ಕೊರಗ ಭಾಷೆಯ ಪ್ರತಿ ಶಬ್ದಗಳನ್ನು ದಾಖಲಿಸುವ ಗುರಿ: ಡಾ.ಸಾಯಿಗೀತಾ

ಕುಂದಾಪುರ, ಜ.24: ಕೊರಗ ಭಾಷೆಯನ್ನು ದಾಖಲೀಕರಣ ಮಾಡುವ ಯೋಜನೆಯನ್ನು ನಿಟ್ಟೆ ವಿಶ್ವವಿದ್ಯಾನಿಲಯ ಕೈಗೆತ್ತಿಕೊಂಡಿದೆ. ಕೊರಗ ಭಾಷೆಯ ಪ್ರತಿ ಶಬ್ದಗಳನ್ನು ಕೂಡ ದಾಖಲಿಸುವ ಗುರಿ ಹೊಂದಿದ್ದೇವೆ. ಅದಕ್ಕಾಗಿ ಕೊರಗ ಸಮುದಾಯದ ಹಿರಿಯರು ಮಾಹಿತಿ ನೀಡಲು ಸಹಕರಿಸಬೇಕು ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥ ಡಾ.ಸಾಯಿ ಗೀತಾ ತಿಳಿಸಿದ್ದಾರೆ.
ನಿಟ್ಟೆ ವಿಶ್ವವಿದ್ಯಾನಿಲಯ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನಾ ಸಮಿತಿ ಉಡುಪಿ ಜಿಲ್ಲೆ ಮತ್ತು ಕೊರಗ ಸಂಘಟನೆಗಳ ಆಶ್ರಯದಲ್ಲಿ ಆಲೂರು ಗ್ರಾಮದ ಹಾಡಿಮನೆಯಲ್ಲಿ ಸೋಮವಾರ ಆಯೋಜಿಸಲಾದ ಕೊರಗ ಜನಪದ ದಾಖಲೀಖರಣ ಮತ್ತು ನಿಘಂಟು ಯೋಜನೆಯ ಮಾಹಿತಿ ಕಾರ್ಯಾಗಾರದಲ್ಲಿ ಅವರು ವಿಚಾರ ಮಂಡಿಸಿದರು.
ಕೊರಗ ಸಮುದಾಯದಲ್ಲಿ ಕಪ್ಪಡ ಕೊರಗ, ಸೊಪ್ಪುಕೊರಗ, ತೊಪ್ಪುಕೊರಗ, ಕುಂಟ್ಟು ಕೊರಗ ಎನ್ನುವ ನಾಲ್ಕು ಒಳ ಪಂಗಡಳಿವೆ. ಈ ನಾಲ್ಕು ಒಳಪಂಗಡಗಳ ಭಾಷೆ, ಜ್ಞಾನ ಎಲ್ಲವೂ ಬೇರೆ ಬೇರೆ ಆಗಿವೆ. ಭಾಷೆ ಗೊತ್ತಿರುವ ಸಮುದಾ ಯದವರೆ ದಾಖಲೀಕರಣ ಮಾಡುವ ಕೆಲಸವನ್ನು ನಡೆಸುತ್ತಿದ್ದಾರೆ. ಸಮು ದಾಯದ ವಿದ್ಯಾರ್ಥಿಗಳು, ಯುವಜನರು ಸಹ ದಾಖಲೀಕರಣಕ್ಕೆ ಸಹಾಯ ವಾಗಿ ಬರಹ ರೂಪದಲ್ಲಿ, ಆಡಿಯೋ ಮತ್ತು ವೀಡಿಯೊ ರೆಕಾರ್ಡ್ ಮಾಡಲು ಸಹಕಾರ ನೀಡಬೇಕು ಎಂದರು.
ಸಮುದಾಯ ಮತ್ತು ಕಲಿಕೆ ಎರಡು ಜೊತೆ ಜೊತೆಗೆ ಸಾಗಬೇಕು. ನಮ್ಮ ಕಸುಬುಗಳು ಮತ್ತು ಕಲಿಕೆ ಜೊತೆ ಜೊತೆಗೆ ಸಾಗಬೇಕು. ಭಾಷೆ ಉಳಿಸಬೇಕಾದರೆ ದಾಖಲೀಖರಣದ ಜೊತೆಗೆ ಮಕ್ಕಳಲ್ಲಿ ಭಾಷೆ ಬೆಳೆಯುವಂತೆ ಮಾಡಬೇಕು. ನಮ್ಮ ಹಿರಿಯರು ನಮ್ಮಿಂದ ದೂರ ಆದ ಹಾಗೆ ಒಂದಿಷ್ಟು ಜ್ಞಾನ ಕಳೆದು ಹೋಗುತ್ತದೆ. ಇಂದು ಭಾಷೆಯ ದಾಖಲಿಖರಣ ಮಾಡುವುದು ಕೂಡ ಅಗತ್ಯ ವಾಗಿದೆ ಎಂದು ಅವರು ಹೇಳಿದರು.
