ಅನುದಾನ ತರುವುದರಲ್ಲಿ ನಾನು ಕೋಟಿ ರವಿ: ಶಾಸಕ ಸಿ.ಟಿ.ರವಿ
''ಅಭಿವೃದ್ಧಿ ಸಹಿಸದೇ ಅಸೂಯೆಯಿಂದ ಟೀಕೆ ಮಾಡುತ್ತಿದ್ದಾರೆ''
ಚಿಕ್ಕಮಗಳೂರು, ಜ.23: ನಮ್ಮ ಸ್ನೇಹಿತರು ನನ್ನನ್ನು ಸಿ.ಟಿ.ರವಿ ಅಲ್ಲ, ಕೋಟಿ ರವಿ ಎನ್ನುತ್ತಿರುತ್ತಾರೆ, ಅವರ ಉದ್ದೇಶ ಏನೇ ಇರಬಹುದು, ಆದರೆ ಅನುದಾನ ತರುವುದರಲ್ಲಿ ನಾನು ಕೋಟಿ ರವಿ ಎಂಬುದು ಸತ್ಯ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ನಗರ ಸಮೀಪ ಇಂದಾವರದ ಛತ್ರಿಮರದಮ್ಮ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಬಿಲ್ಲವ ಸಮುದಾಯ ಭವನದ ನಿರ್ಮಾಣದ ಭೂಮಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರ ಸೇರಿದಂತೆ ಕಡೂರು, ತರೀಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೆರೆ ತುಂಬಿಸುವ ಯೋಜನೆಗೆ 1281 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ. ಮನೆ ಮನೆಗೆ ನೀರು ಪೂರೈಕೆ ಮಾಡುವ ಯೋಜನೆಯಲ್ಲಿ ಮೂರು ಕ್ಷೇತ್ರಗಳಿಗೆ 1400 ಕೋಟಿ ರೂ. ಅನುದಾನ ತಂದಿದ್ದೇನೆ. ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಮತ್ತು ಸೂಪರ್ಸ್ಪೆಷಾಲಿಟಿ ಆಸ್ಪತ್ರೆಗೆ 630 ಕೋಟಿ ರೂ., ಕಡೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಗೆ 297 ಕೋಟಿ ರೂ., ಅಮೃತ್ ಯೋಜನೆಗೆ 117 ಕೋಟಿ ರೂ. ಅಲ್ಲದೇ 270 ಕೋಟಿ ರೂ. ಅನುದಾನವನ್ನು ಬೇರೆ ಬೇರೆ ಯೋಜನೆಗಳಿಗೆ ತಂದಿದ್ದೇವೆ. 87 ಕೋಟಿ ರೂ. ಅನುದಾನವನನು ಯುಜಿಡಿಗೆ ಮಂಜೂರು ಮಾಡಿಸಿದ್ದೇನೆ. ಹೀಗಿದ್ದ ಮೇಲೆ ನನ್ನನ್ನು ಕೋಟಿ ರವಿ ಅಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.
ವಿರೋಧಿ ಪಕ್ಷದಲ್ಲಿರುವ ಸ್ನೇಹಿತರು ಕೋಟಿ ರೂ. ಎಂದು ಕರೆಯುತ್ತಿರುವುದು ಸರಿಯಾಗಿಯೇ ಇದೆ. ಅಭಿವೃದ್ಧಿ ವಿಷಯದಲ್ಲಿ ನಾನು ಕೋಟಿ ರವಿಯೇ, ನನ್ನ ಅಭಿವೃದ್ಧಿ ಸಹಿಸದೇ ಅಸೂಯೆಯಿಂದ ಟೀಕೆ ಮಾಡುತ್ತಿದ್ದಾರೆ ಎಂದ ಅವರು, ಕೆಲವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿದ್ದು, ಅವರಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಇರುವ ಬದ್ಧತೆ ಎಷ್ಟು ಎಂಬುದು ನನ್ನ ಪ್ರಶ್ನೆಯಾಗಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಯಾವುದೇ ಸರಕಾರಿ ಆಡಳಿತ ಮಂಡಳಿ, ಸಮಿತಿಗೆ ನೇಮಕಾತಿ ಮಾಡುವುದಿದ್ದರೂ ಅದು ಸಣ್ಣ ಸಣ್ಣ ಸಮುದಾಯಕ್ಕೇ ಮೀಸಲು ಎಂದು ತೀರ್ಮಾನ ಮಾಡಿದ್ದೇವೆ. ನಗರಸಭೆ ನಾಮಿನಿ, ಸಿಡಿಎ, ಆಶ್ರಯ ಸಮಿತಿ, ಬಗರ್ಹುಕ್ಕುಂ, ಆರಾಧನಾ ಸಮಿತಿಯಂತಹ ಸಮಿತಿಗಳಿಗೆ ಯಾವುದೇ ಮೇಲ್ವರ್ಗದವರನ್ನು ನೇಮಿಸಿಲ್ಲ. ಪಕ್ಷದಿಂದ ಟಿಕೆಟ್ ಕೊಡುವಾಗ ಗೆಲ್ಲುವ ಸಾಮರ್ಥ್ಯ ಇರುವವರಿಗೇ ನೀಡಿದ್ದೇವೆ ಎಂದರು.
