ನಟ ದರ್ಶನ್ ತೋಟದ ಮನೆ ಮೇಲೆ ಅರಣ್ಯ ಸಂಚಾರಿ ದಳದ ಅಧಿಕಾರಿಗಳ ದಾಳಿ: 4 ವಿಶಿಷ್ಟ ಪ್ರಭೇದದ ಜಲಪಕ್ಷಿಗಳ ವಶ
ಮೈಸೂರು,ಜ.21: ಚಲನಚಿತ್ರ ನಟ ದರ್ಶನ್ ಅವರಿಗೆ ಸೇರಿದೆ ಎನ್ನಲಾದ ಟಿ.ನರಸೀಪುರ ರಸ್ತೆಯ ಕೆಂಪಯ್ಯನ ಹುಂಡಿ ಬಳಿ ಇರುವ ಫಾಮ್೯ ಹೌಸ್ ಮೇಲೆ ಶುಕ್ರವಾರ ತಡರಾತ್ರಿ ಮೈಸೂರು ಸಂಚಾರಿ ಅರಣ್ಯದಳದ ಅಧಿಕಾರಿಗಳು ದಾಳಿ ನಡೆಸಿ ಕೆಲವು ಪಕ್ಷಿಗಳನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ಕೆಲವು ಸಂರಕ್ಷಿತ ಪಕ್ಷಿಗಳನ್ನು ದರ್ಶನ್ ಅವರ ಕೆಂಪಯ್ಯನ ಹುಂಡಿ ತೋಟದಲ್ಲಿ ಸಾಕಲಾಗುತ್ತಿತ್ತು ಎನ್ನಲಾಗಿದ್ದು ಆ ಪಕ್ಷಿಗಳನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ದರ್ಶನ್ ತೋಟದ ಮನೆಯಲ್ಲಿ ಸಾಕುತ್ತಿರುವ ಕೆಲವು ವಿದೇಶಿ ಪ್ರಾಣಿ, ಪಕ್ಷಿಗಳಿಗೆ ವನ್ಯಜೀವಿ ಕಾಯ್ದೆಯಡಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿರಲಿಲ್ಲ. ಈ ಕಾರಣಕ್ಕೆ ದಾಳಿ ನಡೆದಿದೆ ಎಂದು ಅರಣ್ಯ ಸಂಚಾರಿ ದಳದ ಮುಖ್ಯಸ್ಥ ಡಿಸಿಎಫ್ಒ ಭಾಸ್ಕರ್ ತಿಳಿಸಿದ್ದಾರೆ.
ಅರಣ್ಯ ಸಂಚಾರಿ ದಳ ವಶಕ್ಕೆ ಪಡೆದಿರುವ 4 ಬಾತುಕೋಳಿಗಳ ವಿಶಿಷ್ಟ ಪ್ರಭೇದದ ಜಲಪಕ್ಷಿಗಳನ್ನು (ಬಾರ್ ಹೆಡೆಡ್ ಗೂಸ್) ಸಾಕುವಂತಿಲ್ಲ. ಸಾಕುವುದು ಅಪರಾಧ. ಇವುಗಳು ಕಾಡಿನಲ್ಲೇ ಬದುಬೇಕಿದ್ದು, ಮೃಗಾಲಯ ಅಥವಾ ಮನೆ, ಫಾರ್ಮ್ಗಳಲ್ಲಿ ಸಾಕುವುದು ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ಅಪರಾಧ’ ಎಂದು ಅವರು ಹೇಳಿದರು.
ಸಾಕಣೆ ನಿಷೇಧಿತ ವನ್ಯ ಪಕ್ಷಿಗಳ ಸಾಕಣೆಗಾಗಿ ಪ್ರಕರಣ ದಾಖಲಿಸಲಾಗಿದೆ. ಈ ಪಕ್ಷಿಗಳನ್ನು ಅವುಗಳದ್ದೇ ಪ್ರಭೇದದ ಪಕ್ಷಿಗಳು ಜೀವಿಸುವ ತಿ.ನರಸೀಪುರದ ಸಮೀಪದ ಹದಿನಾರು ಕೆರೆಯಲ್ಲಿ ಬಿಡಲು ನ್ಯಾಯಾಲಯದ ಅನುಮತಿ ಪಡೆಯುತ್ತಿದ್ದೇವೆ, ಬಳಿಕ ಅಲ್ಲಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾರ್ ಹೆಡೆಡ್ ಗೂಸ್ ಮಧ್ಯ ಏಷ್ಯಾ ಪ್ರದೇಶದ್ದಾಗಿದ್ದು, ಹಿಮಾಲಯ ಪರ್ವತ ಪ್ರದೇಶ ದಾಟಿ ಭಾರತಕ್ಕೆ ವಲಸೆ ಬರುತ್ತವೆ. ಇವುಗಳು ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಅರಣ್ಯದಲ್ಲೇ ಸ್ವತಂತ್ರವಾಗಿ ಬದುಕಬೇಕಿರುವ ಹುಲಿ, ನವಿಲು ಇತ್ಯಾದಿ ವಿಭಾಗಕ್ಕೆ ಸೇರಿದ ಪಕ್ಷಿಗಳು ಎಂಬುದನ್ನು ಸಾರ್ವಜನಿಕರು ಅರಿತಿರಬೇಕು ಎಂದು ಅವರು ತಿಳಿಸಿದ್ದಾರೆ.