ಕಾರ್ಯಾಗಾರವನ್ನು ಸಮುದಾಯದ ಹಿರಿಯ ಮಹಿಳೆ ಕಾಳು ಕೊರಗ ಉದ್ಘಾಟಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೊರಗ ಸಮುದಾಯದ ಕುಷ್ಟು ಕೊರಗ ಯರುಕೊಣೇ, ಶಂಕರ ಬಾರಂದಾಡಿ, ಕಾಳು ಆಲೂರು, ಕರಿಯಮ್ಮ ಆಲೂರು, ಕೃಷ್ಣ ತೆಂಕಬೈಲು, ಮಾಸ್ತಿ ಹೆಮ್ಮಂಜೆ, ಕೊರಗ ನಾರ್ಕಳಿ, ರಾಮ ವಂಡ್ಸೆ, ಈರ ದೀಟಿ, ಹೊನ್ನಮ್ಮ ಕೊಣ್ಕಿ, ಐತಾ ನಂದ್ರೋಳಿ, ರಾಮ ಹೆರೂರು, ಸಂದೀಪ ಮಾರಣಕಟ್ಟೆ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆಲೂರು ಘಟಕದ ಅಧ್ಯಕ್ಷರು ಗಣೇಶ ಆಲೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಲೂರು ಗ್ರಾಪಂ ಅಧ್ಯಕ್ಷ ಜಯಲಕ್ಷ್ಮಿ, ಆಲೂರು ಗ್ರಾಪಂ ಉಪಾಧ್ಯಕ್ಷ ರವಿ ಶೆಟ್ಟಿ, ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಂಜಯ್ಯ ಶೆಟ್ಟಿ, ಸಾಹಿತಿ ಬಾಬು ಪಾಂಗಳ, ಉಡುಪಿ ಜಿಲ್ಲಾ ಕೊರಗ ಸಂಘದ ಜಿಲ್ಲಾ ಅಧ್ಯಕ್ಷರು ಗೌರಿ ಕೆಂಜೂರು, ದಕ್ಷಿಣ ಕನ್ನಡ ಜಿಲ್ಲಾ ಕೊರಗ ಸಂಘದ ಜಿಲ್ಲಾ ಅಧ್ಯಕ್ಷರು ಸುಂದರ ಕೊರಗ ಉಪಸ್ಥಿತರಿದ್ದರು.
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಅಧ್ಯಕ್ಷ ಶ್ರೀಧರ ನಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ್ ನಂದ್ರೋಳಿ ಸ್ವಾಗತಿಸಿ ದರು. ಸುರೇಶ್ ಹೇರೂರು ವಂದಿಸಿದರು. ರೇವತಿ ಆಲೂರು ಕಾರ್ಯಕ್ರಮ ನಿರೂಪಿಸಿದರು.
‘ಬುಟ್ಟಿ ಮಾಡುವ ಕೌಶಲ್ಯ ವಿಶಿಷ್ಟವಾದುದು’
ಇಂದು ಕೃಷಿ ಕ್ಷೇತ್ರದಲ್ಲಿ ಸಹ ಗಣನೀಯ ಬದಲಾವಣೆ ಆಗಿದೆ. ಅದೇ ಸಂದರ್ಭದಲ್ಲಿ ಆ ಕೃಷಿಯ ಜೊತೆಗಿನ ಶಬ್ದಗಳ ಬಳಕೆ ನಿಂತು ಹೋಗುತ್ತದೆ. ಅದಕ್ಕಾಗಿ ಭಾಷೆಯ ದಾಖಲೀಕರಣ ಎಂಬುದು ಮಹತ್ವದ್ದು ಎಂದ ಡಾ.ಸಾಯಿ ಗೀತಾ ಹೇಳಿದರು.
ಬುಟ್ಟಿ ಮಾಡುವ ಕೊರಗ ಸಮುದಾಯದ ಮಹಿಳೆಯ ಕೌಶಲ್ಯ ಮತ್ತು ಅದರ ಕುರಿತ ಜ್ಞಾನ ವಿಶಿಷ್ಟವಾದುದು. ಎಷ್ಟೇ ಶಿಕ್ಷಣ ಪಡೆದರು ಸಹ ಯಾರು ಕೂಡ ಯಾವುದೇ ಭಾಷೆಯ ಸಂಪೂರ್ಣ ವಿದ್ವಾಂಸರಲ್ಲ. ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಲು ಒಂದು ಜೀವಮಾನ ಕಾಲ ಸಾಕಾಗುವುದಿಲ್ಲ. ಮುಂದಿನ ಪೀಳಿಗೆಗೆ ಭಾಷೆಯನ್ನು ಉಳಿಸುವುದು ಅಗತ್ಯವಾಗಿದೆ ಎಂದರು.