ಬಿಲ್ಲವ ಸಮುದಾಯ ಭವನದ ಜಾಗಕ್ಕೆ ಸಂಬಂಧಿಸಿದ ವಿವಾದದ ಸಮಸ್ಯೆಯನ್ನು ಇಲ್ಲೇ ಬಗೆಹರಿಸಿದ್ದೇವೆ. ಆರಂಭದಲ್ಲಿ 25 ಲಕ್ಷ ರೂ. ಮಂಜೂರು ಮಾಡಿದ್ದು, ಮತ್ತೊಂದು ಕೋಟಿ ರೂ. ಅನುದಾನ ಬೋನಸ್ ಆಗಿ ಬರಲಿದೆ ಎಂದ ಅವರು, 1.25 ಕೋಟಿ ರೂ. ಬಿಲ್ಲವ ಸಭಾಭವನಕ್ಕಾದರೆ, ನಾರಾಯಣಗುರು ಸಂಘಕ್ಕೂ 1.25 ಕೋಟಿ ರೂ. ಮಂಜೂರು ಮಾಡಿಸಿದ್ದೇವೆ. ಬಿಲ್ಲವ, ಈಡಿಗ ಸಮುದಾಯಗಳಿಗೆ 2018ರಿಂದ ಈಚೆಗೆ 3.17 ಕೋಟಿ ರೂ. ಮಂಜೂರು ಮಾಡಿಸಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೋಲೂರು ಮಠದ ವಿಖ್ಯಾತಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ಕೆ.ಸಿ.ಗುಣಶೇಖರ್, ಜಿಲ್ಲಾ ಒಕ್ಕೂಟದ ಅದ್ಯಕ್ಷ ಹೆಚ್.ಎಂ.ಸತೀಶ್, ಸಿಡಿಎ ಅಧ್ಯಕ್ಷ ಸಿ.ಆನಂದ್, ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು, ಒಕ್ಕೂಟದ ಕಾರ್ಯಾಧ್ಯಕ್ಷ ಕೆ.ಸಿ.ಶಾಂತಕುಮಾರ್, ಕಟ್ಟಡ ಸಮಿತಿ ಅಧ್ಯಕ್ಷ ಕೆ.ರಾಜು, ಜಿಲ್ಲಾ ಪ್ರತಿನಿಧಿ ಎನ್.ಕೇಶವ್, ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಕೆ.ಚಂದ್ರಶೇಖರ್, ಗೌರವಾಧ್ಯಕ್ಷ ಬಿ.ವಿಠಲ್, ಜಿಲ್ಲಾ ಉಪಾಧ್ಯಕ್ಷ ಎಂ.ಕೃಷ್ಣಪ್ಪ, ಜಿ.ಪಂ. ಮಾಜಿ ಸದಸ್ಯೆ ಶಿಲ್ಪರವಿ, ಸಮಾಜದ ಮುಖಂಡರಾದ ಬಿ.ರಾಜಪ್ಪ, ಖಜಾಂಚಿ ಉಮೇಶ್, ಪ್ರಧಾನ ಕಾರ್ಯದರ್ಶಿ ಸಂತೋಷ್ಕೋಟ್ಯಾನ್ ಉಪಸ್ಥಿತರಿದ್ದರು.