90ರಿಂದ 110 ಸಿಡಿಗಳು ಸಿಕ್ಕಿವೆ, ಸಿಬಿಐ ತನಿಖೆಗೆ ಕೊಡಿ...: ರಮೇಶ್ ಜಾರಕಿಹೊಳಿ
''ಮಹಾನಾಯಕ'ನ ಕೈವಾಡ ಇದೆ ಅನ್ನೋದಕ್ಕೆ ಸಾಕ್ಷಿಗಳು ಇವೆ''
ಬೆಳಗಾವಿ: 'ಡಿ.ಕೆ. ಶಿವಕುಮಾರ್ ನನ್ನ ವೈಯಕ್ತಿಕ ಜೀವನ ಹಾಳು ಮಾಡಿದ್ದಾನೆ. ಅದನ್ನ ಗಟ್ಟಿಯಾಗಿ ನಿಂತು ಎದುರಿಸಿ ಹೊರಗೆ ಬಂದಿದ್ದೇನೆ. ಸಿಡಿ ಕೇಸ್ ಸಿಬಿಐಗೆ ಕೊಡಿಸುತ್ತೇನೆ. ಈ ಬಗ್ಗೆ ಅಮಿತ್ ಶಾ ಅವರಿಗೆ ಮಾತಾಡಿದ್ದೇನೆ, ಸಿಡಿಯಲ್ಲಿ ಮಹಾನಾಯಕನ ಕೈವಾಡ ಇದೆ ಅನ್ನೋದಕ್ಕೆ ಸಾಕ್ಷಿಗಳು ಇವೆ' ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, '40 ಕೋಟಿ ರೂ. ಖರ್ಚು ಮಾಡಿ ರಮೇಶ್ ಜಾರಕಿಹೊಳಿಯನ್ನ ಸಿಡಿ ಕೇಸಲ್ಲಿ ಸಿಕ್ಕಿಸಿ ಹಾಕಿಸಿದ್ದೇನೆ ಎಂದು ಸ್ವತಃ ಡಿಕೆಶಿಯೇ ಮಾತಾಡಿರುವ ಸಂಭಾಷಣೆ ನನಗೆ ಸಿಕ್ಕಿದೆ' ಎಂದು ಹೇಳಿದರು.
''90ರಿಂದ 110 ಸಿಡಿಗಳು'': 'ಸಿಡಿ ಕೇಸ್ನ ಇಬ್ಬರು ಪ್ರಮುಖ ಆರೋಪಿಗಳು ಶಿರಾ ಹಾಗೂ ದೇವನಹಳ್ಳಿ ಮೂಲದವರು. ದೇವನಹಳ್ಳಿ ಮೂಲದವನ ಮನೆ ಮೇಲೆ ದಾಳಿಯಾದಾಗ ಆತನ ಮನೆಯಲ್ಲಿ 90ರಿಂದ 110 ಸಿಡಿಗಳು ಸಿಕ್ಕಿವೆ. ಆತನ ಮನೆ ಮೇಲೆ ದಾಳಿ ಮಾಡಲು ಹೋದ ಅಧಿಕಾರಿಯೊಬ್ಬರ ಸಿಡಿಯೂ ಆ ವೇಳೆ ಸಿಕ್ಕಿದೆ' ಎಂದು ಆರೋಪಿಸಿದರು.
'ಮುಂದಿನ ವಾರ ದೆಹಲಿಗೆ ಹೋಗಿ ಅಮಿತ್ ಶಾ ಅವರನ್ನ ಭೇಟಿಯಾಗುತ್ತೇನೆ. ಸಿಬಿಐ ವಿಚಾರಣೆಗೆ ಕೊಟ್ಟು ಮಹಾನಾಯಕನ ಪೂರ್ತಿ ಕಳಚಬೇಕು, ಅವನಿಗೆ ಬುದ್ದಿ ಕಲಿಸಬೇಕು. ನಾನು ಒಬ್ಬನೇ ಸಂಕಷ್ಟ ಅನುಭವಿಸಿದ್ದು ಬೇರೆಯವರು ಸಂಕಷ್ಟಕ್ಕೆ ಸಿಲುಕಬಾರದು. ಬಹಳಷ್ಟು ಜನರನ್ನ ಬ್ಲ್ಯಾಕ್ ಮೇಲ್ ಮಾಡಲು ರೆಡಿಯಾಗಿದ್ದಾನೆ' ಎಂದು ರಮೇಶ್ ಜಾರಕಿಹೊಳಿ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
'ವೋಟ್ ಗೆ ಹಣ ಕೊಡ್ತೇನಿ ಅಂದಿಲ್ಲ'
''ಬೆಳಗಾವಿ ಗ್ರಾಮೀಣ ಕ್ಷೇತ್ರ ಬಿಟ್ಟು ಬೆಳಗಾವಿಯಲ್ಲಿ ಡಿಕೆಶಿಗೆ ಬೇರೆ ಕ್ಷೇತ್ರ ಕಾಣಿಸುತ್ತಿಲ್ವಾ?. ನಾನು ಅಭಿವೃದ್ಧಿ ವಿಚಾರಕ್ಕೆ ಹಣ ಕೊಡ್ತೇನಿ ಅಂತ ಹೇಳಿದ್ದೇನೆ. ವೋಟ್ ಗೆ ಹಣ ಕೊಡ್ತೇನಿ ಅಂದಿಲ್ಲ. ಚುನಾವಣಾ ಆಯೋಗ ಯಾವಾಗ ಬರುತ್ತೆ ನೀತಿ ಸಂಹಿತೆ ಜಾರಿಯಾದ ಬಳಿಕ. ಅಷ್ಟು ಜ್ಞಾನ ಕಾಂಗ್ರೆಸ್ ನಾಯಕರಿಗಿಲ್ಲ''
- ರಮೇಶ್ ಜಾರಕಿಹೊಳಿ, ಮಾಜಿ ಸಚಿವ
ಇದನ್ನೂ ಓದಿ >>> ಮತದಾರರ ಓಲೈಕೆಗೆ ಹಣದ ಆಮಿಷ ಆರೋಪ: ಸಿಎಂ ಸೇರಿ BJP ನಾಯಕರ ವಿರುದ್ಧ ಕಾಂಗ್ರೆಸ್ ದೂರು