ಮಂಗಳೂರು: ವ್ಯಾಪಾರಿಗಳಿಗೆ ನಿರ್ಬಂಧ ಹೇರುವ ಸಂಘಟನೆಗಳ ವಿರುದ್ಧ ಕ್ರಮಕ್ಕೆ ಬೀದಿಬದಿ ವ್ಯಾಪಾರಿಗಳ ಸಂಘ ಮನವಿ

ಮಂಗಳೂರು: ನಗರದ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮತೀಯ ಸಂಘಟನೆಗಳ ಹೆಸರಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹಾಕಿರುವ ಬ್ಯಾನರ್ಗಳನ್ನು ಹಾಕಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ. ಸಂತೆ ವ್ಯಾಪಾರಿಗಳು ಎಲ್ಲಾ ಜಾತ್ರೆ, ಉರೂಸ್ ಮತ್ತಿತರ ಉತ್ಸವಗಳಲ್ಲಿ ವ್ಯಾಪಾರ ಮಾಡಿ ಜೀವನ ಸಾಗಿಸುವವರಾಗಿದ್ದಾರೆ. ಈ ರೀತಿಯ ಕೋಮು ವಿಭಜಕ ನೀತಿಗಳು ಬಡ ಸಂತೆ ವ್ಯಾಪಾರಿಗಳ ಜೀವನ ನಿರ್ವಹಣೆಗೆ ತೊಂದರೆ ಆಗುತ್ತಿದೆ. ಹಾಗಾಗಿ ಇಂತಹ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಬೀದಿಬದಿ ವ್ಯಾಪಾರಿಗಳ ಸಂಘವು ಶನಿವಾರ ಮಂಗಳೂರು ಪೊಲೀಸ್ ಕಮಿಷನರ್ ಮತ್ತು ಜಿಲ್ಲಾಧಿಕಾರಿ, ಮನಪಾ ಆಡಳಿತ, ತಹಶೀಲ್ದಾರ್ರಿಗೆ ಮನವಿ ಸಲ್ಲಿಸಿದೆ.
ಕಳೆದ ಅನೇಕ ವರ್ಷಗಳಿಂದ ಸಂತೆ ಮತ್ತು ಉತ್ಸವ ವ್ಯಾಪಾರಿಗಳು ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದಭಾವವಿಲ್ಲದೆ ಉರೂಸ್, ಜಾತ್ರೆ ಎಂಬ ವ್ಯತ್ಯಾಸಗಳಿಲ್ಲದೆ ಅನ್ಯೋನ್ಯತೆಯಿಂದ ವ್ಯಾಪಾರ ಮಾಡಿಕೊಂಡು ಬಂದಿರುವ ಪರಂಪರೆ ಇದೆ. ಸಂತೆ ವ್ಯಾಪಾರಿಗಳು ಸರ್ವ ಧರ್ಮದ ಜನರ ಸಕಲ ದೇವರ ಸನ್ನಿಧಿಯಲ್ಲಿ ವ್ಯಾಪಾರ ಮಾಡಿ ಬದುಕು ಸಾಗಿಸುವವರಾಗಿದ್ದಾರೆ. ಈ ರೀತಿಯ ವ್ಯಾಪಾರದಲ್ಲಿ ಕೋಮುಭಾವನೆ ಕೆರಳಿಸಿ ವಿಭಜಿಸಿ ರಾಜಕೀಯ ಮಾಡುವುದನ್ನು ಸಂಘವು ಖಂಡಿಸುತ್ತದೆ. ಸಂತೆ ಮತ್ತು ಉತ್ಸವ ವ್ಯಾಪಾರಿಗಳು ಬೀದಿ ಬದಿ ವ್ಯಾಪಾರಿಗಳ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ 2014 ಮತ್ತು ಕರ್ನಾಟಕ ಸರಕಾರದ ಅಧಿ ನಿಯಮಗಳಡಿ ಕಾನೂನಿನ ಮಾನ್ಯತೆಯನ್ನು ಪಡೆದವರಾಗಿದ್ದು ಅವರ ಹಕ್ಕುಗಳ ರಕ್ಷಣೆಯನ್ನು ಜಿಲ್ಲಾಡಳಿತ ಮಾಡಬೇಕಿದೆ ಎಂದು ಒತ್ತಾಯಿಸಿದೆ.
ನಗರದ ರಥಬೀದಿಯ ವೆಂಕಟರಮಣ ದೇವಸ್ಥಾನದಲ್ಲಿ ರಥೋತ್ಸವ ಪ್ರಯುಕ್ತ ನಡೆಯುವ ಕಾರ್ಯಕ್ರಮದ ಸಂದರ್ಭ ಮುಸ್ಲಿಂ ಸಂತೆ ವ್ಯಾಪಾರಿಗಳು ವ್ಯಾಪಾರ ಮಾಡದಂತೆ ನಿಷೇಧಿಸುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ರೀತಿಯ ಸುದ್ದಿ ಹಬ್ಬಿಸುವ ಬ್ಯಾನರ್ ಕಟ್ಟಿ ಅಶಾಂತಿ ಸೃಷ್ಟಿಸುವ ಶಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಂಘದ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ನೇತೃತ್ವದ ನಿಯೋಗದಲ್ಲಿ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಖಜಾಂಚಿ ಮುಹಮ್ಮದ್ ಆಸೀಫ್, ಮುಖಂಡರಾದ ಆದಂ ಬಜಾಲ್, ಮುಝಫರ್, ನೌಶಾದ್ ಉಳ್ಳಾಲ, ಇಸ್ಮಾಯಿಲ್ ಉಳ್ಳಾಲ ಮುಂತಾದವರಿದ್ದರು.







