ಭಾರತದ ವೈವಿಧ್ಯಮಯ ಸಂಸ್ಕೃತಿ, ಪರಂಪರೆಗೆ ಸಾಕ್ಷಿಯಾದ ಗಣರಾಜ್ಯೋತ್ಸವ ಪರೇಡ್
ಸೇನೆಯ ಆತ್ಮನಿರ್ಬರತೆ, ನಾರಿಶಕ್ತಿಯ ಅನಾವರಣ
![ಭಾರತದ ವೈವಿಧ್ಯಮಯ ಸಂಸ್ಕೃತಿ, ಪರಂಪರೆಗೆ ಸಾಕ್ಷಿಯಾದ ಗಣರಾಜ್ಯೋತ್ಸವ ಪರೇಡ್ ಭಾರತದ ವೈವಿಧ್ಯಮಯ ಸಂಸ್ಕೃತಿ, ಪರಂಪರೆಗೆ ಸಾಕ್ಷಿಯಾದ ಗಣರಾಜ್ಯೋತ್ಸವ ಪರೇಡ್](https://www.varthabharati.in/sites/default/files/images/articles/2023/01/26/365146-1674752929.jpeg)
ಹೊಸದಿಲ್ಲಿ: 74 ಗಣರಾಜ್ಯೋತ್ಸವವನ್ನು ದೇಶಾದ್ಯಂತ ಗುರುವಾರ ಸಡಗರ ಸಂಭ್ರಮದೊಂದಿಗೆ ಆಚರಿಸಲಾಯಿತು. ‘ಆತ್ಮನಿರ್ಭರತೆ’ಯನ್ನು ಸಾರುವ ಭಾರತದ ಮಿಲಿಟರಿ ಸಾಮರ್ಥ್ಯ, ನಾರಿಶಕ್ತಿ ಹಾಗೂ ದೇಶದ ವೈವಿಧ್ಯಮಯ ಮತ್ತು ಚೈತನ್ಯಶಾಲಿ ಸಾಂಸ್ಕೃತಿಕ ಪರಂಪರೆಯು ಹೊಸದಿಲ್ಲಿ ಕರ್ತವ್ಯಪಥದ ನಡೆದ ಗಣರಾಜ್ಯೋತ್ಸವ ಪರೇಡ್ ನಲ್ಲಿ ವಿಜೃಂಭಿಸಿದವು.
ಈ ಸಲದ ಗಣರಾಜ್ಯೋತ್ಸವ ಪರೇಡ್ನಲ್ಲಿ ‘ನಾರಿಶಕ್ತಿ’ ಮುಖ್ಯ ಥೀಮ್ ಆಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯ ಕುರಿತದ ಟ್ಯಾಬ್ಲೊಗಳು ಗಮನಸೆಳೆದವು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮೂರು ಸೇನಾಪಡೆಗಳ ವರಿಷ್ಠರು, ಹಲವಾರು ರಾಜಕೀಯ ನಾಯಕರು ಸೇರಿದಂತೆ ಹಲವಾರು ಗಣ್ಯರು, ಸಾಧಕರು ಗಣರಾಜ್ಯೋತ್ಸವ ಪರೇಡ್ ನಲ್ಲಿ ಉಪಸ್ಥಿತರಿದ್ದರು.
ಈ ಸಲದ ಗಣರಾಜ್ಯೋತ್ಸವ ಪರೇಡ್ಗೆ ವಿಶೇಷ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್-ಸಿಸಿ ಪಾಲ್ಗೊಂಡಿದ್ದರು.
ಇದೇ ಮೊದಲ ಬಾರಿಗೆ ಈಜಿಪ್ಟ್ ಸೇನೆಯ 144 ಸೈನಿಕರ ತಂಡ ಪರೇಡ್ ನಲ್ಲಿ ಭಾಗವಹಿಸಿ, ಈ ಸಲದ ಗಣರಾಜ್ಯೋತ್ಸಕ್ಕೆ ಮೆರುಗು ತಂದಿತು.
ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಹುತಾತ್ಮ ಯೋಧರಿಗೆ ಗೌರವ ಅರ್ಪಿಸುವುದರೊಂದಿಗೆ ಪರೇಡ್ ಗೆ ಚಾಲನೆ ದೊರೆಯಿತು.
ಸಾಂಪ್ರದಾಯಿಕವಾಗಿ 21 ಕುಶಾಲುತೋಪುಗಳೊಂದಿಗೆ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ರಾಷ್ಟ್ರಧ್ವಜವನ್ನು ಅರಳಿಸಲಾಗುತ್ತದೆ. ಆದರೆ ಈ ಬಾರಿ ಭಾರತ ನಿರ್ಮಿತ 105ಎಂಎಂ ಫೀಲ್ಡ್ ಗನ್ಗಳನ್ನು ಗೌರವರಕ್ಷೆಯನ್ನು ನೀಡುವ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಹೆಚ್ಚುತ್ತಿರುವ ಸ್ವಾವಲಂಬನೆಯನ್ನು ಜಗಜ್ಜಾಹೀರುಗೊಳಿಸಲಾಯಿತು.
ಸಮರ ನೌಕೆ ಅರ್ಜುನ, ನಾಗ ಕ್ಷಿಪಣಿ ವ್ಯವಸ್ಥೆ (ಎನ್ಎಎಂಐಎಸ್) ಹಾಗೂ ಕೆ-9 ವಜ್ರ ಸೇರಿದಂತೆ ಸ್ವದೇಶಿ ನಿರ್ಮಿತ ವಿವಿಧ ಮಿಲಿಟರಿ ಸಾಮಾಗ್ರಿಗಳನ್ನು ಪರೇಡ್ನಲ್ಲಿ ಪ್ರದರ್ಶಿಸಲಾಯಿತು.
ನಾರಿಶಕ್ತಿಯು ಈ ಸಲದ ಪರೇಡ್ನ ಥೀಮ್ ಆಗಿರುವ ಹಿನ್ನೆಲೆಯಲ್ಲಿ, ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ಸೇನಾಧಿಕಾರಿಣಿ ಲೆ.ಚೇತನ್ ಮುಂದಾಳತ್ವದಲ್ಲಿ ಪರೇಡ್ ನಲ್ಲಿ ಪ್ರದರ್ಶಿಸಲಾಯಿತು.
ಪದಾತಿದಳ, ಡೋಗ್ರಾ ರೆಜಿಮೆಂಟ್, ಪಂಜಾಬ್ ರೆಜಿಮೆಂಟ್, ಮರಾಠ ಲಘು ಪದಾತಿದಳ, ಬಿಹಾರ ರೆಜಿಮೆಂಟ್ ಹಾಗೂ ಗೂರ್ಖಾ ಬ್ರಿಗೇಡ್ನ ಯೋಧರು ಪರೇಡ್ ನಲ್ಲಿ ಭಾಗವಹಿಸಿದ್ದರು. ಗಡಿಭದ್ರತಾ ಪಡೆಯ ಒಂಟೆ ದಳವು ಕೂಡಾ ಈ ಸಲದ ಪರೇಡ್ನ ವಿಶೇಷ ಆಕರ್ಷಣೆಯಾಗಿತ್ತು.
ಭಾರತೀಯ ನೌಕಾಪಡೆ, ವಾಯುಪಡೆಯ ಯೋಧರು ಪರೇಡ್ನಲ್ಲಿ ಭಾಗವಹಿಸಿದ್ದು ಸ್ವದೇಶಿ ನಿರ್ಮಿತ ಸೇನಾ ಉಪಕರಣಗಳನ್ನು ಪ್ರದರ್ಶಿಸಿದರು. ತಲಾ ಮೂವರು ಪರಮವೀರ ಚಕ್ರ ಹಾಗೂ ಅಶೋಕ ಚಕ್ರ ಪುರಸ್ಕೃತರು ಕೂಡಾ ಪರೇಡ್ ನಲ್ಲಿ ಭಾಗವಹಿಸಿದರು.
