ಶ್ರಮ ಆಧಾರಿತ ಸಮುದಾಯ ರಾಜಕಾರಣ ಅಗತ್ಯ: ಡಾ. ಧ್ವಾರಕನಾಥ್
ಭಾರತದ ಸಂವಿಧಾನ -ಧರ್ಮರಾಜಕಾರಣ ವಿಚಾರ ಸಂಕಿರಣ ಉದ್ಘಾಟನೆ

ಉಡುಪಿ: ಬ್ರಾಹ್ಮಣ, ಕ್ಷತ್ರಿಯ ವೈಶ್ಯ ಜಾತಿಗಳು ಅನುತ್ಪಾದಕ ಸಮು ದಾಯಗಳಾಗಿದ್ದರೆ, ಶೂದ್ರ ಅತಿ ಶೂದ್ರ, ದಲಿತ, ಆದಿವಾಸಿ, ಅಸ್ಪಶ್ಯ, ಅಲೆ ಮಾರಿಗಳು ಉತ್ಪಾದಕ ಸಮುದಾಯಗಳಾಗಿವೆ. ಇಂದು ಈ ಅನುತ್ಪಾದಕ ಸಮು ದಾಯಗಳು ಉತ್ಪಾದನಾ ಸಮುದಾಯದ ಮೇಲೆ ರಾಜಭಾರ ಮಾಡುತ್ತಿದೆ. ಈ ನಿಟ್ಟಿನಲ್ಲಿ ನಾವು ಬುದ್ದಿಪೂರ್ವಕ ಸಮುದಾಯದ ರಾಜಕಾರಣಕ್ಕಿಂತ ಶ್ರಮ ಆಧಾರಿತ ಸಮುದಾಯದ ರಾಜಕಾರಣವನ್ನು ಕಟ್ಟಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕನಾಥ್ ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿ ಉಡುಪಿ ಜಿಲ್ಲೆ ಇದರ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಗುರುವಾರ ಉಡುಪಿ ಮದರ್ ಸಾರೋಸ್ ಚರ್ಚಿನ ಡಾನ್ ಬೋಸ್ಕೊ ಹಾಲ್ನಲ್ಲಿ ಆಯೋಜಿಸ ಲಾದ ಭಾರತದ ಸಂವಿಧಾನ ಮತ್ತು ಧರ್ಮರಾಜಕಾರಣ ವಿಚಾರ ಸಂಕಿರಣ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಂಬೇಡ್ಕರ್ ಸಂವಿಧಾನವನ್ನು ಬರೆದಿಲ್ಲ ಎಂಬ ಅಪ್ರಪಚಾರ 1940-50 ರಲ್ಲಿ ಆರಂಭವಾಯಿತು. ಮನುಶಾಸ್ತ್ರದ ಅಂಶಗಳಿಲ್ಲ ಎಂಬ ಕಾರಣಕ್ಕೆ ಸಂವಿಧಾನ ವನ್ನು ವ್ಯಂಗ್ಯ ಮಾಡಿತು. ವೈದಿಕಶಾಹಿಗಳಿಗೆ ಸಂವಿಧಾನದಲ್ಲಿರುವ ಸಮಾನತೆ ತತ್ವವನ್ನು ಜೀರ್ಣಿಸಿಕೊಳ್ಳಲು ಆಗಿಲ್ಲ. ಅದಕ್ಕೆ ಅಪಪ್ರಚಾರ ಮಾಡಿಕೊಂಡು ಬಂತು. ಸಂವಿಧಾನ ರಚಿಸಲು ಏಳು ಮಂದಿಯ ಕಮಿಟಿ ರಚಿಸಿದ್ದರೂ ಅಂತಿಮ ವಾಗಿ ಅಂಬೇಡ್ಕರ್ ಒಬ್ಬರೇ ಬರೆದರು ಎಂದು ಅವರು ತಿಳಿಸಿದರು.
