ಉಡುಪಿ: ಜ.25ರಿಂದ ರಾಷ್ಟ್ರಮಟ್ಟದ ಕರಕುಶಲ ವಸ್ತುಗಳ ಮೇಳ
ಉಡುಪಿ: ಉಡುಪಿ ಜಿಲ್ಲಾಡಳಿತ, ಉಡುಪಿ ಮತ್ತು ದ.ಕ. ಜಿಲ್ಲಾ ಪಂಚಾಯತ್, ಭಾರತ ಸರಕಾರ- ಗಾಂಧಿ ಶಿಲ್ಪ್ಬಝಾರ್, ಕರ್ನಾಟಕ ಸರಕಾರದ ಕರಕುಶಲ ಅಭಿವೃದ್ಧಿ ನಿಗಮ ಬೆಂಗಳೂರು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ ಇವುಗಳ ಸಹಯೋಗದೊಂದಿಗೆ ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆಯ ಪ್ರಯುಕ್ತ ರಾಷ್ಟ್ರಮಟ್ಟದ ಕರಕುಶಲ ವಸ್ತುಗಳ ಮತ್ತು ಸಂಜೀವಿನಿ ಸ್ವ ಸಹಾಯ ಗುಂಪುಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜ.25ರಿಂದ ಫೆ.3ರವರೆಗೆ ಬೈಲೂರು ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರದರ್ಶನವು ಜ.25ರಂದು ಸಂಜೆ 5.30ಕ್ಕೆ ಉದ್ಘಾಟನೆಗೊಳ್ಳಲಿದ್ದು, ಈ ಮೇಳವು ಪ್ರತೀ ದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8.30ರವರೆಗೆ ನಡೆಯ ಲಿದೆ. ಈ ವಸ್ತು ಪ್ರದರ್ಶನದಲ್ಲಿ ರಾಷ್ಟ್ರ ಮಟ್ಟದ ಗಾಂಧಿ ಶಿಲ್ಫ್ ಬಝಾರ್- ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವತಿಯಿಂದ ಬೇರೆ ಬೇರೆ ರಾಜ್ಯಗಳ ಆಕರ್ಷಕ ಕರಕುಶಲ ವಸ್ತುಗಳು ಕಣ್ಮನ ಸೆಳೆಯಲಿವೆ.
ಇವುಗಳಲ್ಲಿ ಪ್ರಮುಖವಾಗಿ ಆಂಧ್ರ ಪ್ರದೇಶದ ಟೆರಕೋಟ ವರ್ಕ್, ಗುಜರಾತ್ನ ಆರ್ಟ್ ಮೆಟಲ್ ವೇರ್, ಜಮ್ಮು ಕಾಶ್ಮೀರದ ಎಂಬ್ರಾಯಿಡರಿ ವರ್ಕ್ಸ್, ಕೇರಳದ ಟೆಕ್ಸ್ಟೈಲ್ಸ್, ಹ್ಯಾಂಡ್ ಎಂಬ್ರಾಯಿಡರಿ, ತೆಂಗಿನ ಚಿಪ್ಪಿನ ಉತ್ಪನ್ನಗಳು, ಮಧ್ಯಪ್ರದೇಶದ ಸೆಣಬಿನ ಉತ್ಪನ್ನಗಳು, ಚರ್ಮದ ಉತ್ಪನ್ನಗಳು, ಮಹಾರಾಷ್ಟ್ರದ ಫ್ಯಾನ್ಸಿ ಉತ್ಪನ್ನಗಳು, ರಾಜಸ್ಥಾನದ ಎಂಬ್ರಾಯಿಡರಿ ವರ್ಕ್ಸ್, ಪೈಂಟಿಂಗ್, ಬಳೆಗಳು, ಕನ್ಯಾಕುಮಾರಿಯಿಂದ ನ್ಯಾಚುರಲ್ ಪೈಬರ್, ಕರ್ನಾಟಕದ ಚೆನ್ನಪಟ್ಟಣ ಗೊಂಬೆಗಳು ಹೀಗೆ, ಭಾರತದ ವಿವಿಧ ರಾಜ್ಯಗಳಿಂದ ಪ್ರಸಿದ್ಧ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವು ಇದರ ವಿಶೇಷವಾಗಿದೆ.
ಗಾಂಧಿ ಶಿಲ್ಫ್ ಬಝಾರ್-100 ಕುಶಲಕರ್ಮಿಗಳ ಮಾರಾಟ ಮಳಿಗೆ ಹಾಗೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿದ ಉತ್ಪನ್ನಗಳ 130 ಮಹಿಳಾ ಉದ್ಯಮಿಗಳ ಮಾರಾಟ ಮಳಿಗೆಗಳು ಈ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ ಎಂದು ಉಡುಪಿ ಜಿಪಂ ಸಿಇಓ ಪ್ರಸನ್ನ ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