ವಾಯುಪಡೆಯ 144 ಯೋಧರನ್ನೊಳಗೊಂಡ ತುಕಡಿಯ ನೇತೃತ್ವವನ್ನು ಸ್ಕ್ವಾಡ್ರನ್ ಲೀಡರ್ ಸಿಂಧು ರೆಡ್ಡಿ ವಹಿಸಿದ್ದು. ಗಡಿಯಾಚೆಗಿನ ಭಾರತೀಯ ವಾಯುಪಡೆಯ ಶಕ್ತಿ ಎಂಬ ಥೀಮ್ನ ಟ್ಯಾಬ್ಲೊ, ವಿದೇಶಗಳಲ್ಲಿ ಭಾರತೀಯ ವಾಯುಪಡೆಯ ಮಾನವೀಯ ನೆರವು ಹಾಗೂ ಮಿತ್ರರಾಷ್ಟ್ರಗಳೊಂದಿಗೆ ನಡೆಸುತ್ತಿರು ಸೇನಾಕವಾಯುತಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಐಎಎಫ್ ನ ಕಾರ್ಯವಿಸ್ತರಣೆಯನ್ನು ದೇಶದ ಜನತೆಯ ಮುಂದಿಟ್ಟಿತು.
ಕರ್ನಾಟಕ ಸೇರಿದಂತೆ 17 ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೊಗಳು ಪರೇಡ್ನಲ್ಲಿ ಭಾಗವಹಿಸಿದ್ದವು ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳ ಆರು ಟ್ಯಾಬ್ಲೊಗಳು ಕೂಡಾ ಪರೇಡ್ಗೆ ಮೆರುಗು ನೀಡಿದವು. ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ, ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ದೇಶದ ಪ್ರಗತಿಯನ್ನು ಈ ಟ್ಯಾಬ್ಲೊಗಳುಸೇರಿದಂತೆ ಕರ್ನಾಟಕ, ತಮಿಳುನಾಡು ಸೇರಿದಂತೆ ಬಹುತೇಕ ಟ್ಯಾಬ್ಲೊಗಳಲ್ಲಿ ನಾರಿಶಕ್ತಿಯನ್ನು ಮುಖ್ಯ ಥೀಮ್ ಆಗಿದ್ದವು.
1. ಪ್ರಪ್ರಥಮ ಬಾರಿಗೆ ಅಗ್ನಿಪಥ್ ಸೇನಾ ನೇಮಕಾತಿಯೋಜನೆಯಡಿ ಸೇನೆಗೆ ಸೇರ್ಪಡೆಗೊಂಡ ಆಗ್ನಿ ವೀರರು ಪರೇಡ್ನಲ್ಲಿ ಭಾಗವಹಿಸಿದ್ದರು.
2. ಬಿಎಸ್ಎಫ್ ಒಂಟೆಗಳ ತುಕಡಿಯ ಸವಾರರಾಗಿ ಇದೇ ಮೊದಲ ಬಾರಿಗೆ ಮಹಿಳಾ ಯೋಧರು ಪಾಲ್ಗೊಂಡರು.
3.ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸರ್ವ ಮಹಿಳಾ ತುಕಡಿ ಈ ಸಲದ ಪರೇಡ್ನ ಹೈಲೈಟ್ ಆಗಿತ್ತು. ಸಹಾಯಕ ಕಮಾಂಡೆಂಟ್ ಪೂನಂ ಗುಪ್ತಾ ನೇತೃತ್ವ ವಹಿಸಿದ್ದರು.