ವೈದಿಕಶಾಹಿ ವಿರುದ್ಧ ಹೋರಾಟ ಮಾಡಿಕೊಂಡು ಬಂದ ದಾಸರು, ಬಸವಣ್ಣ, ಗಾಂಧಿ ಸೇರಿದಂತೆ ಹಲವು ದಾರ್ಶನಿಕರು ಪ್ರತಿಪಾದಿಸಿದ ಎಲ್ಲ ತತ್ವಗಳ ಸಾರಂಶ ವನ್ನು ಅಂಬೇಡ್ಕರ್ ತಾವು ರಚಿಸಿದ ಸಂವಿಧಾನದಲ್ಲಿ ಕಟ್ಟಿಕೊಟ್ಟರು. ಇವರೆಲ್ಲರ ಸಾರಾಂಶಗಳನ್ನು ಸಂವಿಧಾನದ ಮೂಲಕ ಕಾನೂನಾತ್ಮಕವಾಗಿ ಅನುಷ್ಠಾನ ಮಾಡಲು ಸಾಧ್ಯವಾಗುತ್ತದೆ. ಈ ಸಂವಿಧಾನ ಜೀವ ಕೇಂದ್ರೀತವೇ ಹೊರತು ಮನುಷ್ಯ ಕೇಂದ್ರೀತವಲ್ಲ. ಆದುದರಿಂದ ಸಂವಿಧಾನ ಅತೀ ಪ್ರಾಮುಖ್ಯವಾಗಿದೆ ಎಂದರು.
ಸಂಘಪರಿವಾರ ಸಮಾನತೆ, ಸಹಬಾಳ್ವೆ, ಸಹೋದರತೆ ಜಾತ್ಯತೀತತೆ ಜೊತೆ ಮೂಲತಃ ಜೀವ ವಿರೋಧಿಗಳು. ಅವರು ಪ್ರತಿಪಾದಿಸುವ ಧರ್ಮ ಹಿಂದು ಧರ್ಮವೇ ಅಲ್ಲ. ಅದು ಬ್ರಾಹ್ಮಣ ಧರ್ಮ ಎಂಬುದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು. ಸರಕಾರ ಜಾರಿಗೆ ತರುತ್ತಿರುವ ಮತಾಂತರ ವಿರೋಧಿ ಕಾನೂನು ಸಂವಿಧಾನದ ಮೂಲತತ್ವಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.
ಉಡುಪಿ ಚರ್ಚಿನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಕರ್ನಾಟಕ -ಕೇರಳ ಕೊರಗ ಒಕ್ಕೂಟದ ಸುಂದರ್, ಪ್ರಗತಿಪರ ಚಿಂತಕ ಪ್ರೊ.ಫಣಿರಾಜ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇದ್ರೀಸ್ ಹೂಡೆ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವಿಠಲ್ದಾಸ್ ಬನ್ನಂಜೆ, ನೇತ್ರ ತಜ್ಞ ಡಾ.ಪ್ರೇಮ್ದಾಸ್ ಮುಖ್ಯ ಅತಿಥಿಗಳಾಗಿದ್ದರು.
ಅಧ್ಯಕ್ಷತೆಯನ್ನು ಐಕ್ಯತಾ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು ವಹಿಸಿದ್ದರು. ವೇದಿಕೆಯಲ್ಲಿ ಐಕ್ಯತಾ ಸಮಿತಿಯ ಪದಾಧಿಕಾರಿ ಗಳಾದ ಆನಂದ ಬ್ರಹ್ಮಾವರ, ಶೇಖರ್ ಹೆಜಮಾಡಿ, ಹರೀಶ್ ಸಾಲ್ಯಾನ್ ಮಲ್ಪೆ, ವಾಸುದೇವ ಮುದೂರು, ರಮೇಶ್ ಕೇಳಾರ್ಕಳಬೆಟ್ಟು, ವಿಶ್ವನಾಥ ಬೆಳ್ಳಂಪಳ್ಳಿ, ಸುಂದರ್ ಗುಜ್ಜರಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭಾ ಬಿಜೆಪಿ ಸದಸ್ಯೆ ಎಡ್ವಿನ್ ಕರ್ಕಡ ಅಂಬೇಡ್ಕರ್ ಯುವಸೇನೆಗೆ ಸೇರ್ಪಡೆಗೊಂಡರು. ಜಿಲ್ಲಾ ಸಂಚಾಲಕ ಸುಂದರ್ ಮಾಸ್ತರ್ ಸ್ವಾಗತಿಸಿದರು. ಜಯನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ಯಾಮ್ರಾಜ್ ಬಿರ್ತಿ ವಂದಿಸಿದರು. ಶಂಕರ್ದಾಸ್ ಚೆಂಡ್ಕಳ ಮತ್ತು ಮಂಜು ನಾಥ ಬಾಳ್ಕುದ್ರು ತಂಡದವರು ಹೋರಾಟದ ಹಾಡುಗಳನ್ನು ಹಾಡಿದರು. ದಿನಕರ ಎಸ್.ಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.
