅವರಿಂದ ಹಿಡಿದು ಬಹುತೇಕ ಸಚಿವರು, ಶಾಸಕರು ಈ ನಾಟಕ ನೋಡಿದವರಿದ್ದಾರೆ. ವರನಟ ಡಾ.ರಾಜಕುಮಾರ್ ಮೆಚ್ಚಿದ್ದಾರೆ. ಹಾಗೆಯೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ, ಅನ್ಯರಾಜ್ಯಗಳಲ್ಲದೆ ವಿದೇಶದಲ್ಲೂ ಈ ನಾಟಕ ಪ್ರದರ್ಶನ ಕಂಡಿದೆ. ಇಂತಹ ಚಂದ್ರು ಅವರಿಗೆ ಈಗ ಎಪತ್ತರ ಹರೆಯ. ಅವರು ದಣಿವರಿಯದೆ ಮುಖ್ಯಮಂತ್ರಿ ನಾಟಕಕ್ಕೆ ಬಣ್ಣ ಹಚ್ಚುತ್ತಾರೆ. ಅವರು ಅಭಿನಯದ ಕುರಿತು ಹೇಳಿದ ಈ ಮಾತುಗಳು ಇಂದಿಗೂ ಎಂದಿಗೂ ಪ್ರಸ್ತುತ.
‘‘ಸಂಭಾಷಣೆಯನ್ನು ಕೇವಲ ಕಂಠಪಾಠ ಮಾಡಿಕೊಂಡು ಗೊತ್ತಿರುವಷ್ಟು ಅಭಿನಯ ಮಾಡೋದು ಒಂದು ಹಂತ. ಎಲ್ಲ ವರ್ಗದವರು ಮೆಚ್ಚಿ, ಕೆಟ್ಟ ಪಾತ್ರದಲ್ಲೂ ನಾವು ಮಾಡಿದ್ದು ಅದ್ಭುತ ಎನ್ನಿಸಬೇಕಾದರೆ ಒಂಟಿಯಾಗಿ ಕುಳಿತು ಪಾತ್ರದ ಕುರಿತು ಚಿಂತಿಸಬೇಕು. ಪಾತ್ರದ ಹಿನ್ನೆಲೆ, ವಾತಾವರಣ, ಸನ್ನಿವೇಶ, ಸಂದರ್ಭ ಗಮನಿಸಬೇಕು. ನಿತ್ಯ ಸಾರ್ವಜನಿಕರ ಚಟುವಟಿಕೆಗಳನ್ನು ಗಮನಿಸಿ, ಒಬ್ಬೊಬ್ಬರಲ್ಲಿ ಒಂದೊಂದು ವಿಶೇಷ ಇರುತ್ತದೆ. ಆಕಳಿಸುವುದರಲ್ಲಿ, ಕುಳಿತುಕೊಳ್ಳುವುದರಲ್ಲಿ, ಮಲಗುವುದರಲ್ಲಿ, ನಗುವುದರಲ್ಲಿ, ಅಳುವುದರಲ್ಲಿ... ಪ್ರತಿಯೊಂದರಲ್ಲೂ ಅಭಿನಯ ಇದೆ. ನೀವು ಅನುಭವಿಸಿ; ನಂತರ ಪಾತ್ರಕ್ಕೆ ಅಚ್ಚೊತ್ತಬೇಕು. ನಿಮ್ಮ ಹೆಸರನ್ನು ಮರೆ ಮಾಡಿ, ಪಾತ್ರದ ಹೆಸರಾಗಿ ಉಸಿರಾಡಿ. ನಿಮ್ಮನ್ನು ಮರೆತು ಪಾತ್ರವೇ ನೀವಾಗಿ. ಆಗ ನೋಡುಗರಿಗೆ ನಿಮ್ಮ ಅಭಿನಯ ಮೆಚ್ಚುಗೆಯಾಗಬೇಕು. ಹಾಗಾದಾಗ ನಿಮಗೂ ತೃಪ್ತಿ, ನೋಡಿದವರಿಗೂ ಖುಷಿ.’’