4. ಕ್ಯಾಪ್ಟನ್ ರೈಝಾದಾ ಶೌರ್ಯ ಬಾಲಿ ನೇತೃತ್ವದ 61ನೇ ಆಶ್ವರೋಹಿ ಪಡೆಯು ಭಾರತೀಯ ಸಶಸ್ತ್ರಪಡೆಗಳ ಪಥಸಂಚಲನದ ನೇತೃತ್ವವಹಿಸಿತ್ತು. 1953ರಲ್ಲಿ ರಚನೆಯಾದ ಆಶ್ವಾರೋಹಿ ದಳವು ಜಗತತಿನ ಏಕೈಕ ಆಶ್ವಾರೋಹಿ ಸೇನಾ ರೆಜಿಮೆಂಟ್ ಆಗಿದೆ.
5. ಸಿಗ್ನಲ್ ದಳದ 33 ಮಂದಿ ಯೋಧರು ಒಂಭತ್ತು ಮೋಟಾರ್ಸೈಕಲ್ ಗಳಲ್ಲಿ ಪ್ರದರ್ಶಿಸಿದ ಮಾನವ ಪಿರಮಿಡ್ ಸಾಹಸ ವೀಕ್ಷಕರನ್ನು ರೋಮಾಂಚನಗೊಳಿಸಿತು.
4. ಅರ್ಜುನ್ ಟ್ಯಾಂಕ್, ಆಕಾಶ್ ಕ್ಷಿಪಣಿ ವ್ಯವಸ್ಥೆ ಸೇರಿದಂತೆ ಸ್ವದೇಶಿ ನಿರ್ಮಿತ ಸೇನಾ ಉಪಕರಣಗಳನ್ನು ಪರೇಡ್ನಲ್ಲಿ ಪ್ರದರ್ಶಿಸಲಾಯಿತು.
5. ಕರ್ನಾಟಕ, ಕೇರಳ, ತಮಿಳುನಾಡು ಮಹಾರಾಷ್ಟ್ರ ಹಾಗೂ ತ್ರಿಪುರ ರಾಜ್ಯಗಳ ಟ್ಯಾಬ್ಲೊಗಳಲ್ಲಿ ನಾರಿ ಶಕ್ತಿ ಹಾಗೂ ಮಹಿಳಾ ಸಬಲೀಕರಣವು ಮುಖ್ಯ ಥೀಮ್ ಆಗಿತ್ತು.
6.ವಂದೇ ಭಾರತಂ ನೃತ್ಯ ಸ್ಪರ್ಧೆಯ ಮೂಲಕ ರಾಷ್ಟ್ರಾದ್ಯಂತ ಆಯ್ಕೆ ಮಾಡಲಾದ 479 ಕಲಾವಿದರು ಪರೇಡ್ನಲ್ಲಿ ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಿದರು. ಸೆಂಟ್ರಲ್ವಿಸ್ತಾ, ಕರ್ತವ್ಯ ಪಥದ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿರುವ ಕಾರ್ಮಿಕರ ತಂಡವನ್ನು, ಹಾಲು,ತರಕಾರಿ ಹಾಗೂ ಬೀದಿಬದಿ ವ್ಯಾಪಾರಿಗಳು ಈ ಸಲದ ಗಣರಾಜ್ಯೋತ್ಸವಕ್ಕೆ ಆಹ್ವಾನಿತರಾಗಿದ್ದರು.
7. ದಟ್ಟವಾದ ಮಂಜು, ಚಳಿಯ ವಾತಾವರಣವು ಪರೇಡ್ನ ವೀಕ್ಷಣೆಗೆ ಕೊಂಚ ಅಡ್ಡಿಯುಂಟು ಮಾಡಿತಾದರೂ, ಇದರಿಂದ ಪ್ರೇಕ್ಷಕರ ಉತ್ಸಾಹಕ್ಕೆ ಯಾವುದೇ ಕುಂದುಂಟಾಗಲಿಲ್ಲ.