ಶೇ.1ರಷ್ಟಿರುವ ಮೇಲ್ವರ್ಗದವರಿಗೆ ಶೇ.10 ಮೀಸಲಾತಿ!
ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸಂವಿಧಾನದಲ್ಲಿ ಮೀಸಲಾತಿ ನೀಡಲಾಗಿದೆ. ಅದು ಯಾವುದೇ ಕಾರಣಕ್ಕೂ ಆರ್ಥಿಕ ಮೀಸಲಾತಿ ಆಗಬಾರದು ಎಂಬುದು ಅಂಬೇಡ್ಕರ್ ಉದ್ದೇಶವಾಗಿತ್ತು. ಆದರೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಮೀಸಲಾತಿಯು ಸಂವಿಧಾನ ವಿರೋಧಿಯಾಗಿದೆ ಎಂದು ಡಾ.ಸಿ.ಎಸ್. ದ್ವಾರಕನಾಥ್ ತಿಳಿಸಿದರು.
ಕರ್ನಾಟಕದಲ್ಲಿ ಮೀಸಲಾತಿ ಇಲ್ಲದ ಸಮುದಾಯಗಳು ಕೇವಲ ನಾಲ್ಕು. ಅವರ ಸಂಖ್ಯೆ ಶೇ.3-4ಮಾತ್ರ ಇರುವುದು. ಇದರಲ್ಲಿ ಆರ್ಥಿಕವಾಗಿ ಹಿಂದುಳಿದ ವರು ಕೇವಲ ಶೇ.1. ಅವರಿಗೆ ಶೇ.10ರಷ್ಟು ಮೀಸಲಾತಿ ಒದಗಿಸಲಾಗಿದೆ. ಇದನ್ನು ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿಯುತ್ತದೆ. ಯಾಕೆಂದರೆ ಅಲ್ಲಿ ಇರುವವರಿಗೆ ಜಾತಿ, ಸಾಮಾಜಿಕ ಸಮಸ್ಯೆಗಳು ಅರ್ಥ ಆಗುತ್ತಿಲ್ಲ. ಮೀಸಲಾತಿ ಎಂಬುದು ಬಡತನ ನಿರ್ಮೂಲನಾ ಕಾರ್ಯಕ್ರಮ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಮೀಸಲಾತಿ ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳು ಅನುಷ್ಠಾನ ಮಾಡಿಲ್ಲ. ಅದೇ ರೀತಿ ಕರ್ನಾಟಕ ದಲ್ಲೂ ಅನಷ್ಠಾನಕ್ಕೆ ತರಬಾರದು. ಆ ನಿಟ್ಟಿನಲ್ಲಿ ನಿರ್ಣಯ ತೆಗೆದುಕೊಂಡು ಹೋರಾಟ ನಡೆಸಬೇಕು. ಮೀಸಲಾತಿ ಎಂಬುದು ಹಲವು ತಲೆಮಾರುಗಳ ಕಾಲ ಪ್ರಾತಿನಿಧ್ಯ ಕಳೆದುಕೊಂಡ ಸಮುದಾಯಗಳಿಗೆ ನೀಡಿರುವ ಪ್ರಾತಿನಿಧ್ಯ ಎಂದು ಅವರು ಹೇಳಿದರು.

