ಸುಧಾಕರ್ಗೆ ಟಿಕೇಟ್ ಕೊಟ್ಟು ಇಂದು ಪಶ್ಚಾತ್ತಾಪ ಪಡುವಂತಾಗಿದೆ: ಸಿದ್ದರಾಮಯ್ಯ
ಚಿಕ್ಕಬಳ್ಳಾಪುರ: 'ಸುಧಾಕರ್ ಅವರಿಗೆ ರಾಜಕೀಯ ಜನ್ಮ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. 2013ರಲ್ಲಿ ಅಂಜನಪ್ಪ ಅವರಿಗೆ ಟಿಕೇಟ್ ನೀಡುವಂತೆ ವೀರಪ್ಪ ಮೊಯ್ಲಿ ಅವರು ಹೇಳಿದರು, ಆದರೆ ನಾನು ಮತ್ತು ಪರಮೇಶ್ವರ್ ಅವರು ಸುಧಾಕರ್ ಅವರಿಗೆ ಟಿಕೇಟ್ ನೀಡಿ ಇಂದು ಪಶ್ಚಾತ್ತಾಪ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 2013ರಲ್ಲಿ, 2018ರಲ್ಲಿ ಸುಧಾಕರ್ ಶಾಸಕರಾಗಿ ನಮ್ಮ ಜೊತೆ ಇದ್ದರು. ನಂತರ ದುರಾಸೆಗೆ ಒಳಗಾಗಿ ಪಕ್ಷ ಬಿಟ್ಟು ಬಿಜೆಪಿ ಸೇರಿದರು' ಎಂದು ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಚಿವ ಅಶ್ವತ್ಥ್ ನಾರಾಯಣ ಮತ್ತು ಸುಧಾಕರ್ ಅವರು ಪತ್ರಿಕಾಗೋಷ್ಠಿ ಮಾಡಿ ನಮ್ಮ ಸರ್ಕಾರದ ಸಚಿವರ ಮೇಲೆ ಆರೋಪ ಮಾಡಿದ್ದಾರೆ. ಜಾರ್ಜ್ ಅವರು ವೈಟ್ ಟಾಪಿಂಗ್ ನಲ್ಲಿ ದುಡ್ಡು ಮಾಡಿದ್ದಾರೆ, ಸಿದ್ದರಾಮಯ್ಯ ಅವರು ರೀಡೂ ಮಾಡಿದ್ದಾರೆ ಎನ್ನುತ್ತಾರೆ, ಈ ರೀಡೂ ಪದವನ್ನು ಉಪಯೋಗಿಸಿದ್ದು ಹೈಕೋರ್ಟ್. ಸಿದ್ದರಾಮಯ್ಯ ಅವರ ಕಾಲದ ಆಡಿಟ್ ರಿಪೋರ್ಟ್ ಬಂದಿದೆ. ಭ್ರಷ್ಟಾಚಾರ ನಡೆದಿದೆ ಎನ್ನುತ್ತಾರೆ. ಇದೊಂದು ರೀತಿ ಭೂತದ ಬಾಯಲ್ಲಿ ಭಗವದ್ಗೀತೆ ಹಾಗಿದೆ. ರಾಜ್ಯದಲ್ಲಿ ಅತೀ ಭ್ರಷ್ಟ ಸಚಿವರು ಇದ್ದರೆ ಅದು ಸುಧಾಕರ್ ಅವರು ಎಂದು ಆರೋಪಿಸಿದರು.
'ಕೊರೋನ ಕಾಲದಲ್ಲಿ ನಡೆದ ಭ್ರಷ್ಟಾಚಾರವನ್ನು ಸದನದಲ್ಲಿ ಮಾತನಾಡಿದ್ದೆ. ಮಾಸ್ಕ್, ವೆಂಟಿಲೇಟರ್, ಹಾಸಿಗೆ, ಆಮ್ಲಜನಕ ಖರೀದಿಯಲ್ಲಿ ಸುಮಾರು 2,000 ಕೋಟಿ ಲಂಚ ಹೊಡೆದಿದ್ದೀರಿ ಎಂದು ದಾಖಲೆ ಸಮೇತ ಪ್ರಸ್ತಾಪ ಮಾಡಿದೆ, ಇದಕ್ಕೆ ಅಂದಿನ ಮುಖ್ಯಮಂತ್ರಿಗಳು ಉತ್ತರ ನೀಡಿಲ್ಲ, ಸುಧಾಕರ್ ಅವರು ನನ್ನ ದಾಖಲೆಗಳನ್ನು ಒಪ್ಪಿಕೊಂಡರೂ ಆರೋಪ ಒಪ್ಪಿಕೊಳ್ಳಲಿಲ್ಲ. ಉತ್ತರ ಕೊಡದೆ ತಪ್ಪಿಸಿಕೊಂಡರು' ಎಂದು ಹೇಳಿದರು.
''ನಮ್ಮ ಪಕ್ಷದ ನಾಯಕರೆಲ್ಲ ಮಧ್ಯರಾತ್ರಿ ವರೆಗೂ ಸುಧಾಕರನನ್ನು ಕೂರಿಸಿಕೊಂಡು ಆಪರೇಷನ್ ಕಮಲಕ್ಕೆ ಒಳಗಾಗಿ ಪಕ್ಷ ಬಿಟ್ಟು ಹೋಗಬೇಡಪ್ಪ ಎಂದು ಹೇಳಿದ್ದೆವು, ರಾತ್ರಿ ಪಕ್ಷ ಬಿಟ್ಟು ಹೋಗಲ್ಲ ಎಂದು ಪ್ರಮಾಣ ಮಾಡಿದ್ದ ಸುಧಾಕರ್ ಬೆಳಗಾಗುವುದರೊಳಗೆ ಬಾಂಬೆಗೆ ಹೊರಟುಹೋದ. ಇಂಥವರು ರಾಜಕೀಯ ಮೌಲ್ಯಗಳ ಬಗ್ಗೆ ಮಾತನಾಡೋದು ಅಸಹ್ಯ ತರಿಸುತ್ತದೆ''
- ಸಿದ್ದರಾಮಯ್ಯ, ವಿದಾನ ಸಭೆ ವಿರೋಧ ಪಕ್ಷದ ನಾಯಕರು